ಹೊಸದಿಲ್ಲಿ : ಸೈಬರ್ ಭದ್ರತೆ ಮತ್ತು ಸುರಕ್ಷತಾ ಆಪ್ ಆದ ʻಸಂಚಾರ ಸಾಥಿʻ ಪರ-ವಿರೋದದ ಚರ್ಚೆಯ ನಡುವೆ, ಡಿ.೨ರಂದು ಒಂದೇ ದಿನ ಶೇಕಡಾ ೧೦ ರಷ್ಟು ಡೌನ್ಲೋಡ್ ಕಂಡಿದೆ ಎಂದು ದೂರಸಂಪರ್ಕ ಇಲಾಖೆ ಬುಧವಾರ ತಿಳಿಸಿದೆ.
ಸೈಬರ್ ಭದ್ರತೆ ಹಿನ್ನೆಲೆ ಆಪ್ ಅನ್ನು ಹೊಸ ಮೊಬೈಲ್ಗಳಲ್ಲಿ ಕಡ್ಡಾಯವಾಗಿ ಅಳವಡಿಸಲು ಕೇಂದ್ರ ಸರ್ಕಾರ ಆದೇಶ ಹೊರಡಿಸಿತ್ತು. ಇದನ್ನು ವಿಪಕ್ಷಗಳು ತೀವ್ರವಾಗಿ ಟೀಕಿಸಿ, ಇದು ಜನರ ಮೇಲೆ ಗೂಢಾಚಾರಿಕೆ ನಡೆಸಲು ಮತ್ತು ಖಾಸಗಿತನಕ್ಕೆ ಧಕ್ಕೆ ತರುವ ಉದ್ದೇಶ ಹೊಂದಿದೆ ಎಂದು ವಿರೋಧಿಸಿದ್ದವು.
ಆಪ್ ಕುರಿತು ಕೇಂದ್ರ ಸರ್ಕಾರ ಮತ್ತು ವಿಪಕ್ಷಗಳು ಪರಸ್ಪರ ವಾಗ್ವಾದ ನಡೆಸಿದ್ದವು. ಇದರ ನಡುವೆಯೇ, ಆಪ್ ಬಳಕೆದಾರರ ಸಂಖ್ಯೆ ಒಂದೇ ದಿನದಲ್ಲಿ ೧೦ ಪಟ್ಟು ಹೆಚ್ಚಾಗಿದೆ. ವಿವಾದಕ್ಕೂ ಮೊದಲು ಆಪ್ ಬಳಕೆಯು ದೈನಂದಿನ ಸರಾಸರಿ ೬೦ ಸಾವಿರ ಇತ್ತು. ಬಳಿಕ ಇದು ೬ ಲಕ್ಷಕ್ಕೆ ಏರಿದೆ. ಕೇಂದ್ರ ಸರ್ಕಾರ ಆದೇಶ ಹೊರಡಿಸುವ ಮೊದಲೇ ೧.೫ ಕೋಟಿ ಜನರು ಅಪ್ಲಿಕೇಶನ್ ಅನ್ನು ಬಳಕೆ ಮಾಡುತ್ತಿದ್ದರು ಎಂದು ದೂರಸಂಪರ್ಕ ಇಲಾಖೆ ತಿಳಿಸಿದೆ.
