ಜನವರಿ 22ರಂದು ಅಯೋಧ್ಯೆಯ ರಾಮ ಮಂದಿರದಲ್ಲಿ ರಾಮ ದೇವರ ಪ್ರಾಣ ಪ್ರತಿಷ್ಠೆ ಕಾರ್ಯ ನಡೆಯಲಿದೆ. ಈ ದಿನದಂದು ಭಾರತದಾದ್ಯಂತ ರೈಲು ನಿಲ್ದಾಣಗಳಲ್ಲಿರುವ ಪರದೆಗಳಲ್ಲಿ ಪ್ರಾಣ ಪ್ರತಿಷ್ಠಾಪನೆ ಕಾರ್ಯದ ನೇರ ಪ್ರಸಾರವನ್ನು ಮಾಡಲು ರೈಲ್ವೆ ಇಲಾಖೆ ಹೇಳಿಕೆ ನೀಡಿದೆ ಎಂದು ಎಎನ್ಐ ವರದಿ ಮಾಡಿದೆ.
ದೇಶಾದ್ಯಂತ ಒಟ್ಟು 9000 ಪರದೆಗಳು ಇದ್ದು ಈ ಪರದೆಗಳನ್ನು ರಾಮಮಂದಿರ ಪ್ರಾಣ ಪ್ರತಿಷ್ಠಾಪನೆ ನೇರಪ್ರಸಾರ ಮಾಡಲು ಬಳಸಬಹುದು ಎಂದು ಸರ್ಕಾರಿ ಮೂಲಗಳು ಹೇಳಿರುವುದಾಗಿ ಸಹ ಎಎನ್ಐ ಈ ವರದಿಯಲ್ಲಿ ತಿಳಿಸಿದೆ. ಇನ್ನು ಕೇಂದ್ರ ಸರ್ಕಾರ ಆ ದಿನದಂದು ತನ್ನ ನೌಕರರು ಪ್ರಾಣಪ್ರತಿಷ್ಠೆ ಕಾರ್ಯದ ನೇರಪ್ರಸಾರವನ್ನು ವೀಕ್ಷಿಸಲೆಂದು ಅರ್ಧ ದಿನ ರಜೆಯನ್ನೂ ಸಹ ಘೋಷಿಸಿದೆ.