Mysore
30
few clouds

Social Media

ಮಂಗಳವಾರ, 27 ಜನವರಿ 2026
Light
Dark

ರಾಜ್ಯಾದ್ಯಂತ ಇಂದಿನಿಂದ ಜಾತಿಗಣತಿ ಸರ್ವೇ ಕಾರ್ಯ ಚುರುಕು: ಸಿಎಂ ಸಿದ್ದರಾಮಯ್ಯ

ಬೆಂಗಳೂರು: ರಾಜ್ಯಾದ್ಯಂತ ಇಂದನಿಂದ ಜಾತಿಗಣತಿ ಸರ್ವೇ ಕಾರ್ಯ ಚುರುಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮಾಹಿತಿ ನೀಡಿದ್ದಾರೆ.

ಈ ಸಂಬಂಧ ಇಂದು ಗೃಹ ಕಚೇರಿ ಕೃಷ್ಣಾದಲ್ಲಿ ಹಿರಿಯ ಅಧಿಕಾರಿಗಳ ಜೊತೆ ವಿಡಿಯೋ ಸಂವಾದದಲ್ಲಿ ಚರ್ಚೆ ನಡೆಸಿದ ನಂತರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಈ ಹಿಂದೆ ಕಾಂತರಾಜು ನೇತೃತ್ವದಲ್ಲಿ ಹಿಂದುಳಿದ ವರ್ಗಗಳ ಆಯೋಗ ನಡೆಸಿದ್ದ ಸಮೀಕ್ಷೆಯಲ್ಲಿ ಪೂರ್ಣ ಪ್ರಮಾಣದ ಮಾಹಿತಿ ಕಲೆ ಹಾಕಿರಲಿಲ್ಲ. ಆಯೋಗ ನೀಡಿದ್ದ ಸೂಚನೆಗಳನ್ನು ಸರಿಯಾಗಿ ಪಾಲಿಸಿರಲಿಲ್ಲ. ಇದರಿಂದಾಗಿ ಸಾಕಷ್ಟು ಸಮಸ್ಯೆಯಾಗಿತ್ತು. ಕೊನೆಗೆ ಆ ವರದಿ ಅಂಗೀಕರಿಸಲು ಆಗದೆ, ಬಿಡಲೂ ಆಗದೇ ಗೊಂದಲದ ಪರಿಸ್ಥಿತಿ ನಿರ್ಮಾಣವಾಗಿದೆ.

ಪ್ರಸ್ತುತ ನಡೆಯುತ್ತಿರುವ ಸಮೀಕ್ಷೆಯನ್ನು ಕರಾರುವಕ್ಕಾಗಿ ಹಾಗೂ ಕಾನೂನಾತಕವಾಗಿ ನಡೆಸಬೇಕು. ಪ್ರತಿಹಂತದಲ್ಲೂ ಸಮೀಕ್ಷಾದಾರರು ಮಾಹಿತಿ ಸಂಗ್ರಹದ ದಸ್ತಾವೇಜುಗಳಿಗೆ ಸಹಿ ಹಾಕಿ, ಅಧಿಕೃತಗೊಳಿಸಬೇಕು. ಯಾವುದು ಅನಧಿಕೃತ ಹಾಗೂ ಆಧಾರರಹಿತ ಎಂಬ ಸನ್ನಿವೇಶ ಸೃಷ್ಟಿಯಾಗಬಾರದು ಎಂದು ಮುಖ್ಯಮಂತ್ರಿ ಅವರು ಸೂಚನೆ ನೀಡಿದರು.

ಕೆಲವು ಅಧಿಕಾರಿಗಳು ಸಮೀಕ್ಷೆಯಲ್ಲಿ ಭಾಗವಹಿಸಲು ಹಿಂದೇಟು ಹಾಕುತ್ತಿದ್ದಾರೆ. ಮೊಬೈಲ್ ಬಳಕೆಗೆ ತಾಂತ್ರಿಕವಾದ ಸಾಮಥ್ರ್ಯವಿಲ್ಲವೆಂಬ ನೆಪ ಒಡ್ಡುತ್ತಿದ್ದು ಅಂಥವರ ಪಟ್ಟಿಯನ್ನು ಪಡೆದು ಸೂಕ್ತ ಪರಿಶೀಲನೆ ನಡೆಸಿ ನಂತರ ವಿನಾಯಿತಿ ನೀಡಿ ಪರ್ಯಾಯ ಸಮೀಕ್ಷಾದಾರರನ್ನು ನಿಯೋಜಿಸಬೇಕೆಂದು ತಾಕೀತು ಮಾಡಿದ್ದಾರೆ.

ಇದನ್ನು ಓದಿ : ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ಸಿದ್ದರಾಮಯ್ಯ ವಿಡಿಯೋ ಕಾನ್ಫರೆನ್ಸ್‌

ಸಮೀಕ್ಷೆಗೆ ಆರಂಭಿಕ ಹಂತದಲ್ಲಿ ತೀವ್ರ ಹಿನ್ನಡೆಯಾಗಿದ್ದು, ಇದೇ ವೇಗದಲ್ಲಿ ಗಣತಿ ನಡೆದರೆ ಒಂದು ತಿಂಗಳಾದರೂ ಪೂರ್ಣಗೊಳ್ಳುವುದಿಲ್ಲ. ಪ್ರತಿ ದಿನ ಸರಾಸರಿ 10 ಲಕ್ಷ ಮನೆಗಳಂತೆ ಸಮೀಕ್ಷೆ ನಡೆಯಬೇಕಿತ್ತು. ಅದರ ಅಂದಾಜಿನ ಪ್ರಕಾರ ಸರಿಸುಮಾರು ಕನಿಷ್ಠ 50 ಲಕ್ಷ ಮನೆಗಳ ಸಮೀಕ್ಷೆಯಾಗಬೇಕಿತ್ತು. ಆದರೆ 5 ಲಕ್ಷ ಮನೆಗಳ ಸಮೀಕ್ಷೆಯೂ ಪೂರ್ಣವಾಗಿಲ್ಲ ಎಂದು ಮುಖ್ಯಮಂತ್ರಿ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಕಳೆದ ನಾಲ್ಕು ದಿನಗಳಿಂದ ಜಾತಿಗಣತಿ ಸರ್ವೇ ಕಾರ್ಯ ಕುಂಠಿತವಾಗಿತ್ತು. ಇಂದಿನಿಂದ ಜಾತಿ ಗಣತಿ ಸರ್ವೇ ಕಾರ್ಯ ಚುರುಕಾಗಲಿದೆ. ಈ ಸಂಬಂಧ ಎಲ್ಲಾ ಜಿಲ್ಲೆಯ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ಇನ್ನು ಮುಂದುವರಿದು ಮಾತನಾಡಿದ ಅವರು, ಜಿಲ್ಲಾಧಿಕಾರಿಗಳು ಹೇಳುವ ಪ್ರಕಾರ ಶೇಕಡಾ.90ರಷ್ಟು ತಾಂತ್ರಿಕ ಸಮಸ್ಯೆ ಪರಿಹಾರ ಆಗಿದೆ. ಸರ್ವೇಗೆ ಏನೆಲ್ಲಾ ತೊಡಗು ಇವೆ ಅದನ್ನು ಸರಿಪಡಿಸಲು ಸೂಚನೆ ನೀಡಿದ್ದೇನೆ ಎಂದು ಹೇಳಿದರು.

Tags:
error: Content is protected !!