ಸಚಿವಾಲಯ ಸ್ಪಷ್ಟನೆ ಹೀಗಿದೆ
ಸಂಚಾರ ಸಾಥಿ ಅಪ್ಲಿಕೇಶನ್ ಬಗ್ಗೆ ಕೇಳಿ ಬಂದ ವಿವಾದದ ಕುರಿತು ಸ್ಪಷ್ಟನೆ ನೀಡಿದ್ದ ದೂರಸಂಪರ್ಕ ಇಲಾಖೆ, ಆಪ್ ಅನ್ನು ಮೊಬೈಲ್ ಫೋನ್ಗಳಲ್ಲಿ ಮೊದಲೇ ಸ್ಥಾಪಿಸಲ್ಪಡುತ್ತದೆ. ಆದರೆ, ಅದು ಜನರ ಮೇಲೆ ಬೇಹುಗಾರಿಕೆ ನಡೆಸುತ್ತದೆ ಎಂದು ಅರ್ಥವಲ್ಲ. ಇದು ಕಣ್ಗಾವಲು ಸಾಧನವಾಗಿ ಕಾರ್ಯನಿರ್ವಹಿಸುವುದಿಲ್ಲ ಮತ್ತು ಇದು ನಿಮ್ಮ ಡೇಟಾವನ್ನು ಯಾವುದೇ ರೀತಿಯಲ್ಲಿ ಟ್ರ್ಯಾಕ್ ಮಾಡುವುದಿಲ್ಲ. ವೈಯಕ್ತಿಕ ಮಾಹಿತಿಯನ್ನು ಪ್ರವೇಶಿಸದೇ ನಿಮ್ಮ ಮೊಬೈಲ್ ಗುರುತನ್ನು ರಕ್ಷಿಸುವುದು ಇದರ ಏಕೈಕ ಉದ್ದೇಶ ಎಂದು ದೃಢಪಡಿಸಿತ್ತು.
ಇದನ್ನೂ ಓದಿ:-ಪವರ್ ಶೇರಿಂಗ್ ವಿಚಾರ : ಸ್ಫೋಟಕ ಮಾಹಿತಿ ಹೊರ ಹಾಕಿದ ಸಚಿವ ಜಾರಕಿ ಹೊಳಿ
ಕೇಂದ್ರ ಟೆಲಿಕಾಂ ಸಚಿವ ಜ್ಯೋತಿರಾದಿತ್ಯ ಸಿಂಽಯಾ ಕೂಡ ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಮೊಬೈಲ್ ನಲ್ಲಿ ಆಪ್ ಅಳವಡಿಕೆ ಕಡ್ಡಾಯವಲ್ಲ. ಬಳಕೆದಾರರಿಗೆ ಬೇಡವೆನಿಸಿದಾಗ ಅದನ್ನು ಡಿಲೀಟ್ ಮಾಡಬಹುದು. ಒಂದು ವೇಳೆ ನಿಮ್ಮ ಮೊಬೈಲ್ನಲ್ಲಿ ಸಂಚಾರ್ ಸಾಥಿ ಆಪ್ ಅಳವಡಿಕೆ ಆಗಿದ್ದರೆ ಅದನ್ನು ಬೇಕಾದವರು ಮುಂದುವರಿಸಬಹುದು. ಈ ಆಪ್ ವಂಚನೆ ಮತ್ತು ಸೈಬರ್ ಅಪರಾಧಗಳಿಂದ ಜನರನ್ನು ರಕ್ಷಿಸಲು ಅಸ್ತಿತ್ವದಲ್ಲಿದೆ. ಇದು ದೇಶದ ತುಂಬಾ ಜನರಿಗೆ ಗೊತ್ತಿಲ್ಲ ಎಂದರು.
‘ಸೈಬರ್ ಅಪರಾಧಗಳು ಹೆಚ್ಚುತ್ತಿರುವ ಹಿನ್ನೆಲೆ, ಸುರಕ್ಷತೆಯ ದೃಷ್ಟಿಯಿಂದ ಈ ಆಪ್ ಎಲ್ಲರಿಗೂ ತಲುಪುವಂತೆ ಮಾಡುವುದು ನಮ್ಮ ಜವಾಬ್ದಾರಿ. ನೀವು ಅದನ್ನು ಅಳಿಸಲು ಬಯಸಿದರೆ, ಡಿಲೀಟ್ ಮಾಡಿ. ಬಳಸಲು ಬಯಸಿದರೆ ಅದರಲ್ಲಿ ನೋಂದಣಿ ಮಾಡಿಕೊಳ್ಳಿ. ಬಳಕೆದಾರರಿಗೆ ಸಂಪೂರ್ಣ ಸ್ವಾತಂತ್ರ್ಯವಿದೆ ಎಂದು ತಿಳಿಸಿದರು.





