Mysore
18
clear sky

Social Media

ಶನಿವಾರ, 07 ಫೆಬ್ರವರಿ 2026
Light
Dark

ಪಾಲಿಕೆಗಳ ನೌಕರರ ಬೇಡಿಕೆಗಳಿಗೆ ಸ್ಪಂದಿಸಿ ; ಸಿಎಂಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಆಗ್ರಹ

kumaraswamy statement

ಹೊಸದಿಲ್ಲಿ : ಅನಿರ್ದಿಷ್ಟಾವಧಿ ಮುಷ್ಕರ ನಡೆಸುತ್ತಿರುವ ಪಾಲಿಕೆಗಳ ನೌಕರರ ಬೇಡಿಕೆಗಳಿಗೆ ಸ್ಪಂದಿಸಬೇಕು ಎಂದು ಕೇಂದ್ರ ಸಚಿವ ಎಚ್.ಡಿ ಕುಮಾರಸ್ವಾಮಿ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಒತ್ತಾಯಿಸಿದ್ದಾರೆ.

ಈ ಬಗ್ಗೆ ಮಾಧ್ಯಮ ಹೇಳಿಕೆ ಬಿಡುಗಡೆ ಮಾಡಿರುವ ಅವರು, ಕೇವಲ ಶಾಸಕರ ದುಃಖ ದುಮ್ಮಾನ ಕೇಳಿದರೆ ಸಾಲದು. ಅನಿರ್ದಿಷ್ಟ ಮುಷ್ಕರ ನಡೆಸುತ್ತಿರುವ ಪಾಲಿಕೆಗಳ ನೌಕರರ ಕಷ್ಟಕಾರ್ಪಣ್ಯ ಆಲಿಸುವ ಹೃದಯವಂತಿಕೆ ತೋರಬೇಕು ರಾಜ್ಯ ಸರಕಾರಕ್ಕೆ ಚಾಟಿ ಬೀಸಿದ್ದಾರೆ.

ಪಾಲಿಕೆಗಳ ನೌಕರರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿಗಳು ತುರ್ತು ಗಮನ ಹರಿಸಬೇಕು. ಆದರೆ, ಶಾಸಕರ ಬಂಡಾಯ ತಣಿಸುವುದಕ್ಕೆ,ಕಾಂಗ್ರೆಸ್ ಪಕ್ಷದಲ್ಲಿನ ಬೇಗುದಿಯನ್ನು ಕಡಿಮೆ ಮಾಡಲು ಸಿಎಂ, ಡಿಸಿಎಂ ಅವರಿಗೆ ಸಮಯವೇ ಸಾಲುತ್ತಿಲ್ಲ. ಇದನ್ನು ನಾನು ತಪ್ಪೆನ್ನಲಾರೆ. ಆದರೆ, ಪಾಲಿಕೆ ನೌಕರರು ಎಸಗಿದ ಪಾಪವೇನು? ಅವರ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವ ನಿಟ್ಟಿನಲ್ಲಿ ವಿಳಂಬ ಧೋರಣೆ ಯಾಕೆ? ಸ್ವತಃ ಮುಖ್ಯಮಂತ್ರಿ ಅವರೇ ಮಾನವೀಯ ನೆಲೆಗಟ್ಟಿನಲ್ಲಿ ತಕ್ಷಣವೇ ಕ್ರಮ ವಹಿಸುತ್ತಿಲ್ಲ, ಏಕೆ? ಹಗಲಿರುಳು ಜನರಿಗಾಗಿ ದುಡಿಯುವ ಅವರ ಬದುಕಿಗೂ ಗ್ಯಾರಂಟಿ ಕೊಡಬೇಕಲ್ಲವೇ? ಎಂದು ಕೇಂದ್ರ ಸಚಿವರು ಆಗ್ರಹಿಸಿದ್ದಾರೆ.

ಪಾಲಿಕೆಗಳ ನಿತ್ಯದ ಯಾವ ಕೆಲಸ ಕಾರ್ಯಗಳು ನಿಲ್ಲಬಾರದು. ಸ್ವಚ್ಛತೆ, ನೈರ್ಮಲ್ಯ ಹಾಗೂ ಸ್ಥಳೀಯ ಆಡಳಿತದ ದೃಷ್ಟಿಯಿಂದ ಪಾಲಿಕೆಗಳು ಮಹತ್ವ ಹೊಂದಿವೆ ಎಂಬುದನ್ನು ಆಡಳಿತಗಾರರು ಮರೆಯಬಾರದು ಎಂದು ಕುಮಾರಸ್ವಾಮಿ ಅವರು ಹೇಳಿದ್ದಾರೆ.

Tags:
error: Content is protected !!