Mysore
25
light rain

Social Media

ಗುರುವಾರ, 18 ಜೂನ್ 2026
Light
Dark

ಕಾಂಗ್ರೆಸ್ ಸೇಡಿನ ರಾಜಕೀಯ ಮಾಡುತ್ತಿದೆ : ಬಿಎಸ್​ ಯಡಿಯೂರಪ್ಪ

ಬೆಂಗಳೂರು : ಈ ತಿಂಗಳ ಅಂತ್ಯದಲ್ಲಿ ಮೂರು ದಿನ ವಿಧಾನಸೌಧ ಅಥವಾ ಫ್ರೀಡಂಪಾರ್ಕ್​ನಲ್ಲಿ ಸತ್ಯಾಗ್ರಹ ಮಾಡ್ತೇನೆ. ನಾಳೆ ಸತ್ಯಾಗ್ರಹದ ದಿನಾಂಕ ನಿಗದಿ ಮಾಡುತ್ತೇನೆ ಎಂದು ಬೆಂಗಳೂರಿನಲ್ಲಿ ಮಾಜಿ ಸಿಎಂ ಬಿ.ಎಸ್​.ಯಡಿಯೂರಪ್ಪ ಅವರು ತಿಳಿಸಿದ್ದಾರೆ. ಮುನಿರತ್ನ ಕ್ಷೇತ್ರದಲ್ಲಿ ಸರ್ಕಾರ ಸೇಡಿನ ರಾಜಕಾರಣ ಮಾಡುತ್ತಿದೆ. ಅಭಿವೃದ್ಧಿ ಕೆಲಸಗಳಿಗೆ ಅನುದಾನ ನಿಲ್ಲಿಸಿ ಗೊಂದಲ ಮಾಡಿದ್ದಾರೆ. ರಾಜ್ಯದಲ್ಲಿ ಎಲ್ಲೂ ಕೂಡ ಗುತ್ತಿಗೆದಾರರು ಕೆಲಸ ಮಾಡುತ್ತಿಲ್ಲ. ಹಳೇ ಕೆಲಸಕ್ಕೂ 7ರಿಂದ 8 ಪರ್ಸೆಂಟ್​ ಕಮಿಷನ್ ಕೇಳುತ್ತಿದ್ದಾರೆ. ಈ ರೀತಿಯ ಸೇಡಿನ ರಾಜಕಾರಣ ನಿರೀಕ್ಷೆ ಮಾಡಿರಲಿಲ್ಲ. ಬೆಳಗಾವಿ ಅಧಿವೇಶನಕ್ಕೂ ಮುನ್ನ ಸಾಂಕೇತಿಕ ಸತ್ಯಾಗ್ರಹ ಮಾಡ್ತೇವೆ. ಬೆಳಗಾವಿ ಅಧಿವೇಶನದಲ್ಲಿ ಚರ್ಚಿಸಲು ನಮ್ಮ ಶಾಸಕರಿಗೆ ಹೇಳುತ್ತೇನೆ ಎಂದು ಕಾಂಗ್ರೆಸ್ ವಿರುದ್ಧ ಬಿ.ಎಸ್​.ಯಡಿಯೂರಪ್ಪ ವಾಗ್ದಾಳಿ ನಡೆಸಿದ್ದಾರೆ.

ಇಂದು ಬೆಂಗಳೂರು ನಗರ ಪ್ರದಕ್ಷಿಣೆ ಕೈಗೊಂಡಿದ್ದ ಮಾಜಿ ಸಿಎಂ ಯಡಿಯೂರಪ್ಪ ರಾಜರಾಜೇಶ್ವರಿ ನಗರ ಕ್ಷೇತ್ರದಲ್ಲಿ ರೌಂಡ್ಸ್ ಹಾಕಿದರು. ಆರ್​.ಆರ್.ನಗರ ಕ್ಷೇತ್ರದಲ್ಲಿ ಸ್ಥಗಿತಗೊಂಡ ಕಾಮಗಾರಿಗಳ ವೀಕ್ಷಣೆ ಮಾಡಿದರು. ಈ ವೇಳೆ ಮಾತನಾಡಿದ ಅವರು ಕಾಂಗ್ರೆಸ್ ವಿರುದ್ಧ ಕಿಡಿಕಾರಿದ್ದಾರೆ.

