Mysore
24
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಧರ್ಮಸ್ಥಳಕ್ಕೆ ಭೇಟಿ ನೀಡಿದ ಕ್ರಿಕೆಟಿಗ ಕೆ.ಎಲ್.ರಾಹುಲ್

ಮಂಗಳೂರು: ಗಾಯದ ಸಮಸ್ಯೆಯಿಂದ ಕಳೆದೆರಡು ತಿಂಗಳಿನಿಂದ ಟೀಂ ಇಂಡಿಯಾದಿಂದ ಹೊರಗುಳಿದಿರುವ ಕನ್ನಡಿಗ, ಖ್ಯಾತ ಕ್ರಿಕೆಟಿಗ ಕೆ.ಎಲ್.ರಾಹುಲ್ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದು ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಇದೇ ವೇಳೆ ಶ್ರೀ ಕ್ಷೇತ್ರದ ಧರ್ಮಾಧಿಕಾರಿಗಳಾದ ಡಾ. ಡಿ. ವೀರೇಂದ್ರಹೆಗ್ಗಡೆ ಅವರನ್ನು ಭೇಟಿ ಮಾಡಿ ಆರ್ಶೀವಾದ ಪಡೆದು ಕೆಲವು ಸಮಯಗಳ ಕಾಲ ಸಮಾಲೋಚನೆ ನಡೆಸಿದ್ದಾರೆ.

ಬೆಳ್ಳಿ ನಾಣ್ಯ ಉಡುಗೊರೆ: ಟೀಮ್ ಇಂಡಿಯಾದ ಅನುಭವಿ ಆಟಗಾರ ಕೆ.ಎಲ್.ರಾಹುಲ್ ಅವರನ್ನು ಆತ್ಮೀಯವಾಗಿ ಸನ್ಮಾನಿಸಿದ ಧರ್ಮಸ್ಥಳದ ಧರ್ಮಾಧಿಕಾರಿಗಳು ಕಂಚಿನ ಗೋವಿನ ಪ್ರತಿಮೆಯನ್ನು ನೀಡಿದ್ದಲ್ಲದೆ, ಒಂದು ಬೆಳ್ಳಿ ನಾಣ್ಯ ನೀಡುವ ಮೂಲಕ ಗಾಯದ ಸಮಸ್ಯೆಯಿಂದ ಶೀಘ್ರ ಚೇತರಿಸಿಕೊಳ್ಳುವಂತೆ ಹಾರೈಸಿದ್ದಾರೆ.

ಐಪಿಎಲ್ ವೇಳೆ ಗಾಯ: ಆಸ್ಟ್ರೇಲಿಯಾ ವಿರುದ್ಧ ನಡೆದ ಪ್ರತಿಷ್ಠಿತ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಕಳಪೆ ಪ್ರದರ್ಶನ ತೋರುವ ಮೂಲಕ ಮಾಜಿ ಕ್ರಿಕೆಟಿಗರ ಟೀಕೆಗೆ ಗುರಿಯಾಗಿದ್ದ ಕೆ.ಎಲ್.ರಾಹುಲ್, ಐಪಿಎಲ್ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರುವ ಮೂಲಕ ಡಬ್ಲ್ಯುಟಿಸಿ ಫೈನಲ್ ಪಂದ್ಯಕ್ಕೆ ಭರ್ಜರಿಯಾಗಿ ಎಂಟ್ರಿ ಕೊಡಬೇಕೆಂದು ಚಿಂತಿಸಿದ್ದರಾದರೂ, ಮೇ 1 ರಂದು ಲಖನೌದ ಏಕನಾ ಕ್ರೀಡಾಂಗಣದಲ್ಲಿ ನಡೆದ ಆರ್ ಸಿಬಿ ಪಂದ್ಯದ ವೇಳೆ ಫೀಲ್ಡಿಂಗ್ ವೇಳೆ ಸ್ನಾಯು ಸೆಳೆತಕ್ಕೆ ಗುರಿಯಾಗಿ ನಂತರ ಇಡೀ ಟೂರ್ನಿಯಿಂದ ಹೊರಗುಳಿದಿದ್ದರು.

ಎನ್‍ಸಿಎಯಲ್ಲಿ ಚಿಕಿತ್ಸೆ: ಬೆಂಗಳೂರಿನ ಎನ್‍ಸಿಎಯಲ್ಲಿ ಕೆ.ಎಲ್.ರಾಹುಲ್ ಚಿಕಿತ್ಸೆ ಪಡೆಯುತ್ತಿದ್ದು, ಶಿಬಿರದಲ್ಲಿ ತಾವು ಪಾಲ್ಗೊಂಡಿರುವ ಫೋಟೋಗಳನ್ನು ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿದ್ದರು. ಕಳೆದೆರಡು ತಿಂಗಳಿನಿಂದ ಕ್ರಿಕೆಟ್ ಜೀವನದದಿಂದ ದೂರ ಉಳಿದಿರುವ ಟೀಮ್ ಇಂಡಿಯಾದ ಮಾಜಿ ಉಪನಾಯಕ ಕೆ.ಎಲ್.ರಾಹುಲ್, ಏಷ್ಯಾ ಕಪ್ ಟೂರ್ನಿಯ ಟೀಮ್ ಇಂಡಿಯಾ ಪರ ಬ್ಯಾಟ್ ಬೀಸಲು ಎದುರು ನೋಡುತ್ತಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!