Mysore
20
clear sky

Social Media

ಭಾನುವಾರ, 08 ಫೆಬ್ರವರಿ 2026
Light
Dark

ರಾಜ್ಯದಲ್ಲಿ ಸದ್ಯಕ್ಕೆ ಹೊಸ ತಾಲ್ಲೂಕುಗಳ ರಚನೆಯ ಪ್ರಸ್ತಾಪ ಇಲ್ಲ: ಸಚಿವ ಕೃಷ್ಣಭೈರೇಗೌಡ

krishna bhairegowda

ಬೆಂಗಳೂರು: ರಾಜ್ಯದಲ್ಲಿ ಸದ್ಯಕ್ಕೆ ಹೊಸ ತಾಲ್ಲೂಕುಗಳ ರಚನೆಯ ಪ್ರಸ್ತಾಪ ಇಲ್ಲ. ಈಗಾಗಲೇ ರಚನೆಯಾಗಿರುವ ತಾಲ್ಲೂಕುಗಳಿಗೆ ಮೂಲ ಸೌಲಭ್ಯ ಕಲ್ಪಿಸುವುದು ನಮ್ಮ ಆದ್ಯತೆಯಾಗಿದೆ ಎಂದು ಕಂದಾಯ ಸಚಿವ ಕೃಷ್ಣಭೈರೇಗೌಡ ತಿಳಿಸಿದ್ದಾರೆ.

ವಿಧಾನಸಭೆಯ ಪ್ರಶ್ನೋತ್ತರದ ಅವಧಿಯಲ್ಲಿ ಚಳ್ಳಕೆರೆ ಕ್ಷೇತ್ರದ ಶಾಸಕ ಟಿ.ರಘುಮೂರ್ತಿ, ತಮ್ಮ ಕ್ಷೇತ್ರಕ್ಕೆ ಸೇರಿದ ಆಂಧ್ರಪ್ರದೇಶ ಗಡಿಭಾಗದಲ್ಲಿರುವ ಪರಶುರಾಮಪುರ ಹೋಬಳಿಯನ್ನು ಹೊಸ ತಾಲ್ಲೂಕುನ್ನಾಗಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.

ಇದಕ್ಕೆ ಉತ್ತರಿಸಿದ ಸಚಿವರು, ಈ ಹಿಂದೆ 2009ರಲ್ಲಿ ಹಿರಿಯ ಅಧಿಕಾರಿ ಎಂ.ಬಿ.ಪ್ರಕಾಶ್‌ ಅವರ ಸಮಿತಿ, ವೈಜ್ಞಾನಿಕ ಅಧ್ಯಯನ ಮಾಡಿ ಹೊಸ ತಾಲ್ಲೂಕುಗಳ ರಚನೆಗೆ ಶಿಫಾರಸ್ಸು ಮಾಡಿತ್ತು. ಆದರೆ ಸರ್ಕಾರ ಆ ವರದಿಯನ್ನು ಹೆಚ್ಚು ಪರಿಗಣಿಸಲಿಲ್ಲ. 2013-14ರಲ್ಲಿ 43 ಹೊಸ ತಾಲ್ಲೂಕುಗಳನ್ನು ರಚಿಸಲಾಗಿದೆ. ಆನಂತರ ಬಂದ ಸರ್ಕಾರಗಳು ಬೇರೆ ಬೇರೆ ಕಾರಣಗಳಿಗೆ ನೂತನ ತಾಲ್ಲೂಕುಗಳನ್ನು ಘೋಷಣೆ ಮಾಡಿವೆ ಎಂದು ಹೇಳಿದರು.

ಸದ್ಯದ ಪರಿಸ್ಥಿತಿಯಲ್ಲಿ ತಾಲ್ಲೂಕುಗಳ ರಚನೆ ಕಷ್ಟಸಾಧ್ಯ. ಮುಂದಿನ ದಿನಗಳಲ್ಲಿ ಸರ್ಕಾರ ಅದನ್ನು ಪರಿಶೀಲನೆ ನಡೆಸಲಿದೆ ಎಂದಾಗ ರಘುಮೂರ್ತಿ ಅವರು ಆಕ್ಷೇಪ ವ್ಯಕ್ತಪಡಿಸಿದರು.

ಎಂ.ಬಿ.ಪ್ರಕಾಶ್‌ ಅವರ ಸಮಿತಿ ಪರಶುರಾಮಪುರ ಹೋಬಳಿಯನ್ನು ಹೊಸ ತಾಲ್ಲೂಕನ್ನಾಗಿ ಪರಿಗಣಿಸಲು ಶಿಫಾರಸ್ಸು ಮಾಡಿದೆ. ಆದರೆ ಅದನ್ನು ಕಡೆಗಣಿಸಲಾಗಿದೆ. ತಾಲ್ಲೂಕಿನ ಜನರಿಗೆ ಆಡಳಿತಾತ್ಮಕ ಸಮಸ್ಯೆಗಳಿವೆ. ಪರಶುರಾಮಪುರ ಹೋಬಳಿಯನ್ನು ತಾಲ್ಲೂಕನ್ನಾಗಿ ಘೋಷಣೆ ಮಾಡಬೇಕೆಂದು ಪಟ್ಟು ಹಿಡಿದರು.

ಮುಂದಿನ ದಿನಗಳಲ್ಲಿ ಪರಿಶೀಲಿಸುವ ಭರವಸೆ ಮೂಲಕ ಸಚಿವರು, ಶಾಸಕರನ್ನು ಸಮಾಧಾನಪಡಿಸಿದರು.

Tags:
error: Content is protected !!