ಬೆಂಗಳೂರು: ಕಾರ್ಮಿಕರ ಹೆಸರಿನಲ್ಲಿ ದುಡ್ಡು ತಿಂದ ರಾಜ್ಯ ಸರ್ಕಾರ, ನ್ಯೂಟ್ರಿಷನ್ ಕಿಟ್ ಹೆಸರಿನಲ್ಲಿ ಕೋಟಿ ಕೋಟಿ ಹಣ ಲೂಟಿ ಮಾಡಿದೆ ಎಂದು ಬಿಜೆಪಿ ಆರೋಪಿಸಿದೆ.
ಈ ಕುರಿತು ಸಾಮಾಜಿಕ ಜಾಲತಾಣ ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಮಾಡಿರುವ ಬಿಜೆಪಿಯೂ, ಕಾರ್ಮಿಕ ಇಲಾಖೆಯಲ್ಲಿ ಮತ್ತೊಂದು ಹಗರಣದ ಗಬ್ಬು ವಾಸನೆ ಬಯಲಿಗೆ ಬಂದಿದೆ. ಕಟ್ಟಡ ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ನೀಡುವ ಆಯುರ್ವೇದ ಔಷಧಗಳನ್ನು ಒಳಗೊಂಡ ‘ನ್ಯೂಟ್ರಿಷನ್ ಕಿಟ್’ ನೀಡುವಲ್ಲಿ 75 ಕೋಟಿ ರೂ. ಭ್ರಷ್ಟಾಚಾರ ನಡೆದಿದೆ ಎಂದು ಕಿಡಿಕಾರಿದೆ.
ವಿವಿಧ ಔಷಧ, ಮಾತ್ರೆಗಳು ಮಾರುಕಟ್ಟೆಯಲ್ಲಿ ಸುಮಾರು 953 ರೂ. ಆಗುತ್ತದೆ. ಆದರೆ ಸರ್ಕಾರ ಕಿಟ್ಗೆ 2600 ರೂ. ನಂತೆ ಬಿಲ್ನಲ್ಲಿ ತೋರಿಸಿದೆ. ಕಿಟ್ನಲ್ಲಿ ನೀಡಿರುವ ಔಷಧಗಳು ಹೋಲ್ ಸೇಲ್ ದರದಲ್ಲಿ 600-900 ರೂ.ಗೆ ಸಿಗುತ್ತದೆ. ಆದರೆ ಟೆಂಡರ್ ಪಡೆದಿರುವವರು 2600 ರೂ. ನಿಗದಿಗೊಳಿಸಿ ಬಿಲ್ ಮಾಡಿದ್ದಾರೆ. ಟೆಂಡರ್ ಅನ್ನು ಒಬ್ಬರೇ ನೀಡಿರುವಾಗ ಪ್ರತಿ ಜಿಲ್ಲೆಗೆ ಟೆಂಡರ್ ವಿಭಜನೆ ಯಾಕೆ ಮಾಡಲಾಗಿದೆ ಎಂಬುದಕ್ಕೆ ಕಾಂಗ್ರೆಸ್ ಸರ್ಕಾರ ಉತ್ತರಿಸಬೇಕಿದೆ ಎಂದು ಪ್ರಶ್ನೆ ಮಾಡಿದೆ.
ಸಿಎಂ ಸಿದ್ದರಾಮಯ್ಯ ಅವರೇ, ಹೆಲ್ತ್ ಚೆಕ್ ಅಪ್ ಹೆಸರಲ್ಲಿ, ನ್ಯೂಟ್ರಿಷನ್ ಕಿಟ್ ಹೆಸರಿನಲ್ಲಿ ಕೋಟಿ ಕೋಟಿ ರೂ. ನುಂಗುತ್ತಿರುವ ಭ್ರಷ್ಟ ಸಚಿವ ಎನ್.ಸಿ.ಸಂತೋಷ್ ಲಾಡ್ ಅವರ ರಾಜೀನಾಮೆ ಪಡೆಯಿರಿ ಎಂದು ಆಗ್ರಹಿಸಿದೆ.





