ಇಂಫಾಲ್ : ಈಶಾನ್ಯ ರಾಜ್ಯ ಭೀಕರ ಜನಾಂಗೀಯ ಹಿಂಸಾಚಾರಕ್ಕೆ ತುತ್ತಾಗಿ ಎರಡು ವರ್ಷಗಳ ನಂತರ, ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಮಣಿಪುರಕ್ಕೆ ಭೇಟಿ ನೀಡುತ್ತಿದ್ದು, ೮,೫೦೦ ಕೋಟಿ ರೂ. ಮೊತ್ತದ ಅಭಿವೃದ್ಧಿ ಯೋಜನೆಗಳನ್ನು ಅನಾವರಣಗೊಳಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕುಕಿಗಳು ಬಹುಸಂಖ್ಯಾತರಾಗಿರುವ ಚುರಾಚಂದ್ಪುರದ ಪೀಸ್ ಗ್ರೌಂಡ್ನಲ್ಲಿ ಪ್ರಧಾನಿ ಮೋದಿ ೭,೩೦೦ ಕೋಟಿ ರೂ.ಗಳ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಅಡಿಪಾಯ ಹಾಕಲಿದ್ದಾರೆ. ಮೈಟೈ ಬಹುಸಂಖ್ಯಾತ ಇಂಫಾಲ್ನಲ್ಲಿ ಒಟ್ಟು ೧,೨೦೦ ಕೋಟಿ ರೂ.ಗಳ ಮೂಲಸೌಕರ್ಯ ಯೋಜನೆಗಳನ್ನು ಪ್ರಧಾನಿ ಉದ್ಘಾಟಿಸಲಿದ್ದಾರೆ ಎಂದು ಅವರು ಹೇಳಿದ್ದಾರೆ.
ಮಣಿಪುರದಲ್ಲಿ ಹಿಂಸಾಚಾರದಿಂದ ಮೇ ೨೦೨೩ರಿಂದ ಇದುವರೆಗೆ ೨೬೦ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದಾರೆ ಮತ್ತು ಸಾವಿರಾರು ಜನ ನಿರಾಶ್ರಿತರಾಗಿದ್ದಾರೆ. ಕುಕಿ ಮತ್ತು ಮೈಟೈ ಸಮುದಾಯಗಳ ನಡುವಿನ ಜನಾಂಗೀಯ ಕಲಹದ ನಂತರ ರಾಜ್ಯಕ್ಕೆ ಭೇಟಿ ನೀಡದ ಬಗ್ಗೆ ವಿರೋಧ ಪಕ್ಷಗಳು ಪದೇ ಪದೇ ಟೀಕಿಸುತ್ತಿರುವ ನಡುವೆಯೇ ಪ್ರಧಾನಿ ಮೋದಿ ಶನಿವಾರ ಭೇಟಿ ನೀಡುತ್ತಿದ್ದಾರೆ.
ಮಣಿಪುರ ಸರ್ಕಾರ ಗುರುವಾರ ಸಂಜೆ ಚುರಾಚಂದ್ಪುರದ ಪೀಸ್ ಗ್ರೌಂಡ್ ಮತ್ತು ಇಂಫಾಲ್ನ ಕಾಂಗ್ಲಾ ಕೋಟೆಯಲ್ಲಿ ಪ್ರಧಾನಿಯವರ ಕಾರ್ಯಕ್ರಮದ ದೊಡ್ಡ ದೊಡ್ಡ ಜಾಹೀರಾತು ಫಲಕವನ್ನು ಹಾಕಿದೆ. ಇಂಫಾಲ್ನ ಪ್ರಮುಖ ಸ್ಥಳವಾದ ಕೀಸಂಪತ್ ಜಂಕ್ಷನ್ನಲ್ಲಿ ಈ ಹೋರ್ಡಿಂಗ್ ಕಾಣಿಸಿಕೊಂಡಿದ್ದು, ಇದು ಬಿಜೆಪಿ ರಾಜ್ಯ ಪ್ರಧಾನ ಕಚೇರಿಗೂ ಹತ್ತಿರದಲ್ಲಿದೆ.





