ಕೊಡಗು/ಮಡಿಕೇರಿ: ಕೇಂದ್ರ ಸರ್ಕಾರದ ಬಜೆಟ್ ಮೇಲೆ ನಮಗೆ ನಿರೀಕ್ಷೆ ಇದ್ದರೂ ಅದು ಹುಸಿಯಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.
ಭಾಗಮಂಡಲದಲ್ಲಿ ಇಂದು(ಜನವರಿ.31) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರದಿಂದ ರಾಜ್ಯಕ್ಕೆ ಬರಬೇಕಾದ ಅನುದಾನವನ್ನು ಕೇಳಲಾಗಿತ್ತು. ನಮಗೆ ಅನುದಾನ ಕಡಿಮೆಯಾಗುತ್ತಿರುವ ಬಗ್ಗೆ ದೆಹಲಿಗೆ ಹೋಗಿ ಮನವರಿಕೆ ಕೂಡ ಮಾಡಿದ್ದೇವೆ. ಅಲ್ಲಿಯೇ ಮಂತ್ರಿ, ಸಂಸದರು ಸೇರಿ ಪ್ರತಿಭಟನೆಯನ್ನೂ ಮಾಡಿದ್ದೇವೆ. 2023-24ನೇ ಸಾಲಿನ ಬಜೆಟ್ನಲ್ಲಿ 5,300 ಕೋಟಿ ರೂ. ನೀಡುವುದಾಗಿ ಘೋಷಿಸಿದ್ದರು. ಆದರೆ ಇಂದಿನವರೆಗೂ ಕೇಂದ್ರದಿಂದ ಒಂದು ಪೈಸೆ ಕೂಡ ನೀಡಿಲ್ಲ. ಹೀಗಾಗಿ ಕೇಂದ್ರದಿಂದ ಈ ಬಾರಿಯ ಬಜೆಟ್ ಬಗ್ಗೆ ನಿರೀಕ್ಷೆ ಪಡೆಯಲಿದ್ದು, ಅದು ಹುಸಿಯಾಗಲಿದೆ ಎಂಬುದೂ ತಿಳಿಯಲಿದೆ ಎಂದು ಹೇಳಿದರು.
ಕೇಂದ್ರ ಸರ್ಕಾರದಿಂದ ನಮ್ಮ ರಾಜ್ಯಕ್ಕೆ ನೀಡುವ ಅನುದಾನದ ಬಗ್ಗೆ ನಿರೀಕ್ಷೆಯೇ ಇಲ್ಲ ಎಂದು ಹೇಳಲು ಸಾಧ್ಯವಿಲ್ಲ. ಒಕ್ಕೂಟದ ವ್ಯವಸ್ಥೆಯಲ್ಲಿರುವಾಗ ನಮ್ಮ ರಾಜ್ಯದಿಂದ ಕೇಂದ್ರ ಸರ್ಕಾರಕ್ಕೆ ತೆರಿಗೆ ನೀಡುತ್ತೇವೆ. ಅದಕ್ಕೆ ಸರಿಯಾಗಿ ಅನುದಾನ ತೆಗೆದುಕೊಳ್ಳಲು ನ್ಯಾಯಯುತವಾಗಿ ಬರಬೇಕಾದ ತೆರಿಗೆ ಪಾಲು ಪಡೆದುಕೊಳ್ಳಲು ನಿರಂತರವಾದ ಪ್ರಯತ್ನ ಪಡುತ್ತೇವೆ ಎಂದರು.
2016ರಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ನಾನೇ ಭಾಗಮಂಡಲ ಮೇಲ್ಸೇತುವೆ ಯೋಜನೆಗೆ ಮಂಜೂರಾತಿ ನೀಡಿದ್ದೆ. ಅಲ್ಲದೇ 2017ರಲ್ಲಿ ಕಾಮಗಾರಿ ಪ್ರಾರಂಭವಾಗಿತ್ತು. ಬಳಿಕ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದ ಮೇಲೆ ಕಾಮಗಾರಿ ಪೂರ್ಣಗೊಳ್ಳಲಿಲ್ಲ.ನ ಆದರೆ ಇದೀಗ ನಾವು ಮತ್ತೆ ಅಧಿಕಾರಕ್ಕೆ ಬಂದಿದ್ದೇವೆ. ಹೀಗಾಗಿ ಸರ್ಕಾರದ ವತಿಯಿಂದ ಕಾಮಗಾರಿಗೆ ಬೇಕಾದ ಅನುದಾನವನ್ನು ಶೀಘ್ರದಲ್ಲಿ ನೀಡಿ, ಕಾಮಗಾರಿ ಪೂರ್ಣಗೊಳಿಸಲಾಗುತ್ತದೆ ಎಂದು ಭರವಸೆ ನೀಡಿದರು.
