ಬೆಂಗಳೂರು : ಚಿನ್ನಸ್ವಾಮಿ ಸ್ಟೇಡಿಯಂ ಬಳಿ ನಡೆದ ಕಾಲ್ತುಳಿತ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ನ್ಯಾಯಾಧೀಶ ಮೈಕಲ್ ಡಿ ಕುನ್ಹಾ ಅವರ ತನಿಖಾ ವರದಿಯನ್ನು ಪ್ರಶ್ನಿಸಿ ಡಿಎನ್ಎ ಎಂಟರ್ಟೈನ್ಮೆಂಟ್ ನೆಟ್ವರ್ಕ್ ಲಿಮಿಟೆಡ್ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಹಲವು ವಿಶ್ಲೇಷಣೆಗಳು, ವಾದ-ಪ್ರತಿವಾದಗಳ ನಂತರ, ಹೈಕೋರ್ಟ್ ವಿಭಾಗೀಯ ಪೀಠವು ಡಿಎನ್ಎ ಸಂಸ್ಥೆಯು ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸುವ ಮಹತ್ವದ ನಿರ್ಧಾರ ಕೈಗೊಂಡಿದೆ. ನ್ಯಾ.ಡಿ.ಕೆ.ಸಿಂಗ್ ಮತ್ತು ನ್ಯಾ. ತಾರಾ ವಿತಾಸ್ತಾ ಗಂಜು ಅವರಿದ್ದ ವಿಭಾಗೀಯ ಪೀಠ ಈ ಆದೇಶ ನೀಡಿದೆ.
ಈ ಪ್ರಕರಣದಲ್ಲಿ ನಿವೃತ್ತ ನ್ಯಾಯಾಧೀಶ ಮೈಕಲ್ ಕುನ್ಹಾ ನೀಡಿದ್ದ ತನಿಖಾ ವರದಿ ವಿವಾದಕ್ಕೆ ಕಾರಣವಾಗಿತ್ತು. ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಜನಸಂದಣಿಯಲ್ಲಿ ಸಂಭವಿಸಿದ ಕಾಲ್ತುಳಿತ ಘಟನೆ ತನಿಖೆಗೆ ಕುನ್ಹಾ ಆಯೋಗವನ್ನು ರಚಿಸಲಾಗಿತ್ತು. ಘಟನೆಯ ಸಂದರ್ಭ, ಭದ್ರತಾ ವ್ಯವಸ್ಥೆಗಳ ವೈಫಲ್ಯ, ಕಾರ್ಯಕ್ರಮ ನಿರ್ವಹಣೆಯಲ್ಲಿನ ಅವ್ಯವಸ್ಥೆಗಳು ಸೇರಿ ಹಲವು ಅಂಶಗಳನ್ನು ವರದಿ ವಿವರಿಸಿದೆ. ಆದರೆ ವರದಿಯ ಹಲವು ನಿರ್ಣಾಯಕ ಭಾಗಗಳು ಡಿಎನ್ಎ ಎಂಟರ್ಟೈನ್ಮೆಂಟ್ ನೆಟ್ವರ್ಕ್ ವಿರುದ್ಧವಾಗಿ ದಾಖಲಾಗಿವೆ.
ಇದನ್ನೂ ಓದಿ:-ಮೆಕ್ಕೆಜೋಳದ ಬೆಲೆಕುಸಿತ : ಸಂಕಷ್ಟದಲ್ಲಿರುವ ರೈತರಿಗೆ ಸರ್ಕಾರದ ನೆರವು : ಸಿಎಂ
ಕುನ್ಹಾ ವರದಿಯಲ್ಲಿ ಡಿಎನ್ಎ ಎಂಟರ್ಟೈನ್ಮೆಂಟ್ ನೆಟ್ವರ್ಕ್ ಸಂಸ್ಥೆಯದೇ ತಪ್ಪು ಎಂಬ ರೀತಿಯ ಉಲ್ಲೇಖಗಳಿವೆ, ತನಿಖೆ ಇನ್ನೂ ಪೂರ್ಣವಾಗದೇ ಇದ್ದರೂ ಆರೋಪದಂತಹ ಪದಪ್ರಯೋಗ ಬಳಸಲಾಗಿದೆ ಎಂಬುದು ಡಿಎನ್ಎ ಸಂಸ್ಥೆಯ ಮುಖ್ಯ ಆಕ್ಷೇಪವಾಗಿತ್ತು. ತನಿಖೆಯ ಅಂತಿಮ ನಿರ್ಣಯಕ್ಕೆ ಬರಬೇಕಿದ್ದ ಹಂತದಲ್ಲೇ ಆರೋಪದ ನೋಟ ನೀಡಿರುವುದು ನ್ಯಾಯ, ಪ್ರಕ್ರಿಯೆಗಳ ಕುರಿತ ನಿರ್ದಿಷ್ಟತೆಯನ್ನು ಉಲ್ಲಂಘಿಸುವಂತಿದೆ ಎಂದು ಡಿಎನ್ಎ ಪರ ವಕೀಲರು ವಾದಿಸಿದ್ದರು. ಅಲ್ಲದೇ ವರದಿಯಲ್ಲಿರುವ ಹಲವಾರು ಅಂಶಗಳು ಪಕ್ಷಪಾತದ ಸ್ವರೂಪದಲ್ಲಿವೆ, ಪರಿಶೀಲನೆ ಅಥವಾ ವಿಷಯ ಪ್ರಮಾಣದ ಕೊರತೆಯಿದೆ ಎಂಬುದು ಮತ್ತೊಂದು ಆಕ್ಷೇಪವಾಗಿತ್ತು. ಈ ಹಿನ್ನೆಲೆಯಲ್ಲಿ ಕುನ್ಹಾ ವರದಿ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿತ್ತು.





