Mysore
23
overcast clouds
Light
Dark

Vijay Hazare Trophy: ಕರ್ನಾಟಕ ಅಜೇಯ ಓಟಕ್ಕೆ ಬ್ರೇಕ್‌ ಹಾಕಿದ ಹರ್ಯಾಣ

ಗುಜರಾತ್‌ : ವಿಜಯ ಹಜಾರೆ ಟೂರ್ನಿಯಲ್ಲಿ ಸಿ ಗ್ರೂಪ್‌ನಲ್ಲಿ ಆಡುತ್ತಿರುವ ಕರ್ನಾಟಕ ತಂಡ ಅದೇ ಗ್ರೂಪ್‌ನ ಹರ್ಯಾಣ ತಂಡದ ವಿರುದ್ಧ ಹೀನಾಯ ಸೋಲು ಕಂಡಿದೆ. ಆ ಮೂಲಕ ಈ ಟೂರ್ನಿಯಲ್ಲಿನ ತನ್ನ ಅಜೇಯ ಗೆಲುವಿನ ಓಟಕ್ಕೆ ಬ್ರೇಕ್‌ ಬಿದ್ದಿದೆ. ಇತ್ತ ತಾನಾಡಿದ ಎಲ್ಲಾ ಪಂದ್ಯಗಳಲ್ಲಿ ಜಯ ದಾಖಲಿಸಿರುವ ಹರ್ಯಾಣ ಗ್ರೂಪ್‌ನಲ್ಲಿ ಅಗ್ರಸ್ಥಾನಕ್ಕೇರಿದೆ.

ಇಲ್ಲಿನ ಲಾಲ್ ಬಹದ್ದೂರ್ ಶಾಸ್ತ್ರಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ವಿಜಯ ಹಜಾರೆ ಟೂರ್ನಿಯ ಗ್ರೂಪ್ ಸಿ ಪಂದ್ಯದಲ್ಲಿ ಕರ್ನಾಟಕ ವಿರುದ್ಧ ಹರ್ಯಾಣ ತಂಡ 5 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿದೆ.

ಟಾಸ್ ಗೆದ್ದು ಮೊದಲು ಬ್ಯಾಟಿಂಗ್‌ ಮಾಡಿದ ಕರ್ನಾಟಕ ತಂಡಕ್ಕೆ ನಿರೀಕ್ಷಿತ ಆರಂಭ ದೊರಕಿರಲಿಲ್ಲ. ಆರಂಭಿಕ ಆಟಗಾರ ಆಟಗಾರ ನಾಯಕ ಮಯಾಂಕ್ ಅಗರ್ವಾಲ್ (0) ಶೂನ್ಯಕ್ಕೆ ಔಟಾದರೆ, ರವಿಕುಮಾರ್ ಸಮರ್ಥ್ 1 ರನ್​ಗಳಿಸಿ ವಿಕೆಟ್ ಒಪ್ಪಿಸಿದರು. ನಂತರ ಕ್ರೀಸ್‌ಗೆ ಬಂದ ಬಿ.ಆರ್​ ಶರತ್ (15), ನಿಕಿಕ್ ಜೋಸ್ (9) ಹಾಗೂ ಮನೀಷ್ ಪಾಂಡೆ (24) ಯಾರೊಬ್ಬರಿಂದಲೂ ಭದ್ರ ಇನ್ನಿಂಗ್ಸ್‌ ದೊರೆಯಲಿಲ್ಲ. ಬಂದ ದಾರಿಯಲ್ಲಿಯೇ ಬೇಗನೆ ನಿರ್ಗಮಿಸಿದರು. ಇನ್ನು ಅಭಿನವ್ ಮನೋಹರ್ 3 ರನ್​ಗಳಿಸಿದರೆ, ಮನೋಜ್ ಭಂಡಾಗೆ 8 ರನ್​ಗಳಿಸಿ ವಿಕೆಟ್ ಕೈಚೆಲ್ಲಿದರು.

ಬಳಿಕ 10ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ವಿಜಯಕುಮಾರ್ ವೈಶಾಕ್ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ತಾವೆದುರಿಸಿದ 61 ಎಸೆತಗಳಲ್ಲಿ 4 ಭರ್ಜರಿ ಸಿಕ್ಸ್ ಹಾಗೂ 4 ಫೋರ್​ಗಳೊಂದಿಗೆ 54 ರನ್​ಗಳ ಚಚ್ಚಿದರು. ಈ ಅರ್ಧಶತಕದ ನೆರವಿನಿಂದ ಕರ್ನಾಟಕ ತಂಡವು 43.5 ಓವರ್​ಗಳಲ್ಲಿ ತನ್ನೆಲ್ಲಾ ವಿಕೆಟ್‌ ಕಳೆದುಕೊಂಡು 143 ರನ್​ಗಳಿಸಿ ಆಲೌಟ್ ಆಯಿತು.

ಹರ್ಯಾಣ ಪರ ಸುಮಿತ್ ಕುಮಾರ್ 3, ಯುಜ್ವೇಂದ್ರ ಚಹಾಲ್ ಹಾಗೂ ನಿಶಾಂತ್ ಸಿಂಧು ತಲಾ 2 ವಿಕೆಟ್ ಕಬಳಿಸಿ ಮಿಂಚಿದರು.

ಇತ್ತಾ ಕರ್ನಾಟಕ ನೀಡಿದ 144 ರನ್​​ಗಳ ಸುಲಭ ಗುರಿ ಬೆನ್ನತ್ತಿದ ಹರ್ಯಾಣ ತಂಡಕ್ಕೂ ಕೂಡ ಉತ್ತಮ ಆರಂಭ ಸಿಗಲಿಲ್ಲ. ಕೇವಲ 35 ರನ್​ಗಳಿಗೆ 3 ವಿಕೆಟ್ ಕಳೆದುಕೊಂಡು ಆರಂಭಿಕ ಆಘಾತಕ್ಕೆ ಒಳಗಾಗಿತ್ತು. ಈ ಹಂತದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ತೋರಿದ ನಿಶಾಂತ್ ಸಿಂಧು (43) ಹಾಗೂ ರೋಹಿತ್ ಪ್ರಮೋದ್ ಶರ್ಮಾ (63) ತಂಡಕ್ಕೆ ಆಸರೆಯಾದರು.

31.1 ಓವರ್​ಗಳಲ್ಲಿ 5 ವಿಕೆಟ್ ಕಳೆದುಕೊಂಡು ಹರ್ಯಾಣ ತಂಡವು ಗೆಲುವಿನ ದಡ ಸೇರಿತು. ಈ ಮೂಲಕ ಹರ್ಯಾಣ ತಂಡವು 5 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಕರ್ನಾಟಕ ಪರ ವಾಸುಕಿ ಕೌಶಿಕ್‌ 2, ಜೆ ಸುಜಿತ್‌ 2 ಮತ್ತು ವೈಶಾಖ್‌ 1 ವಿಕೆಟ್‌ ಪಡೆದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