ವಿಜಯಪುರ : ಹೈಕಮಾಂಡ್ ನಿಂದ ವಿಪಕ್ಷ ನಾಯಕನ ನೇಮಕವಾಗಿದ್ದರೂ ನಾನೇ ವಿಪಕ್ಷ ನಾಯಕ ಎಂದು ಬಸನಗೌಡ ಪಾಟೀಲ್ ಯತ್ನಾಳ್ ಹೇಳಿದ್ದಾರೆ.
ವಿಜಯಪುರದಲ್ಲಿ ನಡೆದ ದಾನಮ್ಮ ದೇವಿ ಜಾತ್ರಾ ಮಹೋತ್ಸವದಲ್ಲಿ ಭಾಷಣ ಮಾಡುವ ವೇಳೆ ಯತ್ನಾಳ್ ಅವರು ಈ ರೀತಿಯ ಮಾತುಗಳನ್ನಾಡಿದ್ದಾರೆ.
ಸೋಮವಾರದಿಂದ ನಮ್ಮ ದಂಗಲ್ ಶುರುವಾಗುತ್ತೆ. ಆಗ ಯಾರು ನಿಜವಾದ ವಿಪಕ್ಷ ನಾಯಕ ಅಂತ ಫಿಕ್ಸ್ ಮಾಡ್ತೀವಿ. ಈಗ ನಾನೇ ವಿಪಕ್ಷ ನಾಯಕ. ಬಿಜೆಪಿಯಲ್ಲಿ ವಿಪಕ್ಷ ನಾಯಕನ ಸ್ಥಾನ ಸೇಲ್ ಆಗಿದೆಯಾ ? ಯಾರಾದರೂ ಏನಾದರೂ ಕೊಟ್ಟು ತಗೊಂಡು ಮಾಡಿದ್ರೆ ನಾವು ಒಪ್ಪುತ್ತೇವೆ ಎಂದು ಹೇಳುವ ಮೂಲಕ ಯತ್ನಾಳ್ ಅವರು ರಾಜಕೀಯ ವಲಯದಲ್ಲಿ ಗೊಂದಲ ಸೃಷ್ಟಿ ಮಾಡಿದ್ದಾರೆ.
ಮುಂದುವರೆದು ಮಾತನಾಡಿದ ಅವರು ನೀವೆಲ್ಲಾ ಒಟ್ಟಾಗಿರಿ ಒಂದಿಲ್ಲೊಂದು ದಿನ ಕರ್ನಾಟಕ ನಮ್ಮ ಕೈಯಲ್ಲಿ ಬರುತ್ತೆ. ಯಾರಿಂದಲೂ ತಪ್ಪಿಸಲು ಆಗಲ್ಲ. ಲೂಟಿ ಮಾಡಿ ದುಡ್ಡು ಮಾಡಿಕೊಂಡಿರಬಹುದು. ನನ್ನ ಜನ ಬೆಂಬಲದ ಮುಂದೆ ರೊಕ್ಕ ಆಟ ನಡೆಯಲ್ಲ. ನನಗೆ ರಾಜ್ಯಾಧ್ಯಕ್ಷ ಸ್ಥಾನ ಕೈ ತಪ್ಪಿದ್ದಕ್ಕೆ ಕೆಲವರಿಗೆ ಖುಷಿ ಆಗಿದೆ. ಅದಕ್ಕೆ ಹೋಗಿ ಹಾರ ಹಾಕಿ ಹಲ್ಲು ಕಿಸಿದು ನೀವು ರಾಜ್ಯಾಧ್ಯಕ್ಷ ಆಗಿದ್ದು ಬಹಳ ಖುಷಿ ಆಯ್ತು ಅಂತಿದ್ದಾರೆ.
ನನಗೆ ಹೈ ಕಮಾಂಡ್ ನಿಂದ ಫೋನ್ ಬಂದಿದೆ. ಹೈಕಮಾಂಡ್ ನನಗೆ ರಾಜ್ಯಾಧ್ಯಕ್ಷ ಸ್ಥಾನಕ್ಕಿಂತ ದೊಡ್ಡ ಹುದ್ದೆ ಕೊಟ್ಟರೆ ಏನು ಮಾಡ್ತಾರೆ ಮಕ್ಕಳು ? ನನಗೆ ಅವರನ್ನು ಕಂಟ್ರೋಲ್ ಮಾಡುವ ಹುದ್ದೆ ಕೊಟ್ಟರೆ ಏನು ಮಾಡ್ತಾರೆ ? ಕರ್ನಾಟಕದಲ್ಲಿ ಹಿಂಗೆ ನಡೆಯಬೇಕು ಎನ್ನುವ ಪರಿಸ್ಥಿತಿ ಬಂದ್ರೆ ಏನು ಮಾಡುತ್ತಾರೆ ಎಂದು ಸ್ವಪಕ್ಷೀಯರ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.