ಬಿ.ಟಿ.ಮೋಹನ್ ಕುಮಾರ್
ಮಂಡ್ಯ: ಮಂಡ್ಯ ವಿವಿ ಆರಂಭವಾದಾಗಿನಿಂದ ಒಂದಲ್ಲಾ ಒಂದು ಸಮಸ್ಯೆ ಎದುರಾಗುತ್ತಿದ್ದು, ವಿವಿಗೆ ೧೨ಬಿ ಮಾನ್ಯತೆ ಸಿಕ್ಕಿಲ್ಲದಿರುವುದು ಹಲವು ಸಮಸ್ಯೆ ಗಳಿಗೆ ದಾರಿ ಮಾಡಿಕೊಟ್ಟಿದೆ. ಹಾಗಾಗಿ ಇದನ್ನು ಮೈಸೂರು ವಿವಿಯೊಂದಿಗೆ ವಿಲೀನ ಮಾಡಿದರೆ ಮಾನ್ಯತೆ ಸಿಗುವ ಸಾಧ್ಯತೆ ಇದೆ. ಅಲ್ಲದೆ, ವಿವಿಯಲ್ಲಿ ಬೋಧಕರು, ಬೋಧಕೇತರ ಸಿಬ್ಬಂದಿ ಹುದ್ದೆಗಳು ಭರ್ತಿಯಾಗಿಲ್ಲ. ಇರುವವರು ಹೊರಗುತ್ತಿಗೆ ನೌಕರರು ಎಂಬುದು ಕೂಡ ವಿವಿಗೆ ಹಿನ್ನಡೆಯಾಗಿದೆ.
ಮಂಡ್ಯ ವಿವಿಯಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಉದ್ಯೋಗ ಸಿಗುವುದು ಅನುಮಾನ ಹಾಗೂ ಉನ್ನತ ವ್ಯಾಸಂಗ ಮಾಡಲು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಸೀಟು ಸಿಗುವುದಿಲ್ಲ ಎನ್ನುವುದು ಹಲವರ ಅಭಿಪ್ರಾಯ. ಆದರೆ, ಮಂಡ್ಯ ವಿಶ್ವವಿದ್ಯಾಲಯವನ್ನು ನೋಡಿ ಯಾರೂ ಕೆಲಸ ಕೊಡಲ್ಲ. ವಿದ್ಯಾರ್ಥಿಯ ಬುದ್ಧಿವಂತಿಕೆ, ಕೌಶಲ ಹಾಗೂ ಅಂಕಗಳನ್ನು ಆಧರಿಸಿ ನೇಮಕ ಮಾಡಿಕೊಳ್ಳು ತ್ತಾರೆ. ಮೈಸೂರು ವಿವಿಗೆ ಇರುವ ಮಾನ್ಯತೆ ಮಂಡ್ಯ ವಿವಿಗೂ ಮುಂದಿನ ದಿನಗಳಲ್ಲಿ ಸಿಗಲಿದೆ ಎನ್ನುತ್ತಾರೆ ಮಂಡ್ಯ ವಿವಿ ಕುಲಪತಿ ಪ್ರೊ.ಕೆ.ಶಿವಚಿತ್ತಪ್ಪ . ಮಂಡ್ಯ ವಿವಿಗೆ ಯುಜಿಸಿ ಕಾಯ್ದೆ-೧೯೫೬ರ ಪ್ರಕಾರ ೨ಎಫ್ ಮಾನ್ಯತೆ ಸಿಕ್ಕಿದೆ. ೨ಎಫ್ ಪ್ರಕಾರ ವಿವಿಯು ತನ್ನ ಸ್ವಂತ ವಿಭಾಗಗಳು, ಅಧೀನ ಕಾಲೇಜುಗಳು ಅಥವಾ ಸಂಯೋಜಿತ ಕಾಲೇಜುಗಳ ಮೂಲಕ ಯುಜಿಸಿ ಕಾಯ್ದೆ ೧೯೫೬ ಪ್ರಕಾರ ಸೆಕ್ಷನ್ ೨೨ರಡಿ ಎಲ್ಲ ತೆರನಾದ ಆಕ್ಯಾಂಪಸ್, ಮಂಡ್ಯದ ಮಹಿಳಾ ವಿಶ್ವವಿದ್ಯಾಲಯ, ಮದ್ದೂರು ಮಹಿಳಾ ಕಾಲೇಜು, ಕೆ.ಆರ್.ಎಸ್ ಡೀಪಲ್ ಕಾಲೇಜು, ಭಾರತೀ ಕಾಲೇಜುಗಳಲ್ಲಿ ಸಂಶೋಧನಾ ಕೇಂದ್ರಗಳನ್ನು ಯುಜಿಸಿ ನಿಯಮಾನುಸಾರ ಮಾನ್ಯ ಮಾಡಲಾಗಿದೆ.
