ಬೆಂಗಳೂರು: ನಾವು ಸರ್ಕಾರದ ಭ್ರಷ್ಟಾಚಾರದ ಬಗ್ಗೆ ಮಾತಿನಲ್ಲಿ ಟೀಕೆ ಮಾಡುತ್ತಿದ್ದೇವೆ. ಸರ್ಕಾರಕ್ಕೆ ಜನ ಯಾವಾಗ ಕಾಲಲ್ಲಿ ಇರುವುದನ್ನು ಬಿಚ್ಚಿ ಹೊಡೆಯುತ್ತಾರೋ ಗೊತ್ತಿಲ್ಲ ಎಂದು ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ವಿವಾದಾತ್ಮಕ ಹೇಳಿಕೆ ನೀಡಿದ್ದಾರೆ.
ಈ ಕುರಿತು ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ನಮ್ಮ ಆಕ್ರೋಶ ಕೇವಲ ಬಾಯಿ ಮಾತಿನಲ್ಲಿದೆ. ಸರ್ಕಾರದ ವಿರುದ್ಧ ಜನರ ಆಕ್ರೋಶ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಜನರು ಕಾಲಲ್ಲಿರುವುದನ್ನು ಕೈಗೆ ತೆಗೆದುಕೊಂಡು ಹೊಡೆಯುವ ಕಾಲ ಸನಿಹದಲ್ಲಿದೆ. ಈ ಸರ್ಕಾರಕ್ಕೆ ಕಾಲಲ್ಲಿ ಇರುವುದನ್ನು ಬಿಚ್ಚಿ ಹೊಡೆದಾಗಲೇ ಬುದ್ಧಿ ಬರುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಸರ್ಕಾರದ ವಿರುದ್ಧ ನಮ್ಮ ಶಕ್ತಿ ಮೀರಿ ಹೋರಾಟ ಮಾಡುತ್ತಿದ್ದೇವೆ. ಸರ್ಕಾರದ ಭಂಡತನಕ್ಕೆ ಯಾರ ಹತ್ತಿರವೂ ಉತ್ತರ ಇಲ್ಲ. ಸಾರ್ವಜನಿಕವಾಗಿ ಬೆತ್ತಲಾದ ಮೇಲೂ ಮರ್ಯಾದೆ ಇಲ್ಲದವರ ತರಹ ಓಡಾಡುತ್ತಿರುವವರಿಗೆ ಏನು ಹೇಳುವುದು ಎಂದು ಪ್ರಶ್ನೆ ಮಾಡಿದರು.





