Mysore
35
few clouds

Social Media

ಶುಕ್ರವಾರ, 24 ಏಪ್ರಿಲ 2026
Light
Dark

ತಪ್ಪಿದ ದುರಂತ : 4 ಗಂಟೆ ಆಕಾಶದಲ್ಲೇ ವಿಮಾನ ಹಾರಾಟ, ಕೊನೆಗೂ ಬೆಂಗಳೂರಿನಲ್ಲಿ ಸುರಕ್ಷಿತ ಲ್ಯಾಂಡಿಂಗ್‌

engine fail in delhi to goa flight

ಹುಬ್ಬಳ್ಳಿ : ತಾಂತ್ರಿಕ ದೋಷದಿಂದ ನಿಯಂತ್ರಣ ಕಳೆದುಕೊಂಡು 4 ಗಂಟೆಗಳ ಕಾಲ ವಿಮಾನ ಆಗಸದಲ್ಲೇ ಹಾರಾಟ ನಡೆಸಿದ್ದು, ರಾಜ್ಯದಲ್ಲಿ ದೊಡ್ಡ ದುರಂತವೊಂದು ತಪ್ಪಿದಂತಾಗಿದೆ. ಜೀವ ಕೈಯಲ್ಲಿಡಿದು ಕಣ್ಣೀರು ಹಾಕಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಹೈದರಾಬಾದ್‍ನಿಂದ ಹುಬ್ಬಳ್ಳಿಗೆ ಬರುತ್ತಿದ್ದ ವಿಮಾನ ಏಕಾಏಕಿ ನಿಯಂತ್ರಣ ಕಳೆದುಕೊಂಡಿದ್ದು, ಬಳಿಕ ಆಗಸದಲ್ಲೇ ಸುಮಾರು 3 ಗಂಟೆಗಳ ಸುತ್ತಾಡಿ, ಪ್ರಯಾಣಿಕರಿಗೆ ಸಾವಿನ ದರ್ಶನ ಮಾಡಿಸಿದೆ. ಏಕಾಏಕಿ ವೇಗದ ನಿಯಂತ್ರಣ ಕಳೆದುಕೊಂಡ ಫ್ಲೈಟ್ ಅನ್ನು ಸೇಫ್ ಆಗಿ ಲ್ಯಾಂಡ್ ಮಾಡಲು ಪೈಲಟ್ ಹರಸಾಹಸ ಪಟ್ಟಿದ್ದಾರೆ. ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿದ್ದ ಫ್ಲೈಟ್ 4 ಗಂಟೆ ತಡವಾಗಿ ಬೆಂಗಳೂರಿನಲ್ಲಿ ಲ್ಯಾಂಡ್ ಆಗಿದೆ.

ಫ್ಲೈ91 ಏರ್‍ಲೈನ್ಸ್ ಐಸಿ3401 ಸಂಖ್ಯೆಯ ವಿಮಾನ ಹೈದರಾಬಾದ್‍ನಿಂದ ಹುಬ್ಬಳ್ಳಿಗೆ ಹೊರಟಿತ್ತು. ನಿನ್ನೆ ಮಧ್ಯಾಹ್ನ 3 ಗಂಟೆ ಹೈದರಾಬಾದ್‍ನ ರಾಜೀವ್ ಗಾಂಧಿ ಇಂಟರ್ ನ್ಯಾಷನಲ್ ವಿಮಾನ ನಿಲ್ದಾಣದಿಂದ ಟೇಕಾಫ್ ಆಗಿತ್ತು. ಸಂಜೆ 4:30ಕ್ಕೆ ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗಬೇಕಿತ್ತು. ಆದರೆ ಹುಬ್ಬಳ್ಳಿ ಸಮೀಪಿಸುತ್ತಿದ್ದಂತೆ ಏಕಾಏಕಿ ತಾಂತ್ರಿಕ ದೋಷದಿಂದ ವಿಮಾನ ನಿಯಂತ್ರಣ ಕಳೆದುಕೊಂಡಿತು. ಹುಬ್ಬಳ್ಳಿಯಲ್ಲಿ ಲ್ಯಾಂಡ್ ಆಗದೇ ಸುಮಾರು ನಾಲ್ಕು ಗಂಟೆಗಳ ಕಾಲ ಆಗಸದಲ್ಲಿಯೇ ಮುಂಡಗೋಡ, ದಾವಣಗೆರೆ, ಶಿವಮೊಗ್ಗದಲ್ಲಿ ಸುತ್ತಾಟ ನಡೆಸಿದೆ. ಎಲ್ಲಿಯೂ ಫ್ಲೈಟ್ ಲ್ಯಾಂಡ್ ಆಗಲಿಲ್ಲ. ಕೊನೆಗೆ ಸಂಜೆ 7:30ಕ್ಕೆ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ನಿಲುಗಡೆಯಾಗಿದೆ.

