ಚಿಕ್ಕಮಗಳೂರು: ತಾಲ್ಲೂಕಿನ ಇನಾಂ ದತ್ತಾತ್ರೇಯ ಬಾಬಾಬುಡನ್ ಸ್ವಾಮಿ ದರ್ಗಾದಲ್ಲಿ ಕಳೆದ 9 ದಿನಗಳಿಂದ ನಡೆಯುತ್ತಿದ್ದ ದತ್ತ ಜಯಂತಿಗೆ ಶಾಂತಿಯುತ ತೆರೆಬಿದ್ದಿದೆ.
ದಕ್ಷಿಣ ಅಯೋಧ್ಯೆ ಎಂದೇ ಖ್ಯಾತಿಯಾಗಿರುವ ಧಾರ್ಮಿಕ ಹಾಗೂ ವಿವಾದಿತ ಪ್ರದೇಶ ದತ್ತಪೀಠದಲ್ಲಿ ಮುಂಜಾನೆಯಿಂದಲೇ ಸಾವಿರಾರು ಮಂದಿ ಭಾರೀ ಭದ್ರತೆ ನಡುವೆ ದತ್ತಪಾದುಕೆ ದರ್ಶನ ಪಡೆದು ಪುನೀತರಾದರು.
ನಾಲ್ಕು ಸಾವಿರಕ್ಕೂ ಅಧಿಕ ಪೊಲೀಸರ ಕಣ್ಗಾವಲಿನಲ್ಲಿ 15 ಸಾವಿರ ಮಂದಿ ಸಾರ್ವಜನಿಕರು ಪಾದುಕೆ ದರ್ಶನ ಪಡೆದರು.
ಸಾರ್ವಜನಿಕರು ಪಾದುಕೆ ದರ್ಶನಕ್ಕೆ ಬರುವ ವೇಳೆ ದತ್ತಪೀಠ ಸಂಪೂರ್ಣ ಹಿಂದುಗಳ ಪೀಠವಾಗಬೇಕು. ಗೋರಿಗಳನ್ನು ಸ್ಥಳಾಂತರಿಸಬೇಕು ಎಂಬ ಆಕ್ರೋಶದ ಘೋಷಣೆ ಕೂಗಿದ್ದಾರೆ. ಇದರ ನಡುವೆ ಮೊದಲ ಬಾರಿಗೆ ಶ್ರೀರಾಮಸೇನೆ, ಭಜರಂಗದಳ ಹಾಗೂ ವಿಶ್ವಹಿಂದೂ ಪರಿಷದ್ ನಾಯಕರು ಒಟ್ಟಿಗೆ ಸೇರಿ ಒಗ್ಗಟ್ಟಿನ ಮಂತ್ರ ಪಠಿಸಿದರು.
ಇನ್ನು ದತ್ತಾತ್ರೇಯರ ಗುಹೆ ಸಮೀಪದಲ್ಲಿಯೇ ಹೋಮ-ಹವನ ನಡೆದಿದ್ದು, ದತ್ತಮಾಲಾಧಾರಿಗಳು ಇರುಮುಡಿ ಹೊತ್ತು ಕಾಲ್ನಡಿಗೆಯಲ್ಲಿ ಬಂದು ದತ್ತಪಾದುಕೆ ದರ್ಶನ ಮಾಡಿದರು.
ಈ ಮೂಲಕ ಕಳೆದ 9 ದಿನಗಳಿಂದ ವ್ರತ ಆಚರಣೆಯೊಂದಿಗೆ ನಡೆದ ದತ್ತಜಯಂತಿ ಶಾಂತಿಯುತವಾಗಿ ಸಂಪನ್ನಗೊಂಡಿತು.