ವಿಜಯಪುರ: ಬಿಜೆಪಿ ರಾಜ್ಯಾಧ್ಯಕ್ಷ ಚುನಾವಣೆ ನಡೆದರೆ ನಾವು ರೆಡಿ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ನೂತನ ರಾಜ್ಯಾಧ್ಯಕ್ಷ ಆಯ್ಕೆಗೆ ಚುನಾವಣೆ ನಡೆಸುವ ಬಗ್ಗೆ ಕೇಂದ್ರ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಹೇಳಿಕೆ ನೀಡಿರುವ ಬೆನ್ನಲ್ಲೇ ಈಗ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅಲರ್ಟ್ ಆಗಿದ್ದಾರೆ.
ವಿಜಯಪುರದಲ್ಲಿಂದು ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ರಾಜ್ಯಾಧ್ಯಕ್ಷ ಚುನಾವಣೆ ನಡೆದರೆ ನಾವು ರೆಡಿ. ನಮ್ಮ ಪರ ಒಬ್ಬರನ್ನು ಅಭ್ಯರ್ಥಿ ಮಾಡಲು ಚಿಂತನೆ ನಡೆದಿದೆ. ನಮ್ಮ ಗುಂಪಿನಿಂದ ಈಗಾಗಲೇ ನಿರ್ಣಯ ಮಾಡಿದ್ದೇವೆ. ನಾನು ನಿಲ್ಲುತ್ತೇನೋ ಅಥವಾ ಯಾರು ನಿಲ್ಲುತ್ತಾರೆ ನೋಡೋಣ ಎಂದರು.
ಇನ್ನು ಕಲುಷಿತ ವ್ಯಕ್ತಿಗಳಿಂದ ಬಿಜೆಪಿಯನ್ನು ದೂರವಿಡಲು ನಿರ್ಣಯ ಮಾಡಲಾಗಿದೆ ಎಂದ ಯತ್ನಾಳ್, ವಿಜಯೇಂದ್ರ ಜಿಲ್ಲಾ ಅಧ್ಯಕ್ಷರ ಮೇಲೆ ಒತ್ತಡ ಹಾಕಬಾರದು ಎಂದರು.
ನನಗೆ ಮತ ಹಾಕುವಂತೆ ಜಿಲ್ಲಾ ಅಧ್ಯಕ್ಷರ ಮೇಲೆ ವಿಜಯೇಂದ್ರ ಒತ್ತಡ ಹಾಕುತ್ತಿದ್ದಾರೆ. ಹೈಕಮಾಂಡ್ ಇದನ್ನು ಗಮನಿಸಬೇಖು. ಯಾರೂ ಹಸ್ತಕ್ಷೇಪ ಮಾಡದಂತೆ ನೋಡಿಕೊಳ್ಳಬೇಕು. ಯಾರ ಪರವಾಗಿ ಇಲ್ಲದವರನ್ನು ಜಿಲ್ಲೆಗಳಿಗೆ ಕಳುಹಿಸಬೇಕು ಎಂದು ಆಗ್ರಹಿಸಿದರು.
ಇನ್ನು ರಮೇಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಮಾಡಿದ ಯತ್ನಾಳ್ ಅವರು, ಯಡಿಯೂರಪ್ಪ ಸಿಎಂ ಆಗಲು ರಮೇಶ್ ಜಾರಕಿಹೊಳಿ ಕಾರಣ. ಅವರನ್ನು ಜಾಲದಲ್ಲಿ ಸಿಕ್ಕಿಹಾಕಿಸಿದ್ದು ಯಾರು ಎಂದು ಎಲ್ಲರಿಗೂ ಗೊತ್ತಿದೆ. ರಮೇಶ್ ಜಾರಕಿಹೊಳಿ ಬಗ್ಗೆ ಮಾತನಾಡುವಾಗ ಎಚ್ಚರಿಕೆ ಎಂದು ಹೇಳಿದರು.