ಪ್ರಯಾಣಿಕರ ಆತಂಕ
ಸುಮಾರು ನಾಲ್ಕು ಗಂಟೆಗಳ ಕಾಲ ವಿಮಾನ ಭೂಮಿಗೆ ಇಳಿಯದೇ ಆಕಾಶದಲ್ಲೇ ಹಾರಾಟ ನಡೆಸಿದ್ದರಿಂದ ಪ್ರಯಾಣಿಕರು ದಿಗಿಲುಗೊಂಡರು. ಪ್ರಾಣ ಭಯದಿಂದ ಅನೇಕರು ಕಣ್ಣೀರು ಹಾಕುತ್ತಾ ತಮ್ಮ ಕುಟುಂಬ ಸದಸ್ಯರಿಗೆ ವಿಡಿಯೋ ಸಂದೇಶಗಳನ್ನು ಕಳುಹಿಸಿದರು. “ನಮ್ಮನ್ನು ವಾಪಸ್ ಹೈದರಾಬಾದ್‍ಗಾದರೂ ಕರೆದೊಯ್ಯಿರಿ ಅಥವಾ ಹತ್ತಿರದ ಬೆಳಗಾವಿ ಅಥವಾ ಬೆಂಗಳೂರಿನಲ್ಲಾದರೂ ಇಳಿಸಿ” ಎಂದು ಪ್ರಯಾಣಿಕರು ವಿಮಾನದ ಸಿಬ್ಬಂದಿಯನ್ನು ಅಂಗಲಾಚಿದರು. ವಿಮಾನದ ಒಳಗೆ ಏನಾಗುತ್ತಿದೆ ಎಂಬ ಸರಿಯಾದ ಮಾಹಿತಿ ನೀಡದ ಸಿಬ್ಬಂದಿಯ ವಿರುದ್ಧ ಕೆಲವರು ಆಕ್ರೋಶ ವ್ಯಕ್ತಪಡಿಸಿದರು.

ಈ ಗೊಂದಲದ ನಡುವೆ ವಿಮಾನದ ಸಿಬ್ಬಂದಿಯು ಪ್ರಯಾಣಿಕರನ್ನು ಸಮಾಧಾನಪಡಿಸಲು ಪ್ರಯತ್ನಿಸಿದರು. ಹವಾಮಾನ ವೈಪರೀತ್ಯದಿಂದಾಗಿ ಲ್ಯಾಂಡಿಂಗ್ ವಿಳಂಬವಾಗುತ್ತಿದೆ ಮತ್ತು ಪ್ರಯಾಣಿಕರ ಸುರಕ್ಷತೆಯೇ ತಮ್ಮ ಮೊದಲ ಆದ್ಯತೆ ಎಂದು ಘೋಷಿಸಿದರು. ಪರಿಸ್ಥಿತಿ ಬಿಗಡಾಯಿಸುತ್ತಿರುವುದನ್ನು ಗಮನಿಸಿದ ಪೈಲಟ್, ಅಂತಿಮವಾಗಿ ವಿಮಾನವನ್ನು ಬೆಂಗಳೂರಿನತ್ತ ತಿರುಗಿಸಲು ನಿರ್ಧರಿಸಿದರು.

ಸುರಕ್ಷಿತ ಲ್ಯಾಂಡಿಂಗ್
ಸತತ ಪ್ರಯತ್ನಗಳ ನಂತರ ಸಂಜೆ 7:30ರ ಸುಮಾರಿಗೆ ವಿಮಾನವು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಯಶಸ್ವಿಯಾಗಿ ಲ್ಯಾಂಡ್ ಆಯಿತು. ವಿಮಾನ ಕೆಳಕ್ಕಿಳಿಯುತ್ತಿದ್ದಂತೆ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು. ಆದರೆ, ಈ ಇಡೀ ಪ್ರಕ್ರಿಯೆಯಲ್ಲಿ ಉಂಟಾದ ವಿಳಂಬ ಮತ್ತು ಸುರಕ್ಷತಾ ಕ್ರಮಗಳ ಬಗ್ಗೆ ಫ್ಲೈ 91 ಏರ್‍ಲೈನ್ಸ್ ವಿರುದ್ಧ ಪ್ರಯಾಣಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪೈಲಟ್‍ನ ನಿರ್ಲಕ್ಷ್ಯವೇ ಇದಕ್ಕೆ ಕಾರಣ ಎಂಬ ಆರೋಪಗಳೂ ಕೇಳಿಬಂದಿದೆ. ಒಟ್ಟಾರೆಯಾಗಿ ದೊಡ್ಡ ಮಟ್ಟದ ಅಪಾಯವೊಂದು ಕೂದಲೆಳೆಯ ಅಂತರದಲ್ಲಿ ತಪ್ಪಿದೆ.

ಈ ನಡುವೆ ಆತಂಕಕೊಂಡ ಪ್ರಯಾಣಿಕರು ವಿಮಾನದಲ್ಲಿ ಕಣ್ಣೀರಿಡುತ್ತಾ, ದೇವರಿಗೆ ಕೈಮುಗಿದು ಬೇಡಿದ್ದಾರೆ. ಪ್ರಯಾಣಿಕರು ಅಳುತ್ತಿರುವ ದೃಶ್ಯ ಈಗ ಎಲ್ಲಾ ಕಡೆ ವೈರಲ್ ಆಗಿದೆ. ಇದೇ ವೇಳೆ ವಿಮಾನದ ಸಿಬ್ಬಂದಿಗಳು ಹವಾಮಾನ ವೈಪರೀತ್ಯದ ಕಾರಣಕ್ಕೆ ಲ್ಯಾಂಡಿಂಗ್ ಮಾಡಲು ಸಾಧ್ಯವಾಗುತ್ತಿಲ್ಲ. ನಿಮ್ಮೆಲ್ಲರ ಸುರಕ್ಷತೆಯೇ ನಮ್ಮೆಲ್ಲರ ಮೊದಲ ಆದ್ಯತೆ. ಯಾರೂ ಸಹ ಆತಂಕಕ್ಕೆ ಒಳಗಾಗಬೇಡಿ ಎಂದು ಹೇಳುತ್ತಿರುವುದೂ ಕಂಡು ಬಂದಿದೆ.

Tags:
error: Content is protected !!