ರಾಮನಗರ: ಈ ಬಾರಿಯ ಕೇಂದ್ರ ಬಜೆಟ್ ಬಿಹಾರಕ್ಕೆ ಬಂಪರ್ ಅನುದಾನ ನೀಡಿ, ನಮ್ಮ ರಾಜ್ಯಕ್ಕೆ ಬೋಗಸ್ ಮತ್ತು ಬಂಡಲ್ ಬಜೆಟ್ ನೀಡಿದ್ದಾರೆ ಎಂದು ಕೇಂದ್ರ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.
ಚನ್ನಪಟ್ಟದಲ್ಲಿ ಇಂದು(ಫೆಬ್ರವರಿ.2) ಕಾಂಗ್ರೆಸ್ ಕೃತಜ್ಞತಾ ಸಮಾವೇಶದಲ್ಲಿ ಈ ಬಗ್ಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರ ಇಡೀ ದಕ್ಷಿಣ ಭಾರತಕ್ಕೆ ಅನ್ಯಾಯ ಮಾಡಿದ್ದಾರೆ. ನಮ್ಮ ರಾಜ್ಯದಿಂದ 5 ಲಕ್ಷ ಕೋಟಿ ರೂ. ಅಧಿಕ ತೆರಿಗೆ ಕೇಂದ್ರದ ಖಾತೆಗೆ ಜಮಾ ಆಗುತ್ತಿದೆ. ಆದರೆ ನಮ್ಮ ರಾಜ್ಯಕ್ಕೆ ಕೇಂದ್ರದಿಂದ ಯಾವುದೇ ಯೋಜನೆಗೆ ಅನುಮೋದನೆ ನೀಡಿಲ್ಲ. ಇದನ್ನು ಸರಿಪಡಿಸದಿದ್ದರೆ ಬಹುಶಃ ಅನುದಾನಕ್ಕಾಗಿ ಬೇರೆ ಬೇರೆ ರೀತಿಯಲ್ಲಿ ಆಗ್ರಹಿಸಬೇಕಾಗುತ್ತದೆ. ಬಳಿಕ ಕೇಂದ್ರಕ್ಕೆ ಅದನ್ನು ಕಷ್ಟವಾಗಬಹುದು. ಕೇಂದ್ರ ಸರ್ಕಾರಕ್ಕೆ ಕೇವಲ ಚುನಾವಣೆಯಷ್ಟೇ ಮುಖ್ಯ. ಅವರಿಗೆ ಅಭಿವೃದ್ಧಿ ವಿಚಾರ ಮುಖ್ಯ ಅಲ್ಲ ಎಂದು ವಾಗ್ದಾಳಿ ನಡೆಸಿದರು.
ಈ ಬಜೆಟ್ನಿಂದ ಮಧ್ಯಮ ವರ್ಗಕ್ಕೆ ಒಂದಿಷ್ಟು ತೆರಿಗೆ ವಿನಾಯಿತಿ ನೀಡಿದ್ದು, ರೈತರು, ಮಹಿಳೆಯರು, ಯುವಜನತೆ ಹಾಗೂ ದಲಿತರ ಹೆಸರು ಹೇಳಿದ್ದಾರೆ. ಆದರೆ ನೊಂದಿರುವ ಸಾರ್ವಜನಿಕರಿಗೆ ಯಾವ ರೀತಿಯ ಯೋಜನೆ ಮಾಡುತ್ತೇವೆ ಎಂದು ಹೇಳಿಲ್ಲ. ಹೀಗಾಗಿ ಕನ್ನಡಿಗರು ಎಚ್ಚೆತ್ತುಕೊಳ್ಳುವ ಕಾಲ ಹತ್ತಿರ ಬಂದಿದೆ. ಇದು ರಾಜಕೀಯ ಹೇಳಿಕೆ ಅಲ್ಲ. ಕನ್ನಡಿಗರು ಮಲಗಿದರೆ ನಮ್ಮನ್ನು ಮುಗಿಸುತ್ತಾರೆ. ಕರ್ನಾಟಕದ ನಿಮ್ಮ ಮಕ್ಕಳನ್ನು ಬೇರೆಯವರು ಆಳುವ ಸ್ಥಿತಿ, ಬೇರೆಯವರ ಹತ್ರ ಕೂಲಿ ಮಾಡುವ ಪರಿಸ್ಥಿತಿ ಬರುತ್ತದೆ ಎಂದು ಹೇಳಿದರು.