ಚಂಡೀಗಢ : ಕೇಂದ್ರ ಸರ್ಕಾರ ಕೇಂದ್ರಾಡಳಿತ ಪ್ರದೇಶವಾದ ಚಂಡೀಗಢವನ್ನು ಸಂವಿಧಾನದ 240 ವಿಧಿಯ ವ್ಯಾಪ್ತಿಗೆ ಸೇರಿಸಲು ಪ್ರಸ್ತಾಪಿಸಿದೆ. ಇದು ಕೇಂದ್ರಾಡಳಿತ ಪ್ರದೇಶಕ್ಕೆ ನಿಯಮಗಳನ್ನು ರಚಿಸಲು ಮತ್ತು ನೇರವಾಗಿ ಶಾಸನ ರಚಿಸಲು ರಾಷ್ಟ್ರಪತಿಗೆ ಅಧಿಕಾರ ನೀಡುತ್ತದೆ.
ಈ ಕ್ರಮ ಪಂಜಾಬ್ನಾದ್ಯಂತ ಎಎಪಿ, ಕಾಂಗ್ರೆಸ್ ಮತ್ತು ಶಿರೋಮಣಿ ಅಕಾಲಿ ದಳದಿಂದ ತೀವ್ರ ವಿರೋಧಕ್ಕೆ ಕಾರಣವಾಗಿದ್ದು, ಕೇಂದ್ರ ಸರ್ಕಾರದ ವಿರುದ್ಧ ಕೆಂಡಕಾರುತ್ತಿವೆ. ಕೇಂದ್ರ ಸರ್ಕಾರ ಪಂಜಾಬ್ ನಗರದ ಮೇಲಿನ ದೀರ್ಘಕಾಲದ ಹಕ್ಕನ್ನು ದುರ್ಬಲಗೊಳಿಸಲು ಪ್ರಯತ್ನಿಸುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಇದನ್ನು ಓದಿ: ಗಣಿಗಾರಿಕೆ | ತೆರಕಣಾಂಬಿ ಭಾಗದಲ್ಲಿ ನಿಯಮಿ ಮೀರಿ ಸಂಚರಿಸುತ್ತಿರುವ ಟಿಪ್ಪರ್ಗಳು ; ಕ್ರಮಕ್ಕೆ ಆಗ್ರಹ
(ಸಂವಿಧಾನ 131 ನೇ ತಿದ್ದುಪಡಿ) ಮಸೂದೆ ಮಂಡನೆಗೆ ಸಿದ್ಧತೆ : ಡಿಸೆಂಬರ್ 1 ರಿಂದ ಪ್ರಾರಂಭವಾಗುವ ಸಂಸತ್ತಿನ ಚಳಿಗಾಲದ ಅಧಿವೇಶನದಲ್ಲಿ ಮಂಡಿಸಲು ಪಟ್ಟಿ ಮಾಡಲಾಗಿರುವ ಸಂವಿಧಾನ (131 ನೇ ತಿದ್ದುಪಡಿ) ಮಸೂದೆ 2025 ಚಂಡೀಗಢಕ್ಕೆ ನಿಯಮಗಳನ್ನು ಮಾಡಲು ಮತ್ತು ಸ್ವತಂತ್ರ ಆಡಳಿತಗಾರರನ್ನು ನೇಮಿಸಲು ರಾಷ್ಟ್ರಪತಿಗಳಿಗೆ ಅಧಿಕಾರ ನೀಡುತ್ತದೆ.
ಸಂಸತ್ತಿನ ಬುಲೆಟಿನ್ ಪ್ರಕಾರ, ಮಸೂದೆಯು ಚಂಡೀಗಢವನ್ನು ಶಾಸಕಾಂಗಗಳಿಲ್ಲದ ಇತರ ಕೇಂದ್ರಾಡಳಿತ ಪ್ರದೇಶಗಳಾದ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು, ಲಕ್ಷದ್ವೀಪ, ದಾದ್ರಾ ಮತ್ತು ನಗರ ಹವೇಲಿ ಮತ್ತು ದಮನ್ ಮತ್ತು ಡಿಯು ಮತ್ತು ಪುದುಚೇರಿ (ಅದರ ವಿಧಾನಸಭೆಯನ್ನು ವಿಸರ್ಜಿಸಿದಾಗ ಅಥವಾ ಅಮಾನತ್ತುಗೊಳಿಸಿದಾಗ) ಜೊತೆ ಜೋಡಿಸುವ ಗುರಿಯನ್ನು ಹೊಂದಿದೆ. 240 ನೇ ವಿಧಿಯು ಅಧ್ಯಕ್ಷರು ಸಂಸದೀಯ ಕಾನೂನಿನ ಬಲವನ್ನು ಹೊಂದಿರುವ ನಿಯಮಗಳನ್ನು ಹೊರಡಿಸಲು ಅನುಮತಿಸುತ್ತದೆ.
ಈ ಪ್ರಸ್ತಾಪ ಪಂಜಾಬ್ನ ರಾಜಕೀಯ ವಲಯದಲ್ಲಿ ತೀವ್ರ ಖಂಡನೆಗೆ ಗುರಿಯಾಗಿದೆ. ಇದನ್ನು ಗಂಭೀರ ಅನ್ಯಾಯ ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಕರೆದಿದ್ದು, ಬಿಜೆಪಿ ನೇತೃತ್ವದ ಎನ್ಡಿಎ ಸರ್ಕಾರ ಪಂಜಾಬ್ನ ರಾಜಧಾನಿಯನ್ನು ಕಿತ್ತುಕೊಳ್ಳಲು ಪಿತೂರಿ ನಡೆಸುತ್ತಿದೆ ಎಂದು ಆರೋಪಿಸಿದ್ದಾರೆ.





