Mysore
20
overcast clouds

Social Media

ಸೋಮವಾರ, 17 ಆಗಸ್ಟ್ 2026
Light
Dark

ಪಂಜಾಬ್‌ನ ಅದಂಪುರ ವಾಯುನೆಲೆಗೆ ಪ್ರಧಾನಿ ಮೋದಿ ಭೇಟಿ

ಅದಂಪುರ: ಮಹತ್ವದ ಬೆಳವಣಿಗೆಯೊಂದರಲ್ಲಿ ಭಾರತ-ಪಾಕಿಸ್ತಾನ ಕದನ ವಿರಾಮ ಘೋಷಣೆಯಾದ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಬೆಳಿಗ್ಗೆ ಪಂಜಾಬ್‍ನ ಅದಂಪುರ ವಾಯುನೆಲೆಗೆ ಭೇಟಿ ನೀಡಿ, ಸೈನಿಕರೊಂದಿಗೆ ಸಂವಾದ ನಡೆಸಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಅವರ ಈ ಭೇಟಿ ಪಾಕಿಸ್ತಾನಕ್ಕೆ ಎಚ್ಚರಿಕೆಯ ಗಂಟೆ ಎಂದೇ ವ್ಯಾಖ್ಯಾನಿಸಲಾಗಿದೆ. ಅಪರೇಷನ್ ಸಿಂಧೂರ ಕಾರ್ಯಾಚರಣೆ ನಡೆಸಿದ ಫೈಟರ್ ಪೈಲಟ್‍ಗಳು ಮತ್ತು ತಾಂತ್ರಿಕ ಸಹಾಯಕ ಸಿಬ್ಬಂದಿಯನ್ನು ಪ್ರಧಾನಿ ಮೋದಿ ಭೇಟಿ ಮಾಡಿ ಕಾರ್ಯಾಚರಣೆಯ ವಿವರಗಳನ್ನು ಪಡೆದುಕೊಂಡರು. ಸೈನಿಕರು ಸಂತೋಷದಿಂದ ಪ್ರಧಾನಿ ಮೋದಿಯವರನ್ನು ಸುತ್ತುವರೆದು ಮಾತುಕತೆ ನಡೆಸುತ್ತಿರುವ ಫೋಟೋಗಳನ್ನು ಪ್ರಧಾನಮಂತ್ರಿ ಕಚೇರಿ ಹಂಚಿಕೊಂಡಿದೆ.

ಪ್ರಧಾನಮಂತ್ರಿ ಅವರೇ ವಾಯು ಯೋಧರನ್ನು ಭೇಟಿ ಮಾಡುವ ಇಚ್ಛೆಯನ್ನು ವ್ಯಕ್ತಪಡಿಸಿದ್ದರು. ಬೆಳಗ್ಗೆ 7 ಗಂಟೆಗೆ ದೆಹಲಿಯ ಪಾಲಂ ಏರ್ ಬೇಸ್‌ನಿಂದ ಅದಂಪುರಕ್ಕೆ ತೆರಳಿದರು. ವಾಯುಸೇನೆಯ ಮುಖ್ಯಸ್ಥ ಏರ್ ಚೀಫ್ ಮಾರ್ಷಲ್ ಎ ಪಿ ಸಿಂಗ್ ಅವರು ಸಹ ಜೊತೆಗಿದ್ದರು. ಬಳಿಕ ವಾಯುವಿಹಾರಿಗಳೊಂದಿಗೆ ಸುಮಾರು ಒಂದು ಗಂಟೆ ಕಳೆದರು. ಆದಂಪುರ ಏರ್ ಬೇಸ್ ವಾಯುಪಡೆಯ ಒಟ್ಟು 29 ಫೈಟರ್ ಜೆಟ್‍ಗಳ ನೆಲೆಯಾಗಿದೆ.

ಭಾರತದ ಆಪರೇಷನ್ ಸಿಂಧೂರ್ ನಂತರ, ಮೇ 9 ಮತ್ತು 10ರ ಮಧ್ಯರಾತ್ರಿ ಪಾಕಿಸ್ತಾನ ದಾಳಿ ಮಾಡಲು ಪ್ರಯತ್ನಿಸಿದ ವಾಯುಪಡೆಯ ಕೇಂದ್ರಗಳಲ್ಲಿ ಅದಂಪುರವೂ ಒಂದು. ಭಾರತ ಮತ್ತು ಪಾಕಿಸ್ತಾನ ಕದನ ವಿರಾಮಕ್ಕೆ ಒಪ್ಪಿಕೊಂಡ ಕೆಲವು ದಿನಗಳ ನಂತರ, ಪ್ರಧಾನಿ ನರೇಂದ್ರ ಮೋದಿ ಇಂದು ಪಂಜಾಬ್‍ನ ಅದಂಪುರ ವಾಯುನೆಲೆಗೆ ಭೇಟಿ ನೀಡಿ ಸೈನಿಕರೊಂದಿಗೆ ಸಂವಾದ ನಡೆಸಿದರು.

Tags:
error: Content is protected !!