Mysore
20
clear sky

Social Media

ಬುಧವಾರ, 11 ಫೆಬ್ರವರಿ 2026
Light
Dark

ವಕೀಲರಿಗೆ ಕಪ್ಪು ಕೋಟಿನಿಂದ ತಾತ್ಕಾಲಿಕ ಮುಕ್ತಿ

ಬೆಂಗಳೂರು: ಎಲ್ಲೆಡೆ ಬಿಸಿಲ ಬೇಗೆ ಹೆಚ್ಚಾಗಿದ್ದು, ಬೇಸಿಗೆಗೆ ಜನರು ಹೈರಾಣಾಗಿದ್ದಾರೆ. ಇನ್ನು ಈ ಸುಡು ಬೇಸಿಗೆಯಲ್ಲಿ ಕಪ್ಪು ಕೋಟ್‌ ಧರಿಸಿ ಕೋರ್ಟಿಗೆ ಬರುತ್ತಿದ್ದ ವಕೀಲರಿಗೆ ಬೇಸಿಗೆಯ ಬಿಸಿ ತುಸು ಹೆಚ್ಚೇ ತಟ್ಟಿದೆ. ಈ ನಿಟ್ಟಿನಲ್ಲಿ ಏಪ್ರಿಲ್‌ 18ರಿಂದ ಮೇ 31ರವರೆಗೆ ವಿಚಾರಣೆಗೆ ಹಾಜರಾಗುವ ರಾಜ್ಯಾದ್ಯಂತ ಜಿಲ್ಲಾ, ವಿಚಾರಣಾ ನ್ಯಾಯಾಲಯಗಳಲ್ಲಿ ವಕೀಲರು ಕಪ್ಪು ಕೋಟ್‌ ಧರಿಸುವುದರಿಂದ ಕರ್ನಾಟಕ ಹೈಕೋರ್ಟ್‌ ವಿನಾಯಿತಿ ನೀಡಿದೆ.

ಇನ್ನು ವಕೀಲರು ಕಪ್ಪು ಕೋಟಿನ ಬದಲಿಗೆ ಬಿಳಿ ಬಣ್ಣದ ಸಾದಾ ಶರ್ಟ್‌ ಅಥವಾ ಸಲ್ವಾರ್‌ ಕಮೀಜ್‌, ಸೀರೆ ಅಥವಾ ಶಾಂತ ಬಣ್ಣದ ಉಡುಗೆಗಳನ್ನು ಧರಿಸಬಹುದು ಎಂದು ನ್ಯಾಯಾಲಯದ ರಿಜಿಸ್ಟ್ರಾರ್‌ ಕೆಎಸ್‌ ಭರತ್‌ ಕುಮಾರ್‌ ಸುತ್ತೋಲೆಯಲ್ಲಿ ತಿಳಿಸಿದ್ದಾರೆ.

ಏಪ್ರಿಲ್‌ 5ರಂದು ಬೆಂಗಳೂರಿನ ವಕೀಲರ ಸಂಘದ ಅಧ್ಯಕ್ಷರು ಸಲ್ಲಿಸಿದ್ದ ಮನವಿಯ ಆಧಾರದ ಮೇಲೆ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ರಾಜ್ಯದಲ್ಲಿ ಬಿಸಿಲ ಝಳ ಹೆಚ್ಚಾಗುತ್ತಿದ್ದು, ತಾಪಮಾನವು ಗರಿಷ್ಠ ಮಟ್ಟಕ್ಕೆ ಏರಿಕೆಯಾಗಿದೆ. ಇಂಥ ಸಂದರ್ಭದಲ್ಲಿ ಕಪ್ಪು ಕೋಟು ಧರಿಸಿ ಬಂದರೆ ಮತ್ತಷ್ಟು ಸಮಸ್ಯೆಯಾಗಲಿದೆ, ಹೀಗಾಗಿ ತಾತ್ಕಾಲಿಕವಾಗಿ ಕಪ್ಪು ಕೋಟು ಧರಿಸುವುದರಿಂದ ವಿನಾಯಿತಿ ನೀಡಬೇಕು ಎಂದು ಮನವಿಯಲ್ಲಿ ಉಲ್ಲೇಖಿಸಲಾಗಿತ್ತು.

Tags:
error: Content is protected !!