Mysore
23
overcast clouds

Social Media

ಶನಿವಾರ, 13 ಜೂನ್ 2026
Light
Dark

ಟರ್ಕಿ, ಸಿರಿಯಾ ಭೂಕಂಪ; ಅವಶೇಷಗಳಡಿ ಸಿಲುಕಿದ ಜನ : ಮೃತರ ಸಂಖ್ಯೆ 7926ಕ್ಕೆ ಏರಿಕೆ

* ಟರ್ಕಿ ಗಡಿಯಲ್ಲಿ 6,000 ಕಟ್ಟಡಗಳು ನೆಲಸಮ
* ಹತ್ತು ಪ್ರಾಂತ್ಯಗಳಲ್ಲಿ 3 ತಿಂಗಳು ತುರ್ತುಸ್ಥಿತಿ
* ಭಾರತದಿಂದ ಪರಿಹಾರ ಸಾಮಗ್ರಿಗಳ ರವಾನೆ

ಅದಾನಾ/ಅಂಕಾರಾ: ಟರ್ಕಿ ಮತ್ತು ಸಿರಿಯಾದಲ್ಲಿ ಸೋಮವಾರ ಸಂಭವಿಸಿದ ಪ್ರಬಲ ಭೂಕಂಪದಿಂದ ಸಾವಿನ ಸಂಖ್ಯೆ 8,000 ಸಾವಿರ ದಾಟಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಉಭಯ ದೇಶಗಳಲ್ಲಿ ಸಾವು-ನೋವಿನ ಸಂಖ್ಯೆ ಹೆಚ್ಚಾಗುತ್ತಿದ್ದು, ರಕ್ಷಣಾ ಕಾರ್ಯ ಭರದಿಂದ ಸಾಗುತ್ತಿದೆ ಎಂದು ಐಎಎನ್‌ಎಸ್ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಉಭಯ ರಾಷ್ಟ್ರಗಳಲ್ಲಿ ಬುಧವಾರ ಬೆಳಿಗ್ಗೆ 8 ಗಂಟೆಯವರೆಗೆ ಒಟ್ಟು 7926  ಮಂದಿ ಮೃತಪಟ್ಟಿದ್ದಾರೆ. ಕಟ್ಟಡಗಳ ಅವಶೇಷಗಳಡಿ ಸಿಲುಕಿದವರ ರಕ್ಷಣೆಗಾಗಿ ತ್ವರಿತ ಕಾರ್ಯಆಚರಣೆ  ಮುಂದುವರಿದಿದೆ. ಟರ್ಕಿಯಲ್ಲಿ ಇಲ್ಲಿಯವರೆಗೂ 5,894 ಜನರು ಮೃತಪಟ್ಟಿದ್ದಾರೆ, 34,810 ಜನರು ಗಾಯಗೊಂಡಿದ್ದಾರೆ ಎಂದು ಟರ್ಕಿ ಉಪಾಧ್ಯಕ್ಷ ಮಾಹಿತಿ ನೀಡಿದ್ದಾರೆ.
ಸಿರಿಯಾದಲ್ಲಿ ಸಾವಿನ ಸಂಖ್ಯೆ 2,032ಕ್ಕೆ ಏರಿಕೆಯಾಗಿದೆ. 2600ಕ್ಕೂ ಹೆಚ್ಚು ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಸಿರಿಯಾ ಅಧಿಕಾರಿಗಳು ಹೇಳಿದ್ದಾರೆ. ಅಸ್ಥಿರ ಕಟ್ಟಡಗಳು ಮತ್ತು ಕೊರೆಯುವ ಚಳಿ, ರಕ್ಷಣಾ ಕಾರ್ಯಕ್ಕೆ ಸವಾಲಾಗಿದೆ. ಉಭಯ ದೇಶಗಳಲ್ಲಿ 24,400 ಕ್ಕೂ ಹೆಚ್ಚು ತುರ್ತುಸೇವಾ ಸಿಬ್ಬಂದಿ ರಕ್ಷಣಾ ಕಾರ್ಯಾಚರಣೆಯಲ್ಲಿ ತೊಡಗಿದ್ದಾರೆ.
ಸಿರಿಯಾದ ಅಲೆಪ್ಪೊ ಮತ್ತು ಹವಾ ನಗರ ಹಾಗೂ ಟರ್ಕಿಯ ದಿಯಾರ್ ಬಕೀರ್ವರೆಗೆ ಸಾವಿರಾರು ಕಟ್ಟಡಗಳು ಕುಸಿದಿವೆ. ಟರ್ಕಿಯಾ ಗಡಿ ಪ್ರದೇಶದಲ್ಲಿ ಸುಮಾರು 6 ಸಾವಿರ ಕಟ್ಟಡಗಳು ನೆಲಸಮವಾಗಿವೆ. ಆಗ್ನೇಯದ ಹತ್ತು ಪ್ರಾಂತ್ಯಗಳಲ್ಲಿ ಮೂರು ತಿಂಗಳ ಕಾಲ ತುರ್ತು ಸ್ಥಿತಿಯನ್ನು ಟರ್ಕಿ ಅಧ್ಯಕ್ಷ ರೆಸೆಪ್ ತಯ್ಯಿಪ್ ಎರ್ಡೊಗನ್ ಘೋಷಣೆ ಮಾಡಿದ್ದಾರೆ.
ಭಾರತ, ಅಮೆರಿಕ, ಬ್ರಿಟನ್ ಸೇರಿ ವಿಶ್ವದ ಹಲವು ರಾಷ್ಟ್ರಗಳು ಸಂತ್ರಸ್ತರ ನೆರವಿಗಾಗಿ ಔಷಧ, ಪರಿಹಾರ ಸಾಮಗ್ರಿ ಹಾಗೂ ವಿಪತ್ತು ಸ್ಪಂದನಾ ಪಡೆಗಳನ್ನು ಟರ್ಕಿಗೆ ಕಳುಹಿಸಿವೆ.