ವನ್ಯ ಪ್ರಾಣಿಗಳೊಂದಿಗೆ ಮಾನವ ಸಂಘರ್ಷ ತಪ್ಪಿಸುವ ಕಾರ್ಯ ಮಾಡಲಾಗುತ್ತದೆ
ವನ್ಯಜೀವಿ ಮತ್ತು ಮಾನವ ಸಂಘರ್ಷ ರಾಜ್ಯದ ಕಾಂಡಂಚಿನ ಪ್ರದೇಶಗಳಲ್ಲಿ ಸಾಮಾನ್ಯವಾಗಿದೆ. ಒಂದೆಡೆ ಆನೆ, ಚಿರತೆ, ಹುಲಿ ಸೇರಿದಂತೆ ಮತ್ತಿತರ ಪ್ರಾಣಿಗಳು ರಾಜ್ಯದಲ್ಲಿ ಹೆಚ್ಚಾಗುತ್ತಿವೆ. ಮತ್ತೊಂದೆಡೆ ವನ್ಯ ಪ್ರಾಣಿಗಳು ಆಹಾರಗೋಸ್ಕರ, ನೀರಿಗೋಸ್ಕರ ನಾಡಿನತ್ತ ಮುಖಮಾಡುತ್ತಿವೆ. ಹೀಗಾಗಿ ಬ್ಯಾರಿಕೇಡ್ ಅಳವಡಿಸುವ ಕಾರ್ಯ ನಡೆಯುತ್ತಿದೆ. ಪ್ರಾಣಿಗಳು ಕಾಡಿನಿಂದ ಹೊರಬರದಂತೆ ತಡೆಯುವ ಪ್ರಯತ್ನವನ್ನು ಮಾಡಲಾಗುತ್ತದೆ ಎಂದು ತಿಳಿಸಿದರು.
ವನ್ಯಪ್ರಾಣಿಗೊಳೊಂದಿಗಿನ ಮಾನವ ಸಂಘರ್ಷ ತಪ್ಪಿಸುವ ಕಾರ್ಯ ಮಾಡಲಾಗುತ್ತದೆ ಎಂದರು.
ಸಿ ಮತ್ತು ಡಿ ಭೂಮಿಯನ್ನು ಮೀಸಲು ಅರಣ್ಯಕ್ಕೆ ಸೇರ್ಪಡಿಸುವ ಕಾರ್ಯಕ್ಕೆ ಜಿಲ್ಲೆಯಲ್ಲಿ ವಿರೋಧ ವ್ಯಕ್ತವಾಗುತ್ತಿರುವ ಸಂಬಂಧ ಮಾಧ್ಯಮಗಳ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಪರಿಶೀಲಿಸಲಾಗುವುದು. ಇದರ ಹಾಗುಹೋಗುಗಳ ಬಗ್ಗೆ ಪರಿಶೀಲಿಸಿ ಸಮಿತಿ ರಚಿಸಲು ಕ್ರಮ ಕೈಗೊಳ್ಳಲಾಗುವುದು. ಸಮಿತಿ ಪರಿಶೀಲನೆ ಮಾಡಿ ವರದಿ ನೀಡಿದ ಬಳಿಕ ಅಗತ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಭೂಗುತ್ತಿಗೆ ನೀಡುವುದಕ್ಕೆ ವಿರೋಧ ವ್ಯಕ್ತವಾಗುತ್ತಿರುವ ಬಗ್ಗೆ ಮಾತನಾಡಿದ ಅವರು, ನಿವೇಶನ ಇಲ್ಲದಿರುವವರಿಗೂ ಹಾಗೂ ಜಮೀನು ಇಲ್ಲದಿರುವವರಿಗೂ ಭೂಮಿ ನೀಡುತ್ತೇವೆ. ಸರ್ಕಾರಿ ಭೂಮಿ ನೀಡುವಾಗ ವಿರೋಧ ಯಾಕೆ ಎಂದು ಪ್ರಶ್ನಿಸಿದರು.
ಇನ್ನೂ ಕಾವೇರಿ ನದಿ ಸ್ವಚ್ಛತೆ ಸಂಬಂಧ ರಚಿಸಲಾದ ಸಮಿತಿ ಇನ್ನೂ ವರದಿ ನೀಡಿಲ್ಲ. ವರದಿ ನೀಡಿದ ಬಳಿಕ ಕ್ರಮ ಕೈಗೊಳ್ಳಲಾಗುವುದು ಎಂದರು.