Mysore
21
overcast clouds

Social Media

ಶನಿವಾರ, 13 ಜೂನ್ 2026
Light
Dark

ಯತೀಂದ್ರಗೆ ನಗರಾಭಿವೃದ್ಧಿ; ಮೈಸೂರಿಗೆ ಯೋಜನೆಗಳ ಸಮೃದ್ಧಿ?

ಕೆ.ಬಿ.ರಮೇಶನಾಯಕ

ಮೈಸೂರು: ತವರಿನವರೇ ಮುಖ್ಯಮಂತ್ರಿಯಾಗಿದ್ದಾಗ ಹತ್ತಾರು ಯೋಜನೆಗಳು ಮಂಜೂರಾಗಿದ್ದರೆ, ಈಗ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಅವರಿಗೆ ಮಹತ್ವದ ನಗರಾಭಿವೃದ್ದಿ ಖಾತೆ ದೊರೆತಿರುವುದು ಮೈಸೂರು ಜಿಲ್ಲೆಗೆ ಹಲವು ಯೋಜನೆಗಳು ಜಾರಿಯಾಗುವ ನಿರೀಕ್ಷೆಯನ್ನು ಮೂಡಿಸಿದೆ.

ಸಿದ್ದರಾಮಯ್ಯ ಅವರ ಸಂಪುಟದಲ್ಲಿ ಭೈರತಿ ಸುರೇಶ್ ನಗರಾಭಿವೃದ್ದಿ ಸಚಿವರಾಗಿದ್ದರೂ ಮೈಸೂರಿಗೆ ಅಷ್ಟೇನೂ ಪೂರಕವಾದ ಯೋಜನೆಗಳು ಬರಲಿಲ್ಲ. ಆದರೆ, ಈಗ ಯತೀಂದ್ರ ಅವರೇ ಈ ಖಾತೆ ಸಚಿವರಾಗಿರುವ ಪರಿಣಾಮವಾಗಿ ಮೈಸೂರು ನಗರಪಾಲಿಕೆ, ಮೈಸೂರು ಅಭಿವೃದ್ಧಿ ಪ್ರಾಧಿಕಾರ, ನಗರಸಭೆಗಳ ಅಭಿವೃದ್ಧಿಗೆ ಭರಪೂರ ಅನುದಾನ ದೊರೆಯುವ ಆಶಯ ಅಧಿಕಾರಿಗಳದ್ದಾಗಿದೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ಕಾಲದಲ್ಲಿ ಸ್ಥಾಪನೆಯಾದ ಸಿಐಟಿಬಿಯು ಕಾಲಕ್ರಮೇಣ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವಾಗಿತ್ತು. ಆದರೆ, ದೇವನೂರು ಎರಡನೇ ಹಂತದ ಜಮೀನಿಗೆ ಬದಲಿಯಾಗಿ ವಿಜಯನಗರದಲ್ಲಿ ನಿವೇಶನ ಹಂಚಿಕೆ ವಿಚಾರದಲ್ಲಿ ಉಂಟಾದ ವಿವಾದದಿಂದಾಗಿ ಹಲವಾರು ವಿದ್ಯಮಾನಗಳು ನಡೆಯಲು ಕಾರಣವಾಗಿತ್ತು. ಇದೇ ಸಂದರ್ಭದಲ್ಲಿ ಮುಡಾ ವಿಸರ್ಜಿಸಿ ಮೈಸೂರು ಅಭಿವೃದ್ಧಿ ಪ್ರಾಧಿಕಾರವನ್ನಾಗಿ ಬದಲಿಸಲಾಗಿತ್ತು. ನಂತರ ಆಡಳಿತದ ಕೆಲಸಗಳು ಸುಸೂತ್ರವಾಗಿ ನಡೆಯುತ್ತಿದ್ದರೂ ಬಹುನಿರೀಕ್ಷಿತ ಯೋಜನೆಗಳು ಹಾಗೆಯೇ ಉಳಿದಿವೆ.

