ಚಿಕ್ಕಮಗಳೂರು : ಅದೊಂದು ಬಹುಕಾಲದ ಪ್ರೀತಿ, ಪ್ರೀತಿ ಮಾಡಿ, ಪ್ರೇಯಸಿಯಿಂದ ಹಣ ಪಡೆದು, ಇದೀಗ ಬೇರೊಂದು ಮದುವೆಗೆ ಸಿದ್ಧವಾಗಿದ್ದ ಹುಡಗ ಮನೆ ಮುಂದೆ ಸಂತ್ರಸ್ತ ಯುವತಿ ಗಲಾಟೆ ಮಾಡಿದ್ದಾರೆ. ಸದ್ಯ ಈ ಘಟನೆ ನಡೆದಿರುವುದು ಚಿಕ್ಕಮಗಳೂರು ನಗರದಲ್ಲಿ.
10 ವರ್ಷಗಳಿಂದ ಪ್ರೀತಿಸಿದ ಯುವತಿಗೆ ಮೋಸ ಮಾಡಿ, ಆಕೆಯಿಂದ ಹಣ ಪಡೆದು, ಈಗ ಬೇರೆ ಮದುವೆಗೆ ಸಿದ್ಧನಾಗಿದ್ದ, ತಾನು ವಿಚ್ಛೇದಿತ ಎಂಬ ಸತ್ಯ ಮುಚ್ಚಿಟ್ಟು ಈಗ ಬೇರೆ ಮದುವೆಗೆ ಸಿದ್ಧತೆ ನಡೆಸಿದ್ದ ಆತ. ಇದರಿಂದ ಆಕ್ರೋಶಗೊಂಡ ಸಂತ್ರಸ್ತ ಯುವತಿ, ಚಿಕ್ಕಮಗಳೂರಿನ ಕಲ್ಯಾಣ ನಗರದಲ್ಲಿರುವ ಯುವಕನ ಮನೆ ಮುಂದೆ ನ್ಯಾಯಕ್ಕಾಗಿ ಗಲಾಟೆ ನಡೆಸಿದ್ದಾರೆ.
ಡಿವೋರ್ಸ್ ಆದ ವಿಷಯ ಮುಚ್ಚಿಟ್ಟು ಪ್ರೀತಿ!
ಹಾಸನ ಜಿಲ್ಲೆಯ ಬೇಲೂರು ಮೂಲದವರಾದ ಅಶ್ವಿನಿ ಎಂಬ ಯುವತಿ, ಕಲ್ಯಾಣ ನಗರದ ನಿವಾಸಿ ಶರತ್ ಎಂಬ ಯುವಕನನ್ನು ಕಳೆದ 10 ವರ್ಷಗಳಿಂದ ಪ್ರೀತಿಸುತ್ತಿದ್ದರು. ಈ ನಡುವೆ ಶರತ್ನು ಅಶ್ವಿನಿಯಿಂದ 4.5 ಲಕ್ಷ ರೂಪಾಯಿ ಹಣವನ್ನೂ ಪಡೆದಿದ್ದ ಎನ್ನಲಾಗಿದೆ. ಆದರೆ, ಶರತ್ಗೆ ಈ ಮೊದಲೇ ಮದುವೆಯಾಗಿ ಕೇವಲ ಎರಡು ತಿಂಗಳಲ್ಲಿ ವಿಚ್ಛೇದನ ಆಗಿರುವ ವಿಷಯವನ್ನು ಮುಚ್ಚಿಟ್ಟು ಅಶ್ವಿನಿಯನ್ನು ಪ್ರೀತಿಸುತ್ತಿದ್ದ ಎಂದು ಆರೋಪಿಸಲಾಗಿದೆ. ಮದುವೆಯಾಗುವುದಾಗಿ ಅಶ್ವಿನಿಯ ತಾಯಿಯ ಬಳಿಗೂ ಹೋಗಿ ಭರವಸೆ ನೀಡಿದ್ದ ಕಾರಣ, ಅಶ್ವಿನಿ ತಾಯಿ ಮಗಳಿಗೆ ಬಂದಿದ್ದ ಐದು ಉತ್ತಮ ಮದುವೆ ಸಂಬಂಧಗಳನ್ನು ನಿರಾಕರಿಸಿದ್ದರು.
ಈ ವಿಚಾರವಾಗಿ ಅಶ್ವಿನಿ ಈಗಾಗಲೇ ಆರೋಪಿ ಶರತ್ ವಿರುದ್ಧ ಅಟ್ರಾಸಿಟಿ ಸೇರಿದಂತೆ ಒಟ್ಟು ಮೂರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಆದರೆ ಶರತ್ ಎಲ್ಲಾ ಕೇಸ್ಗಳಿಗೂ ನ್ಯಾಯಾಲಯದಿಂದ ಸ್ಟೇ ತಂದು ಬೇರೆ ಮದುವೆಯಾಗಲು ಮುಂದಾಗಿರುವುದು ಆಶ್ಚರ್ಯ ತಂದಿದೆ.





