ಕರಾಚಿ: ಭಾರತದಲ್ಲಿ ಈ ವರ್ಷಾಂತ್ಯದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ ನಲ್ಲಿ ಅಹಮದಾಬಾದ್ ನಲ್ಲಿ ಪಂದ್ಯವಾಡಲು ಪಾಖಿಸ್ತಾನ ಹಿಂದೇಟು ಹಾಕುತ್ತಿದೆ. ನಾಕೌಟ್ ಪಂದ್ಯ ಹೊರತು ಪಡಿಸಿ ಬೇರೆ ಪಂದ್ಯಗಳನ್ನು ಅಹಮದಾಬಾದ್ ನಲ್ಲಿ ಆಡುವುದಿಲ್ಲ ಎಂದಿದೆ. ಈ ವಿಚಾರಕ್ಕೆ ಇದೀಗ ಪಾಕ್ ಮಾಜಿ ನಾಯಕ ಶಾಹೀದ್ ಅಫ್ರಿದಿ ಪಾಕಿಸ್ತಾನ ಮಂಡಳಿಯನ್ನು ಪ್ರಶ್ನಿಸಿದ್ದಾರೆ.
ಅಹಮದಾಬಾದ್ನಲ್ಲಿ ಆಡಲು ನಿರಾಕರಿಸಿದ ಹಿಂದಿನ ತರ್ಕದ ಬಗ್ಗೆ ಪಿಸಿಬಿಯನ್ನು ಅಫ್ರಿದಿ ಪ್ರಶ್ನಿಸಿದರು.
“ಅಹಮದಾಬಾದ್ ಪಿಚ್ಗಳಲ್ಲಿ ಆಡಲು ಅವರು ಏಕೆ ನಿರಾಕರಿಸುತ್ತಿದ್ದಾರೆ? ಅದೇನು ಬೆಂಕಿಯನ್ನು ಎಸೆಯುತ್ತದೆಯೇ ಅಥವಾ ಅಲ್ಲೇನು ದೆವ್ವವಿದೆಯೇ? ಹೋಗಿ ಆಟವಾಡಿ, ಗೆಲುವು ಸಾಧಿಸಿ” ಎಂದು ಅಫ್ರಿದಿ ಸಾಮಾ ಟಿವಿಯಲ್ಲಿ ಹೇಳಿದರು.
“ನಮಗೆ ಮುಖ್ಯವಾದುದು ಪಾಕಿಸ್ತಾನ ತಂಡದ ಗೆಲುವು. ಮುಖ್ಯ ವಿಷಯ ಅದೆ. ಇದನ್ನು ಧನಾತ್ಮಕವಾಗಿ ತೆಗೆದುಕೊಳ್ಳಿ. ತುಂಬಿರುವ ಭಾರತೀಯ ಪ್ರೇಕ್ಷಕರ ಮುಂದೆ ವಿಜಯ ಸಾಧಿಸಿ” ಎಂದು ಅವರು ಹೇಳಿದರು.
ಅಕ್ಟೋಬರ್ ನಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ನಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿಯಾಗಲಿದೆ.





