Mysore
25
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ರಾಷ್ಟ್ರದ ಕಾವಲುಗಾರ ಕಡೆಯಿಂದ ಇಂತಹ ಕ್ರೌರ್ಯವನ್ನು ನೋಡುವುದು ನೋವುಂಟುಮಾಡುತ್ತದೆ: ರಾಗಾ

ನವದೆಹಲಿ: ರಾಷ್ಟ್ರ ರಾಜಧಾನಿಯ ಕರ್ತವ್ಯ ಪಥದಲ್ಲಿ ಕುಸ್ತಿಪಟು ವಿನೇಶ್ ಫೋಗಟ್ ಅವರು ಖೇಲ್ ರತ್ನ ಮತ್ತು ಅರ್ಜುನ ಪ್ರಶಸ್ತಿಯನ್ನು ತೊರೆದಿರುವ ಬಗ್ಗೆ ವಿಷಾದ ವ್ಯಕ್ತಪಡಿಸಿರುವ ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ, ಪ್ರಧಾನಿ ನರೇಂದ್ರ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಪ್ರಧಾನಿ ರಾಷ್ಟ್ರದ ಕಾವಲುಗಾರ ಮತ್ತು ಅವರ ಕಡೆಯಿಂದ ‘ಇಂತಹ ಕ್ರೌರ್ಯ’ವನ್ನು ನೋಡುವುದು ನೋವುಂಟುಮಾಡುತ್ತದೆ ಎಂದಿದ್ದಾರೆ.

ಕರ್ತವ್ಯ ಪಥದಲ್ಲಿನ ಫೋಗಟ್‌ ಅವರ ವಿಡಿಯೋವನ್ನು ತಮ್ಮ ಎಕ್ಸ್‌ ಖಾತೆಯಲ್ಲಿ ಹಂಚಿಕೊಂಡಿರುವ ರಾಹುಲ್, ‘ದೇಶದ ಪ್ರತಿಯೊಬ್ಬ ಹೆಣ್ಣು ಮಗಳಿಗೂ ಸ್ವಾಭಿಮಾನ ಮೊದಲು ಬರುತ್ತದೆ. ಅದರ ನಂತರವೇ ಯಾವುದೇ ಪದಕ ಅಥವಾ ಗೌರವ ಬರುತ್ತದೆ’ ಎಂದಿದ್ದಾರೆ.

‘ಘೋಷಿತ ಬಾಹುಬಲಿ’ಯಿಂದ ಪಡೆದ ‘ರಾಜಕೀಯ ಲಾಭ’ದ ಬೆಲೆ ಈ ವೀರ ಹೆಣ್ಣುಮಕ್ಕಳ ಕಣ್ಣೀರನ್ನು ಮೀರಿದೆಯೇ?. ಪ್ರಧಾನಿ ರಾಷ್ಟ್ರದ ಕಾವಲುಗಾರ, ಅವರ ಕಡೆಯಿಂದ ಇಂತಹ ಕ್ರೌರ್ಯವನ್ನು ನೋಡುವುದು ನೋವುಂಟುಮಾಡುತ್ತದೆ’ ಎಂದು ಬರೆದುಕೊಂಡಿದ್ದಾರೆ.

ಡಬ್ಲ್ಯುಎಫ್ಐ ಅಧ್ಯಕ್ಷ ಸ್ಥಾನಕ್ಕೆ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಆಯ್ಕೆಗೆ ಪ್ರತಿಭಟನೆಯ ಸಂಕೇತವಾಗಿ ವಿನೇಶಾ ಅವರು ಪ್ರಶಸ್ತಿಗಳನ್ನು ಮರಳಿಸುವುದಾಗಿ ಘೋಷಿಸಿದ್ದರು. ಅವರಿಗಿಂತ ಮೊದಲು ಭಜರಂಗ ಪೂನಿಯಾ ತಮ್ಮ ಪ್ರಶಸ್ತಿಗಳನ್ನು ಪಾದಚಾರಿ ಮಾರ್ಗದಲ್ಲಿ ತೊರೆದಿದ್ದರು. ಇದಾದ ಎರಡು-ಮೂರು ದಿನಗಳ ಬಳಿಕ ವಿನೇಶ್‌ ಫೋಗಾಟ್‌ ಅವರು ತಮ್ಮ ಖೇಲ್‌ ರತ್ನ ಮತ್ತು ಅರ್ಜುನ ಪ್ರಶಸ್ತಿಗಳನ್ನು ರಸ್ತೆಯಲ್ಲಿ ತೊರೆದು ಹೋಗಿದ್ದರು.

ಒಲಿಂಪಿಕ್ ಪದಕ ವಿಜೇತರಾದ ಸಾಕ್ಷಿ ಮಲಿಕ್ ಮತ್ತು ಬಜರಂಗ್ ಪುನಿಯಾ ಅವರೊಂದಿಗೆ ಫೋಗಟ್ ಅವರು, ಭಾರತೀಯ ಕುಸ್ತಿ ಫೆಡರೇಷನ್ (ಡಬ್ಲ್ಯುಎಫ್ಐ) ಅಧ್ಯಕ್ಷ ಸ್ಥಾನಕ್ಕೆ ಲೈಂಗಿಕ ಕಿರುಕುಳದ ಆರೋಪ ಹೊತ್ತಿದ್ದ ಬ್ರಿಜ್ ಭೂಷಣ್ ಶರಣ್ ಸಿಂಗ್ ಅವರ ಆಪ್ತ ಸಂಜಯ್ ಸಿಂಗ್ ಅವರ ಆಯ್ಕೆಯನ್ನು ವಿರೋಧಿಸಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!