ಮಂಗಳೂರು: ವಕ್ಫ್ ಆಸ್ತಿ ಕಬಳಿಕೆಯ ಬಗ್ಗೆ ಮೌನವಾಗಿರಲು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು 150 ಕೋಟಿ ಆಫರ್ ಮಾಡಿದ್ದರು ಎಂಬ ಸಿಎಂ ಸಿದ್ದರಾಮಯ್ಯ ಆರೋಪ ಸುಳ್ಳು ಎಂದು ಅಲ್ಪಸಂಖ್ಯಾತ ಆಯೋಗದ ಮಾಜಿ ಅಧ್ಯಕ್ಷ ಅನ್ವರ್ ಮಾಣಿಪ್ಪಾಡಿ ಸ್ಪಷ್ಟಪಡಿಸಿದ್ದಾರೆ.
ಈ ಬಗ್ಗೆ ಮಂಗಳೂರಿನಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈ ಪ್ರಕರಣವನ್ನು ಮುಚ್ಚಿ ಹಾಕಲು ಕಾಂಗ್ರೆಸ್ನವರೇ ಕೋಟಿ ಕೋಟಿ ಲಂಚ ನೀಡುವ ಆಫರ್ ನೀಡಿದ್ದಾರೆ ಎಂದು ಹೊಸ ಬಾಂಬ್ ಸಿಡಿಸಿದರು.
ಇನ್ನು ಸಿಎಂ ಸಿದ್ದರಾಮಯ್ಯ ಅವರು ಈಗ ಮಾಡಿರುವ ಆರೋಪ ಸುಳ್ಳು. ವಿಜಯೇಂದ್ರ ಯಾವುದೇ ರೀತಿಯ ಹಣದ ಬೇಡಿಕೆ ಇಟ್ಟಿಲ್ಲ. ಸರ್ಕಾರ ತನಿಖೆ ಮಾಡಬೇಕೆಂದು ವಿಜಯೇಂದ್ರ ಅವರನ್ನು ಒತ್ತಾಯಿಸಿದ್ದೆ. ಆದರೆ ಹಣದ ಬೇಡಿಕೆ ಇಟ್ಟಿಲ್ಲ. ಈ ವರದಿಯನ್ನು ಮುಚ್ಚಿ ಹಾಕಲು ಪ್ರಯತ್ನಿಸಿದ ಎಲ್ಲರ ವಿರುದ್ಧ ಕಿಡಿಕಾರಿದ್ದು ಸತ್ಯ. ಇದೀಗ ಸಿಎಂ ಸಿದ್ದರಾಮಯ್ಯ ಅವರು ಹೇಳಿದ ರೀತಿ ಸಿಬಿಐಗೆ ವಹಿಸಲಿ. ಆಗ ಎಲ್ಲವೂ ಹೊರ ಬರುತ್ತದೆ ಎಂದು ಆಗ್ರಹಿಸಿದರು.
ಈ ವರದಿ ಸಂಬಂಧ ಪ್ರಧಾನಿ ನರೇಂದ್ರ ಮೋದಿ ಅವರಿಗೂ ಬಹಳಷ್ಟು ಪತ್ರ ಬರೆದಿದ್ದೇನೆ. ಕೇಂದ್ರ ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ತನಿಖಾ ಸಂಸ್ಥೆಗೆ ಹಸ್ತಾಂತರಿಸಬೇಕು ಎಂದು ಕೇಳಿಕೊಂಡಿದ್ದೆ ಅಷ್ಟೆ ಎಂದರು.
ಇನ್ನು ಮುಂದುವರಿದು ಮಾತನಾಡಿದ ಅವರು ಸಿಎಂ ಸಿದ್ದರಾಮಯ್ಯ ಅವರಿಗೆ ಕಿಂಚಿತ್ತೂ ಅಲ್ಪಸಂಖ್ಯಾತರ ಮೇಲೆ ಪ್ರೀತಿ ಇದ್ದರೆ ಆ ಸಮುದಾಯಕ್ಕೆ ಏನಾದರೂ ಮಾಡಬೇಕೆಂಬ ಮನಸ್ಸಿದ್ದರೆ ನಾನು ಕೊಟ್ಟ ವರದಿಯನ್ನು ಸಿಬಿಐ ತನಿಖೆಗೆ ಹಸ್ತಾಂತರ ಮಾಡಲಿ ಎಂದು ಒತ್ತಾಯಿಸಿದರು.