ಕಾಲೇಜು ಶಿಕ್ಷಣ ಇಲಾಖೆ ಮತ್ತು ಮೈಸೂರು ವಿಶ್ವವಿದ್ಯಾಲಯದಿಂದ ಮಂಡ್ಯ ವಿಶ್ವವಿದ್ಯಾಲಯಕ್ಕೆ ಬೋಧಕ-೯೨ ಮತ್ತು ಬೋಧಕೇತರ-೨೫೩ ಮಂಜೂರಾದ ಹುದ್ದೆಗಳನ್ನು ವರ್ಗಾವಣೆ ಮಾಡಲಾಗಿದೆ. ಎಲ್ಲ ಹುದ್ದೆಗಳೂ ಖಾಲಿ ಇವೆ. ಪ್ರಸ್ತುತ ಹೊರಗುತ್ತಿಗೆ ಆಧಾರದ ಮೇಲೆ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ ಸಂಖ್ಯೆ-೩೪ ಮತ್ತು ಭದ್ರತಾ ಸಿಬ್ಬಂದಿಗಳ ಸಂಖ್ಯೆ-೨೦. ಮಂಡ್ಯದಲ್ಲೇ ವಿವಿ ಇರುವುದರಿಂದ ಜಿಲ್ಲೆಯ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ ಪಡೆಯಲು ಮತ್ತು ಸಂಶೋಧನೆ ಕೈಗೊಳ್ಳಲು ಅನುಕೂಲವಾಗುತ್ತಿದೆ. ಮಂಡ್ಯ ಜಿಲ್ಲೆ ವ್ಯಾಪ್ತಿಗೆ ಒಳಪಡುವ ಉಪನ್ಯಾಸಕರಿಗೆ ತಾತ್ಕಾಲಿಕವಾಗಿ ಯಾದರೂ ಉದ್ಯೋಗಾವಕಾಶ ದೊರಕುತ್ತಿದೆ. ಮೈಸೂರು ವಿಶ್ವವಿದ್ಯಾಲಯವು ೧೯೧೬ರಲ್ಲಿ ಪ್ರಾರಂಭಗೊಂಡಿದ್ದು, ಉತ್ತಮ ವಿವಿಯಾಗಿದೆ. ಮಂಡ್ಯ ವಿವಿಯು ಹೊಸ ವಿಶ್ವವಿದ್ಯಾಲಯವಾಗಿರುವುದರಿಂದ ವಿದ್ಯಾರ್ಥಿಗಳು ಮೈಸೂರು ವಿಶ್ವವಿದ್ಯಾಲಯಕ್ಕೆ ಮೊದಲ ಆದ್ಯತೆ ನೀಡುತ್ತಿದ್ದಾರೆ.
ಬಿಸಿಎ, ಬಿಕಾಂ, ಬಿಎಸ್ಸಿ ಮತ್ತು ಸರ್ ಎಂವಿ ಸ್ನಾತಕೋತ್ತರ ಕೇಂದ್ರದಲ್ಲಿ ಶುಗರ್ ಟೆಕ್ನಾಲಜಿ, ಪಾಲಿಮರ್ ಸೈನ್ಸ್ ಈ ಎರಡೂ ಕೋರ್ಸ್ಗಳು ಇಡೀ ರಾಜ್ಯದಲ್ಲಿ ಕೇವಲ ಮೂರು ವಿವಿಗಳಲ್ಲಿ ಮಾತ್ರ ಇರುವುದರಿಂದ ಅತಂತ್ಯ ಬೇಡಿಕೆ ಹೊಂದಿದೆ. ಮೈಸೂರು ವಿವಿಯಿಂದ ಹಾಗೂ ಕಾಲೇಜು ಶಿಕ್ಷಣ ಇಲಾಖೆಯಿಂದ ೨೬ ಬೋಧಕರು ಮತ್ತು ಕಾಲೇಜು ಶಿಕ್ಷಣ ಇಲಾಖೆಯಿಂದ ೧೪೬ ಅತಿಥಿ ಉಪನ್ಯಾಸಕರು ನಿಯೋಜನೆಗೊಂಡು ಮಂಡ್ಯ ವಿಶ್ವವಿದ್ಯಾಲಯದಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಂಡ್ಯ ವಿವಿಯಲ್ಲಿ ಸ್ನಾತಕ ವಿಭಾಗಗಳು- ಬಿಎ., ಬಿಕಾಂ, ಬಿಸಿಎ, ಬಿಎಸ್ಸಿ, ಬಿಎಸ್ಡಬ್ಲ್ಯು, ಬಿಬಿಎ ಮತ್ತು ಸ್ನಾತ ಕೋತ್ತರ ವಿಭಾಗಗಳು