ಮೈಸೂರಿನ ದಟ್ಟಗಳ್ಳಿ, ರಾಮಕೃಷ್ಣನಗರ, ವಿಜಯನಗರ, ಗೋಕುಲಂ ಬಡಾವಣೆಯಲ್ಲಿರುವ ಜಾಗದಲ್ಲಿ ಗುಂಪು ಮನೆಗಳ ನಿರ್ಮಾಣದ ಪ್ರಸ್ತಾವನೆ ಸರ್ಕಾರದ ಹಂತದಲ್ಲಿದೆ. ಬಡ – ಮಧ್ಯಮ ವರ್ಗದವರಿಗೆ ಕಡಿಮೆ ದರದಲ್ಲಿ ನಿವೇಶನಗಳ ಹಂಚಿಕೆಗೆ ನಿರ್ಧರಿಸಲಾಗಿತ್ತು. ಈ ನಿಟ್ಟಿನಲ್ಲಿ ೨,೨೦೦ ಎಕರೆ ಪ್ರದೇಶದಲ್ಲಿ ವಿವಿಧ ಅಳತೆಯ ನಿವೇಶಗಳನ್ನು ರಚಿಸಲು ಬೊಮ್ಮೇನಹಳ್ಳಿ ಬಡಾವಣೆ ನಿರ್ಮಾಣಕ್ಕೆ ಭೂಸ್ವಾಧಿನಕ್ಕಾಗಿ ಅನುದಾನ ಕಾಯ್ದಿರಿಸಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಅದೇ ರೀತಿ ನಗರದ ಹೊರವಲಯದಲ್ಲಿ ಮತ್ತೊಂದು ಪೆರಿಫೆರಲ್ ರಿಂಗ್ ರಸ್ತೆಯ ನಿರ್ಮಾಣಕ್ಕೆ ೭ ಕೋಟಿ ರೂ. ವೆಚ್ಚದಲ್ಲಿ ವಿಸ್ತೃತ ಯೋಜನಾ ವರದಿ (ಡಿಪಿಆರ್) ತಯಾರಿಕೆಗೆ ಟೆಂಡರ್ ನೀಡಲಾಗಿದೆ. ಖಾಸಗಿ ಏಜೆನ್ಸಿಯು ಡಿಪಿಆರ್ ತಯಾರಿಸಲು ಆಡಳಿತಾತ್ಮಕ ಅನುಮೋದನೆಯ ನಿರೀಕ್ಷೆಯಲ್ಲಿದೆ. ಹೀಗಾಗಿ, ನೂತನ ನಗರಾಭಿವೃದ್ಧಿ ಸಚಿವ ಯತೀಂದ್ರ ಅವರು ಮುಂದಿನ ದಿನಗಳಲ್ಲಿ ಜನರ ಬಹು ನಿರೀಕ್ಷಿತ ಯೋಜನೆಗಳನ್ನು ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ.

ವಿಶೇಷವಾಗಿ ವಸತಿ ಇಲಾಖೆ ವತಿಯಿಂದ ಲಲಿತಾದ್ರಿಪುರ ಗ್ರಾಮದ ಬಳಿ ನಿರ್ಮಾಣವಾಗುತ್ತಿರುವ ಬಹುಮಹಡಿ ವಸತಿ ಸಮುಚ್ಚಯದಲ್ಲಿ ವರುಣ ಕ್ಷೇತ್ರಕ್ಕೆ ಹಂಚಿಕೆಯಾಗಿರುವ ೫೯೦ ಮನೆಗಳಿಗೆ -ಲಾನುಭವಿಗಳ ಆಯ್ಕೆಯಲ್ಲಿ ಒತ್ತಡ ಬಂದಿದ್ದು, ಹಾಗಾಗಿ ಮತ್ತಷ್ಟು ಗುಂಪು ಮನೆಗಳನ್ನು ನಿರ್ಮಿಸಲು ನಡೆಸಿದ್ದ ಆಲೋಚನೆಗೆ ಬಲ ತುಂಬುವ ಸಾಧ್ಯತೆ ಇದೆ. ಮೈಸೂರು ನಗರಪಾಲಿಕೆಯನ್ನು ಬೃಹತ್ ಮೈಸೂರು ನಗರಪಾಲಿಕೆಯನ್ನಾಗಿ ಪ್ರಾಥಮಿಕ ಅಧಿಸೂಚನೆ ಹೊರಡಿಸಿ ಆಕ್ಷೇಪಣೆ ಸಲ್ಲಿಕೆಗೆ ನೀಡಿದ್ದ ಗಡುವು ಮೀರಿ ನಾಲ್ಕು ತಿಂಗಳುಗಳು ಕಳೆದರೂ ಅಂತಿಮ ಅಧಿಸೂಚನೆ ಹೊರಬಿದ್ದಿಲ್ಲ. ೨೦೨೫ರ ಜನಗಣತಿ ಮುಗಿದ ಬಳಿಕ ಆದೇಶ ಹೊರಬೀಳುವ ನಿರೀಕ್ಷೆ ಇತ್ತು. ಆದರೆ, ಆಂತರಿಕವಾಗಿ ನಾನಾ ಸಮಸ್ಯೆಗಳು ಎದುರಾಗಿವೆ. ಇದರಿಂದ ಮುಂದೆ ಬೃಹತ್ ಎಂಸಿಸಿಯನ್ನಾಗಿ ರೂಪಿಸಲು ಯತೀಂದ್ರ ಅವರ ಮೇಲೆ ಒತ್ತಡ ಹೇರುವ ಸಾಧ್ಯತೆ ಇದೆ. ಮುಂದೆ ಚುನಾವಣೆ ನಡೆಸುವ ಮೊದಲೇ ವರುಣ ಭಾಗದ ಗ್ರಾಮಗಳನ್ನು ಬೃಹತ್ ಎಂಸಿಸಿ ವ್ಯಾಪ್ತಿಗೆ ತರುವುದಕ್ಕೂ ದಾರಿಯಾಗುತ್ತದೆ ಎಂಬ ಆಶಯ ಇದೆ.

