ಪರ್ತ್: ಪ್ರವಾಸಿ ಭಾರತ ವಿರುದ್ಧ ನಡೆದ ಮಳೆ ಬಾಧಿತ ಮೊದಲ ಏಕದಿನ ಪಂದ್ಯದಲ್ಲಿ ಡಕ್ವರ್ತ್ ಲೂಯಿಸ್ ನಿಯಮದಡಿಯಲ್ಲಿ ಆತಿಥೇಯ ಆಸ್ಟ್ರೇಲಿಯಾ ಏಳು ವಿಕೆಟ್ ಅಂತರದ ಗೆಲುವು ದಾಖಲಿಸಿದೆ.
ಆ ಮೂಲಕ ಮೂರು ಪಂದ್ಯಗಳ ಏಕದಿನ ಸರಣಿಯಲ್ಲಿ ೧-೦ ಅಂತರದ ಮುನ್ನಡೆ ಕಾಯ್ದುಕೊಂಡಿದೆ. ಪರ್ತ್ನಲ್ಲಿ ಮಳೆಯಿಂದಾಗಿ ೨೬ ಓವರ್ಗಳಿಗೆ ಸೀಮಿತಗೊಂಡ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ನಡೆಸಿದ ಭಾರತ ೨೬ ಓವರ್ಗಳಲ್ಲಿ ಒಂಬತ್ತು ವಿಕೆಟ್ ನಷ್ಟಕ್ಕೆ ೧೩೬ ರನ್ ಗಳಿಸಲಷ್ಟೇ ಸಾಧ್ಯವಾಯಿತು. ಬಳಿಕ ಡಕ್ವರ್ತ್ ಲೂಯಿಸ್ ನಿಯಮದಡಿಯಲ್ಲಿ ಗುರಿ ಮರುನಿಗದಿಪಡಿಸಲಾಯಿತು. ೧೩೧ ರನ್ ಬೆನ್ನಟ್ಟಿದ ಆಸೀಸ್ ೨೧.೧ ಓವರ್ಗಳಲ್ಲಿ ಮೂರು ವಿಕೆಟ್ ನಷ್ಟಕ್ಕೆ ಗುರಿ ಮುಟ್ಟಿತು. ನಾಯಕ ಮಿಷೆಲ್ ಮಾರ್ಷ್ ಔಟಾಗದೆ ೪೬ ಹಾಗೂ ವಿಕೆಟ್ ಕೀಪರ್, ಬ್ಯಾಟರ್ ಜೋಶ್ ಫಿಲಿಫ್ ೩೭ರನ್ ಗಳಿಸಿದರು.
ಇದನ್ನು ಓದಿ: ಭಾರೀ ವಿರೋಧದ ಮಧ್ಯೆ ಇಂದು ಭಾರತ-ಪಾಕಿಸ್ತಾನ ಕ್ರಿಕೆಟ್ ಪಂದ್ಯ
ಮಂಕಾದ ರೋಹಿತ್, ವಿರಾಟ್…
ಈ ಮೊದಲು ಸುದೀರ್ಘ ಅವಽಯ ಬಳಿಕ ತಂಡಕ್ಕೆ ಮರಳಿದ್ದ ಭಾರತದ ಸ್ಟಾರ್ ಆಟಗಾರರಾದ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಗೆ ಮಿಂಚಲು ಸಾಧ್ಯವಾಗಲಿಲ್ಲ. ಮಳೆಯಿಂದಾಗಿ ಪಂದ್ಯಕ್ಕೆ ಹಲವು ಬಾರಿ ಅಡಚಣೆಯಾದ ಪರಿಣಾಮ ಓವರ್ಗಳ ಸಂಖ್ಯೆಯನ್ನು ಮೊದಲು ೩೫ಕ್ಕೆ ಬಳಿಕ ೨೬ಕ್ಕೆ ಇಳಿಸಲಾಯಿತು.
ರೋಹಿತ್ ಶರ್ಮಾ ೮ ಹಾಗೂ ವಿರಾಟ್ ಕೊಹ್ಲಿ ಶೂನ್ಯಕ್ಕೆ ಔಟ್ ಆಗಿ ನಿರಾಸೆ ಮೂಡಿಸಿದರು. ನಾಯಕ ಶುಭ್ಮನ್ಗಿಲ್ (೧೦) ಹಾಗೂ ಉಪನಾಯಕ ಶ್ರೇಯಸ್ ಅಯ್ಯರ್ (೧೧) ಸಹ ವೈಫಲ್ಯ ಕಂಡರು. ಕೆ.ಎಲ್. ರಾಹುಲ್ (೩೮) ಹಾಗೂ ಅಕ್ಷರ್ ಪಟೇಲ್ (೩೧) ಉಪಯುಕ್ತ ಇನಿಂಗ್ಸ್ ಕಟ್ಟುವ ಮೂಲಕ ತಂಡವನ್ನು ಗೌರವಯುತ ಮೊತ್ತದತ್ತ ಮುನ್ನಡೆಸಿದರು. ಕೊನೆಯಲ್ಲಿ ನಿತೀಶ್ ರೆಡ್ಡಿ ೧೧ ಎಸೆತಗಳಲ್ಲಿ ಎರಡು ಸಿಕ್ಸರ್ ನೆರವಿನಿಂದ ೧೯ ರನ್ ಗಳಿಸಿ ಔಟಾಗದೆ ಉಳಿದರು. ವಾಷಿಂಗ್ಟನ್ ಸುಂದರ್ ೧೦ ರನ್ ಗಳಿಸಿದರು. ಆಸ್ಟ್ರೇಲಿಯಾದ ಪರ ಜೋಶ್ ಹ್ಯಾಜಲ್ವುಡ್, ಮಿಚೆಲ್ ಒವೆನ್ ಹಾಗೂ ಮ್ಯಾಥ್ಯೂ ಕುಹ್ನೆಮನ್ ತಲಾ ಎರಡು ವಿಕೆಟ್ ಗಳಿಸಿದರು. ಸರಣಿಯ ಎರಡನೇ ಪಂದ್ಯ ಅಕ್ಟೋಬರ್ ೨೩, ಗುರುವಾರ ಅಡಿಲೇಡ್ನಲ್ಲಿ ನಡೆಯಲಿದೆ.





