ಹೊಸದಿಲ್ಲಿ: ಸುಪ್ರೀಂ ಕೋರ್ಟ್ ತೀರ್ಪು ತಲೆ ಕೆಳಗೆ ಮಾಡಲು ಮೋದಿ ಸರಕಾರದಿಂದ ಎಸ್ ಬಿ ಐ ಬಳಕೆ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಆರೋಪ ಮಾಡಿದ್ದಾರೆ.
ಚುನಾವಣಾ ಬಾಂಡ್ ಯೋಜನೆಯನ್ನು ರದ್ದುಪಡಿಸಿರುವ ಸುಪ್ರೀಂ ಕೋರ್ಟ್ ತೀರ್ಪನ್ನು ಬುಡಮೇಲುಗೊಳಿಸಲು ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರಕಾರವು ಭಾರತೀಯ ಸ್ಟೇಟ್ ಬ್ಯಾಂಕನ್ನು ಉಪಯೋಗಿಸಿಕೊಳ್ಳುತ್ತಿದೆ ಎಂದು ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಮಂಗಳವಾರ ಆರೋಪಿಸಿದ್ದಾರೆ.
ಚುನಾವಣಾ ಬಾಂಡ್ ಗಳ ಮೂಲಕ ಸ್ವೀಕರಿಸಲಾಗಿರುವ ದೇಣಿಗೆಗಳ ವಿವರಗಳನ್ನು ಬಹಿರಂಗಗೊಳಿಸಲು ಇನ್ನಷ್ಟು ಸಮಯ ನೀಡಬೇಕೆಂದು ಕೋರಿ ಭಾರತೀಯ ಸ್ಟೇಟ್ ಬ್ಯಾಂಕ್ ಸೋಮವಾರ ಸುಪ್ರೀಂ ಕೋರ್ಟ್ ಗೆ ಅರ್ಜಿ ಸಲ್ಲಿಸಿದ ಬಳಿಕ ಖರ್ಗೆ ಈ ವಾಗ್ದಾಳಿ ನಡೆಸಿದ್ದಾರೆ.
”ಚುನಾವಣಾ ಬಾಂಡ್ ಗಳು ಎಂಬ ಮೋದಿ ಸರಕಾರದ ‘ಕಪ್ಪುಹಣ ಪರಿವರ್ತನೆ’ ಯೋಜನೆಯನ್ನು ಅತ್ಯುನ್ನತ ಸುಪ್ರೀಂ ಕೋರ್ಟೇ ರದ್ದುಪಡಿಸಿದೆ. ಆ ಯೋಜನೆಯು ‘ಅಸಾಂವಿಧಾನಿಕ’, ‘ಮಾಹಿತಿ ಹಕ್ಕಿನ ಉಲ್ಲಂಘನೆ’ ಮತ್ತು ‘ಕಾನೂನುಬಾಹಿರ’ ಎಂಬುದಾಗಿ ಸರ್ವೋಚ್ಛ ನ್ಯಾಯಾಲಯ ಹೇಳಿದೆ.
ಮಾರ್ಚ್ 6ರೊಳಗೆ ದೇಣಿಗೆದಾರರ ವಿವರಗಳನ್ನು ಬಹಿರಂಗಪಡಿಸುವಂತೆ ಭಾರತೀಯ ಸ್ಟೇಟ್ ಬ್ಯಾಂಕ್ ಗೆ ನಿರ್ದೇಶನ ನೀಡಿದೆ. ಆದರೆ, ಚುನಾವಣಾ ಬಾಂಡ್ ಗಳ ಮೂಲಕ ತಾನು ನಡೆಸಿರುವ ಕಳ್ಳ ವ್ಯವಹಾರಗಳನ್ನು ಮುಚ್ಚಿ ಹಾಕಲು ಮೋದಿ ಸರಕಾರವು ದೇಶದ ಅತಿ ದೊಡ್ಡ ಬ್ಯಾಂಕನ್ನು ಗುರಾಣಿಯಾಗಿ ಬಳಸಿಕೊಳ್ಳುತ್ತಿದೆ” ಎಂದು ಖರ್ಗೆ ಟ್ವೀಟ್ ಮಾಡಿದ್ದಾರೆ