ರಾಮನಗರ: ಜಿಲ್ಲೆಯ ಕನಕಪುರ ವಿಧಾನಸಭಾ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ತಮ್ಮನ್ನು ಬೆಂಬಲಿಸಿದ ಅಪಾರ ಅಭಿಮಾನಿಗಳಿಗೆ ಕೃತಜ್ಞತೆ ಸಮಾರಂಭದಲ್ಲಿ ಡಿಕೆ ಸುರೇಶ್ ಅವರು ಭಾವುಕರಾದರು.
ಇನ್ನು 18ನೇ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದಿಂದ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಡಿಕೆ ಸುರೇಶ್, ಮೈತ್ರಿ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್ ವಿರುದ್ಧ ಎರಡು ಲಕ್ಷಕ್ಕೂ ಅಧಿಕ ಮತಗಳ ಅಂತರದಿಂದ ಸೋಲು ಕಂಡಿದ್ದರು. ಈ ಚುನಾವಣೆಯಲ್ಲಿ ತಾವು ಸೋತ ಬಗ್ಗೆ ಮಾತನಾಡಿ, ಇದೊಂದು ಆಕಸ್ಮಿಕ ಸೋಲು ಇದು ಶಾಶ್ವತ ಸೋಲಲ್ಲ. ಸೋತೆ ಎಂದು ಕ್ಷೇತ್ರದಿಂದ ದೂರ ಉಳಿಯುವುದಿಲ್ಲ. ಜನರ ಒಳಿತಿಗಾಗಿ ಸದಾ ದುಡಿಯುತ್ತಿರುತ್ತೇನೆ ಎಂದರು
ಇದು ಚುನಾವಣಾ ಗೆಲುವಲ್ಲ, ನನ್ನ ಮೇಲಿನ ಆಕ್ರೋಶದ ಗೆಲುವಾಗಿದೆ. ಈ ಕ್ಷೇತ್ರದಲ್ಲಿ ಬಿಜೆಪಿಯೂ ಗೆದ್ದಿಲ್ಲ, ಜೆಡಿಎಸ್ ಕೂಡಾ ಗದ್ದಿಲ್ಲ ಎಂದು ಭಾವುಕರಾಗಿ ನುಡಿದರು.
ರಾಜಕೀಯವೆಂದರೆ ಅಧಿಕಾರವಲ್ಲ. ಅಧಿಕಾರಕ್ಕಾಗಿ ನಾನು ಯಾವತ್ತು ಆತುರ ಬಿದ್ದಿಲ್ಲ. ನಿಮ್ಮಲ್ಲಿ ಒಬ್ಬನಾಗಿ ಕೆಲಸ ಮಾಡಿದ್ದೇನೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಜತೆ ಸೇರಿ ಅಭಿವೃದ್ಧಿ ಕೆಲಸ ಮುಂದುವರೆಸಲು ಕಂಕಣ ಬದ್ಧನಾಗಿದ್ದೇನೆ ಎಂದು ಹೇಳಿದರು.