ಎಂಎ-ಇಂಗ್ಲಿಷ್, ಕನ್ನಡ, ರಾಜ್ಯ ಶಾಸ್ತ್ರ, ಸಮಾಜ ಶಾಸ್ತ್ರ, ಇತಿಹಾಸ, ಎಕನಾಮಿಕ್ಸ್, ಎಂಕಾಂ, ಎಂಎಸ್ಸಿ- ಗಣಿತಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಕಂಪ್ಯೂಟರ್ ಸೈನ್ಸ್, ಜಿಯೋಗ್ರಫಿ, ಮನಃಶಾಸ್ತ್ರ, ಎಂಎಸ್ ಡಬ್ಲ್ಯು, ಷುಗರ್ ಟೆಕ್ನಾಲಜಿ, ಪಾಲಿಮರ್ ಸೈನ್ಸ್, ಎಂಬಿಎ ಮತ್ತು ಎಂಸಿಎ ಕೋರ್ಸ್ಗಳಿಗೆ ಎಐಸಿಟಿಯುಯಿಂದ ಅನುಮೋದನೆ ಪಡೆದುಕೊಂಡು ಹೊಸದಾಗಿ ಪ್ರಾರಂಭಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ವಿವಿಯ ಘಟಕ ಕಾಲೇಜುಗಳಲ್ಲಿ ೪,೦೦೦, ಸಂಯೋಜಿತ ಕಾಲೇಜುಗಳಲ್ಲಿ ೧೬,೦೦೦, ಸ್ನಾತಕೋತ್ತರ ಕೇಂದ್ರಗಳಲ್ಲಿ ೧೨೦ ವಿದ್ಯಾರ್ಥಿಗಳು ಇದ್ದಾರೆ. ಸುಸಜ್ಜಿತವಾದ ಕ್ಯಾಂಪಸ್ನಲ್ಲಿ ೩೨ ಎಕರೆ ಮತ್ತು ಸ್ನಾತಕೋತ್ತರ ಕೇಂದ್ರದಲ್ಲಿ ೯೬ ಎಕರೆ ಹಾಗೂ ಉತ್ತಮವಾದ ಗ್ರಂಥಾಲಯವಿರುತ್ತದೆ.
” ರಾಜ್ಯದಲ್ಲಿ ಪ್ರಪ್ರಥಮವಾಗಿ ಮಂಡ್ಯ ವಿವಿಯಲ್ಲಿ ಆಪಲ್ ಲರ್ನಿಂಗ್ ಲ್ಯಾಬ್ಸ್ಥಾಪಿಸಿ ವಿದ್ಯಾರ್ಥಿಗಳಿಗೆ ತರಬೇತಿ ನೀಡಿ ಬಹುರಾಷ್ಟ್ರೀಯ ಕಂಪೆನಿಗಳಲ್ಲಿ ಉದ್ಯೋಗ ದೊರಕಿಸಲಾಗಿದೆ. ಜಿಲ್ಲಾಡಳಿತದ ಸಹಯೋಗದಲ್ಲಿ ಕೌಶಲ ಅಭಿವೃದ್ಧಿ ಕೇಂದ್ರವನ್ನು ತೆರೆಯಲಾಗಿದೆ.”
– ಪ್ರೊ.ಕೆ.ಶಿವಚಿತ್ತಪ್ಪ, ಕುಲಪತಿ, ಮಂಡ್ಯ ವಿವಿ
” ಎಐಸಿಟಿಇ ಅನುಮೋದನೆಯೊಂದಿಗೆ ಮಂಡ್ಯ ವಿವಿಗೆ ಎಂಸಿಎಗೆ ೬೦, ಎಂಬಿಎಗೆ ೧೨೦ ಸೀಟುಗಳು ಬಂದಿವೆ. ಸೀಟು ಹಂಚಿಕೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಈ ವರ್ಷದಿಂದ ವಿದ್ಯಾರ್ಥಿಗಳಿಗೆ ಪ್ರವೇಶ ನೀಡಲಾಗುವುದು. ಬಿಸಿಎಗೆ ಬಹಳ ಬೇಡಿಕೆ ಇದೆ. ಜಾಗತಿಕ ಸಂದರ್ಭಕ್ಕನುಗುಣವಾಗಿ ಬಿಸಿಎ, ಎಐ, ಕ್ಲೌಡ್ ಕಂಪ್ಯೂಟಿಂಗ್ ಮತ್ತು ಮೆಷಿನ್ ಲರ್ನಿಂಗ್ ಪ್ರೋಗ್ರಾಂ ತೆರೆಯುವ ಮೂಲಕ ವಿದ್ಯಾರ್ಥಿಗಳಿಗೆ ಹೆಚ್ಚಿನ ಅವಕಾಶ ಕಲ್ಪಿಸಲು ನಿರ್ಧರಿಸಲಾಗಿದೆ.”