ಮುನಿರತ್ನ ಕ್ಷೇತ್ರದಲ್ಲಿ ಸೇಡಿನ ರಾಜಕಾರಣ ನಡೆಯುತ್ತಿದೆ. ಅಭಿವೃದ್ಧಿ ಕಾರ್ಯಗಳಿಗೆ ಹಣ ಮಂಜೂರು ಮಾಡಿ ಅರ್ಧಂಬರ್ಧ ಕೆಲಸ ನಿಲ್ಲಿಸಿ ಗೊಂದಲ ಮಾಡಿದ್ದಾರೆ. ಸತ್ಯಾಗ್ರಹ ಮಾಡಿ ಸರ್ಕಾರಕ್ಕೆ ಎಚ್ಚರಿಕೆ ಕೊಡುತ್ತೇನೆ. ರಾಜ್ಯದಲ್ಲಿ ಎಲ್ಲೂ ಕೂಡಾ ಗುತ್ತಿಗೆದಾರರು ಕೆಲಸ ಮಾಡುತ್ತಿಲ್ಲ. ಹಳೆಯ ಕೆಲಸಕ್ಕೂ 7-8 % ಕಮಿಷನ್ ಕೇಳುತ್ತಿದ್ದಾರೆ. ಈ ರೀತಿಯ ಸೇಡಿನ ರಾಜಕಾರಣ ನಿರೀಕ್ಷೆ ಮಾಡಿರಲಿಲ್ಲ. ರಾಜರಾಜೇಶ್ವರಿ ನಗರದಲ್ಲಿ ಕೆಲವು ರಸ್ತೆ ನೋಡಿದಾಗ ಹಳ್ಳಿಯಲ್ಲಿದ್ದೇವೋ ಎಂಬ ಅನುಮಾನ ಬರುತ್ತದೆ. ಬೆಳಗಾವಿ ಅಧಿವೇಶನಕ್ಕೂ ಮೊದಲು ಸಾಂಕೇತಿಕ ಸತ್ಯಾಗ್ರಹ ಮಾಡುತ್ತೇವೆ. ರಾಜರಾಜೇಶ್ವರಿ ನಗರದ 126 ಕೋಟಿ ಅನುದಾನ ವಾಪಸ್ ಕೊಡಿಸಲು ಸರ್ಕಾರದ ಜೊತೆ ಮಾತಾಡಲು ಇದುವರೆಗೆ ನನಗೆ ಯಾರೂ ಸಿಕ್ಕಿಲ್ಲ. ಮಾತಾಡುತ್ತೇನೆ, ಪ್ರಯತ್ನ ಮಾಡುತ್ತೇನೆ. ಮಾಡಲಿಲ್ಲ ಅಂದರೆ ಹೋರಾಟ ಅನಿವಾರ್ಯ. ಅದನ್ನು ನಮಗೆ ಹೊಸದಾಗಿ ಹೇಳಿಕೊಡಬೇಕಾಗಿಲ್ಲ. ಗುತ್ತಿಗೆದಾರರು ಕೆಲಸ ಮಾಡಲು ರೆಡಿ ಇಲ್ಲ, ಬಿಟ್ಟು ಓಡಿ ಹೋಗುತ್ತಿದ್ದಾರೆ. ಬೆಳಗಾವಿ ಅಧಿವೇಶನದಲ್ಲಿ ಚರ್ಚೆ ಮಾಡಲು ನಮ್ಮ ಶಾಸಕರಿಗೆ ಹೇಳುತ್ತೇನೆ ಎಂದರು.

ಇನ್ನು ದೀಪಾವಳಿ ಬಳಿಕ ಕಾಂಗ್ರೆಸ್ ಗೆ ಶಾಸಕರು ಹೋಗುವ ವಿಚಾರ ಸಂಬಂಧ ಪ್ರತಿಕ್ರಿಯೆ ನೀಡಿದ ಬಿಎಸ್​ವೈ, ಯಾರು ಎಲ್ಲಿ ಬೇಕಾದರೂ ಹೋಗಲಿ. ಅದರ ಬಗ್ಗ ನಾನು ಚಿಂತೆ ಮಾಡುತ್ತಿಲ್ಲ. ವಿಪಕ್ಷವಾಗಿ ಕೆಲಸ ಮಾಡುವ ಬಗ್ಗೆ ನಾನು ಯೋಚನೆ ಮಾಡುತ್ತಿದ್ದೇನೆ. ಬೇರೆ ವಿಷಯದ ಬಗ್ಗೆ ಚರ್ಚೆ ಮಾಡಲು ನಾನು ಇಷ್ಟಪಡಲ್ಲ ಎಂದರು. ಇದೇ ವೇಳೆ ಅನುದಾನ ತಡೆ ಹಿಡಿಯಲು ಅಕ್ರಮ ಕಾಮಗಾರಿಗಳು ಕಾರಣ ಎಂಬ ಡಿಸಿಎಂ ಹೇಳಿಕೆ ವಿಚಾರ ಸಂಬಂಧ ಬಿಎಸ್​ವೈ ಮಾತನಾಡಿದ್ದು, ಅಕ್ರಮ ಕಾಮಗಾರಿ ಆಗಿದ್ದರೆ ಅದನ್ನು ತನಿಖೆ ಮಾಡಿಸಿ ಕ್ರಮ ತೆಗೆದುಕೊಳ್ಳಲಿ. ಅದನ್ನು ಬಿಟ್ಟು ಎಲ್ಲಾ ಕಾಮಗಾರಿಗಳನ್ನು ತಡೆ ಹಿಡಿಯುವುದು ಎಷ್ಟು ಸರಿ? ಇದನ್ನು ನಾನು ಡಿ.ಕೆ. ಶಿವಕುಮಾರ್ ಅವರಿಗೆ ಕೇಳುತ್ತೇನೆ. ಇದು ಸೇಡಿನ ರಾಜಕಾರಣವಲ್ಲದೇ ಬೇರೆ ಅಲ್ಲ. ಈ ರೀತಿ ಮಾಡಬಾರದು ಎಂದು ಸರ್ಕಾರವನ್ನು ಒತ್ತಾಯಿಸುತ್ತೇನೆ ಎಂದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!