ಕಳೆದ ಎರಡು ವರ್ಷಗಳಿಂದ ಜನಪ್ರತಿನಿಧಿಗಳಿಲ್ಲದೆ ಕೇಂದ್ರದಿಂದ ಬರುತ್ತಿದ್ದ ಅನುದಾನ ಸ್ಥಗಿತಗೊಂಡಿರುವ ಕಾರಣ ವಿಶೇಷ ಅನುದಾನ ಬಿಡುಗಡೆ ಮಾಡುವಂತೆ ಅಧಿಕಾರಿಗಳು ಪ್ರಸ್ತಾವನೆ ಸಲ್ಲಿಸುವ ಜತೆಗೆ, ಶಾಸಕರು ಕೂಡ ಒತ್ತಡ ಹೇರುವ ಸಾಧ್ಯತೆ ಇದೆ.

೧೫ನೇ ಹಣಕಾಸು ಆಯೋಗದ ಅನುದಾನ ಸ್ಥಗಿತಗೊಂಡಿರುವ ಕಾರಣ ರಾಜ್ಯ ಸರ್ಕಾರದ ವಿವಿಧ ಅನುದಾನದಿಂದ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲಾಗುತ್ತಿದ್ದರೂ ಕೂಡ ಎಸ್‌ಟಿಪಿ, ಕುಡಿಯುವ ನೀರಿನ ಯೋಜನೆಗಳು, ಪೈಪ್‌ಲೇನ್ ಕಾಮಗಾರಿಗಳಿಗೆ ಅನುದಾನದ ಕೊರತೆಯನ್ನು ನೀಗಿಸುವ ನಿರೀಕ್ಷೆಯಿಂದ ಅಧಿಕಾರಿಗಳು ಕಾದು ಕುಳಿತಿದ್ದಾರೆ.

” ನಗರಾಭಿವೃದ್ಧಿ ಸಚಿವರಿಗೆ ವಿಶೇಷ ಅನುದಾನ ಬಿಡುಗಡೆಗೆ ಸಂಪೂರ್ಣ ಅಽಕಾರ ಇರುವುದರಿಂದ ವಾರ್ಡುಗಳ ಅಭಿವೃದ್ಧಿಗೆ ಒಂದಿಷ್ಟು ಅನುದಾನ ಸಿಗಬಹುದೆಂಬ ಲೆಕ್ಕಾಚಾರ ಅಡಗಿದೆ. ಮತ್ತೊಂದೆಡೆ ಮೈಸೂರು ಜಿಲ್ಲೆಯ ಹುಣಸೂರು, ನಂಜನಗೂಡು ನಗರಸಭೆಗಳೂ ಅನುದಾನ ಇಲ್ಲದೆ ಸೊರಗಿವೆ.”

Tags:
error: Content is protected !!