Mysore
23
overcast clouds
Light
Dark

ಯತೀಂದ್ರ ಭಾರೀ ಭ್ರಷ್ಟ : ಮಾತಿನ ಭರದಲ್ಲಿ ಸಂತೋಷ್ ಲಾಡ್ ಯಡವಟ್ಟು

ಹುಬ್ಬಳ್ಳಿ : ಯತೀಂದ್ರ ಆಡಳಿತದಲ್ಲಿ ಹಸ್ತಕ್ಷೇಪ ಮಾಡುತ್ತಾರೆ. ಅವರು ಭಾರೀ ಭ್ರಷ್ಟರಿದ್ದಾರೆ. ಯತೀಂದ್ರ ಅವರನ್ನು ಏಕೆ ರಾಜ್ಯಾಧ್ಯಕ್ಷರನ್ನಾಗಿ ಮಾಡಿದ್ದೀರಿ ಎಂದು ಮಾತಿನ ಭರದಲ್ಲಿ ಸಚಿವ ಸಂತೋಷ್‌ ಲಾಡ್‌ ಯಡವಟ್ಟು ಮಾಡಿಕೊಂಡಿದ್ದಾರೆ.

ವಿಜಯೇಂದ್ರ ಹೆಸರಿನ ಬದಲಿಗೆ ಯತೀಂದ್ರ ಹೆಸರನ್ನು ಉಲ್ಲೇಖಿಸಿ ಸಚಿವರು ಹೊಸದೊಂದು ಚರ್ಚೆಗೆ ಮುನ್ನುಡಿ ಬರೆದಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಇಂದ್ರದ್ವಯರ ಹೆಸರಿನಲ್ಲಿ ಗೊಂದಲಕ್ಕೊಳಗಾಗಿದ್ದಾರೆ.ಬಳಿಕ ಎಚ್ಚೆತ್ತುಕೊಂಡ ಸಂತೋಷ್‌ ಲಾಡ್‌ ನಾನು ಮಾತನಾಡಿದ್ದು ವಿಜಯೇಂದ್ರ ಬಗ್ಗೆ ಯತೀಂದ್ರ ಅವರ ಬಗ್ಗೆಯಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದಲ್ಲಿ ಸಿಎಂ ಸಿದ್ದರಾಮಯ್ಯ ಅವರ ಪುತ್ರ ಮಾಜಿ ಶಾಸಕ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಫೋನ್‌ ಕಾಲ್‌ ಸಂಭಾಷಣೆಯ ವಿಡಿಯೋ ವೈರಲ್‌ ಆಗಿ ವಿಪಕ್ಷಗಳ ಟೀಕೆಗೆ ಗುರಿಯಾಗಿರುವ ಹೊತ್ತಲ್ಲೆ ಸಚಿವ ಸಂತೋಷ್‌ ಲಾಡ್‌ ಈ ರೀತಿಯ ಹೇಳಿಕೆ ನೀಡಿರುವುದು ಹೊಸದೊಂದು ಚರ್ಚೆಗೆ ಮುನ್ನುಡಿ ಬರೆದಂತಾಗಿದೆ.

ಹಲವು ದಿನಗಳಿಂದ ಖಾಲಿ ಇದ್ದ ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಇತ್ತೀಚೆಗಷ್ಟೇ ಬಿ.ವೈ ವಿಜಯೇಂದ್ರ ನೇಮಕಗೊಂಡಿದ್ದರು. ರಾಜ್ಯ ಬಿಜೆಪಿಯ 11 ಅಧ್ಯಕ್ಷರಾಗಿ ಶಾಸಕ ವಿಜಯೇಂದ್ರ ಅಧಿಕಾರ ಸ್ವೀಕರಿಸಿದ್ದರು. ಕರ್ನಾಟಕ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ನಳೀನ್‌ ಕುಮಾರ್‌ ಕಟೀಲ್‌ ಅವರು ಪಕ್ಷದ ಬಾವುಟ ನೀಡಿ ಅಧಿಕಾರ ಹಸ್ತಾಂತರ ಮಾಡಿದ್ದರು.

ಇನ್ನು ತಮಗೆ ರಾಜ್ಯಾಧ್ಯಕ್ಷ ಪಟ್ಟ ಸಿಕ್ಕಿರುವುದರ ಬಗ್ಗೆ ಪ್ರತಿಕ್ರಿಯಿಸಿದ್ದ ವಿಜಯೇಂದ್ರ, ಯುವಕರಿಗೆ ಅವಕಾಶ ಕೊಡಬೇಕು ಎಂದು ನನ್ನನ್ನು ಬಿಜೆಪಿ ರಾಜ್ಯಾಧ್ಯಕ್ಷನನ್ನಾಗಿ ನೇಮಕ ಮಾಡಿದ್ದಾರೆ. ನಾನು ವಿಜಯೇಂದ್ರ ಎಂದಾಗಲಿ ಅಥವಾ ಯಡಿಯೂರಪ್ಪನವರ ಮಗ ಎಂದಾಗಲಿ ನನ್ನನ್ನು ಆಯ್ಕೆ ಮಾಡಿಲ್ಲ. ಯಾರಿಗೆ ರಾಜ್ಯಾಧ್ಯಕ್ಷರ ಸ್ಥಾನವನ್ನು ನೀಡಬೇಕು ಎಂಬುದರ ಬಗ್ಗೆ ಭಾರೀ ಚರ್ಚೆಗಳು ನಡೆದಿದ್ದವು. ಅಂತಿಮವಾಗಿ ನನಗೆ ಈ ಜವಬ್ದಾರಿ ಕೊಟ್ಟಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದರು.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