ಭಾರತದಿಂದ ನಾಲ್ಕು ವಿಮಾನ ಟರ್ಕಿಗೆ
ಹೊಸದಿಲ್ಲಿ: ಭೂಕಂಪ ಪೀಡಿತ ಟರ್ಕಿಗೆ ನೆರವಿನ ಹಸ್ತ ಚಾಚಿರುವ ಭಾರತ, ಅಗತ್ಯ ವೈದ್ಯಕೀಯ, ಪರಿಹಾರ ಸಾಮಗ್ರಿ ಸೇರಿದಂತೆ ಭಾರತೀಯ ವಾಯುಪಡೆಯ ಬೃಹತ್ ಗಾತ್ರದ ನಾಲ್ಕು ಸಿ-17 ಗ್ಲೋಬ್ಮಾಸ್ಟರ್ ಮಿಲಿಟರಿ ಸರಕು ಸಾಗಾಟದ ವಿಮಾನಗಳನ್ನು ಟರ್ಕಿಗೆ ರವಾನಿಸಿದೆ.
ಇದೇ ವೇಳೆ ಆರು ಟನ್ ಪರಿಹಾರ ಸಾಮಗ್ರಿಗಳನ್ನು ಹೊತ್ತ ಭಾರತೀಯ ವಾಯುಪಡೆಯ ಮತ್ತೊಂದು ಸಿ-130 ಜೆ ವಿಮಾನ ಸಿರಿಯಾಕ್ಕೆ ತೆರಳಿದೆ. ಭೂಕಂಪ ಸಂತ್ರಸ್ತರ ನೆರವಿಗೆ ಔಷಧಿ, ಪರಿಹಾರ ಸಾಮಗ್ರಿ, ಸಂಚಾರಿ ಆಸ್ಪತ್ರೆ ಹಾಗೂ ವಿಶೇಷ ರಕ್ಷಣಾ ಕಾರ್ಯಾಚರಣೆಯ ತಂಡವನ್ನು ಕಳುಹಿಸಲಾಗಿದೆ.
ಈ ಸಂಕಷ್ಟದ ಸಮಯದಲ್ಲಿ ಟರ್ಕಿ ಮತ್ತು ಸಿರಿಯಾದೊಂದಿಗೆ ಭಾರತ ಒಗ್ಗಟ್ಟನ್ನು ಪ್ರದರ್ಶಿಸುತ್ತದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿದೇಶಾಂಗ ಸಚಿವ ಎಸ್. ಜೈಶಂಕರ್, ಪ್ರತ್ಯೇಕ ಟ್ವೀಟ್‌ಗಳಲ್ಲಿ ಬೆಂಬಲ ಸೂಚಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!