ಧರ್ಮಸ್ಥಳ: ಧರ್ಮಸ್ಥಳದ ಬಂಗ್ಲೆಗುಡ್ಡ ಕಾಡಿನಲ್ಲಿ ರಾಶಿ ರಾಶಿ ಮೂಳೆಗಳು ಪತ್ತೆಯಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.
ಬಂಗ್ಲೆಗುಡ್ಡ ಕಾಡಿನಲ್ಲಿ ಎಸ್ಐಟಿ ಶೋಧ ನಡೆಸುವಾಗ ಮೂಳೆಗಳು ಸಿಕ್ಕಿವೆ ಎಂಬ ಮಾಹಿತಿ ಲಭ್ಯವಾಗಿದೆ. ವಿಠಲಗೌಡನನ್ನು ಕರೆತರದೇ ಎಸ್ಐಟಿ ಶೋಧ ಕಾರ್ಯ ನಡೆಸುತ್ತಿದ್ದು, ಅಲ್ಲಿ ಸಿಕ್ಕಿರುವ ಮೂಳೆ ಹಾಗೂ ಬಟ್ಟೆಗಳನ್ನು ಎಸ್ಐಟಿ ವಶಕ್ಕೆ ಪಡೆದಿದೆ.
ಧರ್ಮಸ್ಥಳ ಬುರುಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಗ್ಲಗುಡ್ಡದಲ್ಲಿ ಮಹಜರು ನಡೆಸಲು ಎಸ್ಐಟಿಗೆ ಅರಣ್ಯ ಇಲಾಖೆ ಗ್ರೀನ್ ಸಿಗ್ನಲ್ ನೀಡಿತ್ತು. ಈ ಹಿನ್ನೆಲೆಯಲ್ಲಿ ಧರ್ಮಸ್ಥಳದ ನೇತ್ರಾವತಿ ನದಿ ತೀರದ ಬಂಗ್ಲಗುಡ್ಡ ಪ್ರದೇಶದಲ್ಲಿ ವಿಠಲಗೌಡ ಬುರುಡೆ ತಂದಿರುವ ಜಾಗದಲ್ಲಿ ಎಸ್ಐಟಿ ಅಧಿಕಾರಿಗಳು ಇಂದು ಮಹಜರು ನಡೆಸಿದ್ದರು.
ಇದನ್ನು ಓದಿ : ಧರ್ಮಸ್ಥಳ ಕೇಸ್: ಬಂಗ್ಲಗುಡ್ಡದಲ್ಲಿ ಮಹಜರಿಗೆ ಎಸ್ಐಟಿಗೆ ಅರಣ್ಯ ಇಲಾಖೆ ಗ್ರೀನ್ ಸಿಗ್ನಲ್
ಧರ್ಮಸ್ಥಳದ ವಿವಿಧೆಡೆ ಹೆಣಗಳನ್ನು ಹೂತಿಟ್ಟಿರುವುದಾಗಿ ಹೇಳಿದ್ದ ಮಾಸ್ಕ್ ಮ್ಯಾನ್ ಚಿನ್ನಯ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ತನಿಖೆ ಮುಂದುವರಿಸಿತ್ತು. ಈ ನಡುವೆ ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿತ್ತು.
ಈ ಬೆಳವಣಿಗೆ ನಡುವೆಯೇ ವಿಠಲಗೌಡನ ವಿಡಿಯೋವೊಂದು ವೈರಲ್ ಆಗಿದ್ದು, ಬಂಗ್ಲಗುಡ್ಡದಲ್ಲಿ ತಾನು ಹೆಣಗಳ ರಾಶಿ ನೋಡಿದ್ದೇನೆ. ಮೊದಲ ಬಾರಿಗೆ ಸ್ಥಳ ಮಹಜರಿಗೆ ಹೋದಾಗ ಮೂರು ಅಸ್ಥಿಪಂಜರಗಳನ್ನು ನೋಡಿದ್ದೇನೆ. ಎರಡನೇ ಬಾರಿ ಹೋದಾಗ ಬಂಗ್ಲಗುಡ್ಡದಲ್ಲಿ ಮರದ ಕೆಳಭಾಗದಲ್ಲಿ ಹೆಣಗಳ ರಾಶಿ ಕಂಡಿದ್ದೇನೆ. ನನ್ನ ಕಣ್ಣಿಗೆ ಐದು ಅಸ್ಥಿಪಂಜರಗಳು ಕಂಡಿವೆ. ಅದರ ಬಳಿಯೇ ವಾಮಾಚಾರಕ್ಕೆ ಬಳಸುವ ಕೆಲ ವಸ್ತುಗಳು ಕೂಡ ಇದ್ದವು ಎಂದು ಸ್ಪೋಟಕ ಹೇಳಿಕೆ ನೀಡಿದ್ದನು. ಈ ಹಿನ್ನೆಲೆಯಲ್ಲಿ ಎಸ್ಐಟಿ ಅಧಿಕಾರಿಗಳು ಬಂಗ್ಲಗುಡ್ಡದಲ್ಲಿ ಮತ್ತೆ ಶೋಧಕಾರ್ಯ ಮುಂದುವರಿಸಿದ್ದಾರೆ.





