ಬೆಂಗಳೂರು : ದುಬೈನ ಕರ್ನಾಟಕ ಸಂಘದೊಂದಿಗೆ ನವೆಂಬರ್ 22 ರಂದು ನಾವಿಕ ರಾಜ್ಯೋತ್ಸವ ಮತ್ತು ನಾಟಕೋತ್ಸವವನ್ನು ಆಯೋಜಿಸಲಾಗಿದೆ ಎಂದು ನಾವು ವಿಶ್ವ ಕನ್ನಡಿಗರು ಸಂಸ್ಥೆಯ ಅಧ್ಯಕ್ಷೆ ಡಾ. ಅನ್ನಪೂರ್ಣ ಭಟ್ ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮುಖ್ಯವಾಗಿ 9ನೇ ನಾವಿಕ ವಿಶ್ವ ಸಮ್ಮೇಳನವನ್ನು 2027 ರ ಸೆ.3 ರಿಂದ 5ವರೆಗೆ ಜಾರ್ಜಿಯಾದ ಅಟ್ಲಾಂಟಾದ ಗ್ಯಾಸ್ ಸೌತ್ ಕನ್ವೆನ್ಷನ್ ಸೆಂಟರ್ನಲ್ಲಿ ಏರ್ಪಡಿಸಲು ತೀರ್ಮಾನಿಸಲಾಗಿದೆ ಎಂದು ಹೇಳಿದರು.
ಈ ಅಸಾಧಾರಣ ಲಾಭರಹಿತ ಸಂಸ್ಥೆ ನಾವಿಕದ ೯ನೇ ಅಧ್ಯಕ್ಷೆಯಾಗಿರುವುದು ನನ್ನ ಸೌಭಾಗ್ಯ ಎಂದೇ ಅರಿತಿರುವೆ. ಸಂಸ್ಥೆಯು ಯುವ ನಾಯಕತ್ವ, ಯುವ ಚಟುವಟಿಕೆಗಳು, ಕ್ರೀಡಾ ಚಟುವಟಿಕೆಗಳು, ಶಾಸಕಾಂಗ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುತ್ತದೆ. ಸಾಮಾಜಿಕ, ಸಾಂಸ್ಕೃತಿಕ, ತಾಂತ್ರಿಕ ಮತ್ತು ಇತರೆ ಸಂಗತಿಗಳೊಡನೆ ಜಾಗತಿಕ ಕನ್ನಡಿಗರ ಜಾಲವನ್ನು ಬೆಸೆಯಲು ಮುಂದಾಗುತ್ತೇವೆ. ನಾವಿಕ ವತಿಯಿಂದ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಸಮಾವೇಶಗಳನ್ನು ಆಯೋಜಿಸಲು ಮುಂದಿನ ದಿನಗಳಲ್ಲಿ ಚರ್ಚಿಸಿ ನಿರ್ಧಾರಕ್ಕೆ ಬರುತ್ತೇವೆ ಎಂದರು.
ನಾವಿಕ ಎಂದರೆ ನಾವು ಜಾಗತಿಕ ಕನ್ನಡಿಗರು. ನಾವಿಕ ಸಂಸ್ಥೆ ಶ್ರೇಷ್ಠತೆಗೆ ಸಾಕ್ಷಿಯಾಗಿದ್ದು, ಜಾಗತಿಕವಾಗಿ ಕನ್ನಡಿಗರನ್ನು ಒಂದುಗೂಡಿಸಲು ಮತ್ತು ಜಾಗತಿಕವಾಗಿ ಕನ್ನಡ ಭಾಷೆ, ಕರ್ನಾಟಕ ಸಂಸ್ಕೃತಿ ಮತ್ತು ಪರಂಪರೆಯನ್ನು ಉತ್ತೇಜಿಸಲು ಸ್ಥಾಪಿಸಲಾಗಿದೆ ಎಂದು ಇದೇ ವೇಳೆ ತಿಳಿಸಿದರು.
ನಾವಿಕ ಲಾಭರಹಿತ ಚಟುವಟಿಕೆಗಳಲ್ಲಿ ಪಾಲ್ಗೊಂಡಿದ್ದು, ಪ್ರವಾಹ ಹಾನಿಗೆ ಒಳಗಾದ ಉತ್ತರ ಕರ್ನಾಟಕ, ಕೊಡಗಿಗೆ ದೇಣಿಗೆ ನೀಡಿದೆ. ಕನಾಟಕದ ಗ್ರಾಮೀಣ ಭಾಗದ ವಿದ್ಯಾರ್ಥೀಗಳಿಗೆ ಕಂಪ್ಯೂಟರ್ ಟ್ಯಾಬ್ಲೆಟ್ಗಳನ್ನು ದೇಣಿಗೆಯಾಗಿ ನೀಡಿದ್ದು, ಆಶಾ ಕಾರ್ಯಕರ್ತೆಯರಿಗೆ ಸಹಾಯ ಮಾಡಿದೆ ಎಂದರು.
ಕೋವಿಡ್ ಸಂಕ್ರಾಮಿಕ ಸಂದರ್ಭದಲ್ಲಿ ಆಮ್ಲಜನಕ ಸಿಲಿಂಡರ್ಗಳನ್ನು ಕೊಡುಗೆಯಾಗಿ ನೀಡಲಾಗಿದೆ. 2ರಲ್ಲಿ ಮೊದಲ ಅಂತರರಾಷ್ಟ್ರೀಯ ಸಮಾವೇಶವನ್ನು ನಡೆಸಲಾಗಿದ್ದು, 2023ರಲ್ಲಿ ಟೆಕ್ಸಾಸ್ನ ಆಸ್ಟಿನ್ನಲ್ಲಿ ನಾವಿಕ ವಿಶ್ವ ಶೃಂಗ ಸಭೆಯನ್ನು ನಡೆಸಲಾಗಿತ್ತು ಎಂದು ವಿವರಿಸಿದರು.
2024ರಲ್ಲಿ ಜರ್ಮನಿಯ ಫ್ರಾಂಕ್ಫರ್ಟ್ನಲ್ಲಿ ನವಿಕೋತ್ಸವವನ್ನು ನಡೆಸಿದ್ದು, 2025ರಲ್ಲಿ ಟ್ಯಾಂಪಾದ ಲೇಕ್ಲ್ಯಾಂಡ್ನಲ್ಲಿ ನಾವಿಕ ವಿಶ್ವ ಶೃಂಗ ಸಭೆಯನ್ನು ಆಯೋಜಿಸಲಾಗಿತ್ತು ಎಂದರು.
ಮಾಜಿ ಸಚಿವ ಎಸ್.ಆರ್.ಪಾಟೀಲ್, ನಟಿ ಪ್ರೇಮಾ ಸೇರಿ ಹಲವರು ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.





