ಹೊಸದಿಲ್ಲಿ: ಗ್ರಾಹಕರ ದಾರಿ ತಪ್ಪಿಸುವ ರೀತಿ ಜಾಹೀರಾತು ಪ್ರಕಟ ಮಾಡಿದ್ದ ಪತಂಜಲಿ ಸಂಸ್ಥೆ ವಿರುದ್ಧ ಹರಿಹಾಯ್ದಿರುವ ಸುಪ್ರೀಂಕೋರ್ಟ್ ಮಂಗಳವಾರ ಪತಂಜಲಿ ಸಂಸ್ಥೆಯ ಸಂಸ್ಥಾಪಕ ಯೋಗ ಗುರು ಬಾಬಾ ರಾಮ್ದೇವ್ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆಚಾರ್ಯ ಬಾಲಕೃಷ್ಣ ಅವರನ್ನು ಮತ್ತೊಮ್ಮೆ ತರಾಟೆಗೆ ತೆಗೆದುಕೊಂಡಿದೆ.
ಜನರ ದಾರಿ ತಪ್ಪಿಸುವ ಜಾಹೀರಾತು ಸಂಬಂಧ ಪತ್ರಿಕೆಗಳಲ್ಲಿ ಅದೇ ರೀತಿಯಲ್ಲೇ ಕ್ಷಮಾಪಣೆ ಕೇಳಿ ಎಂದು ಸುಪ್ರೀಕೋರ್ಟ್ ಪತಂಜಲಿ ಸಂಸ್ಥೆಗೆ ಸೂಚಿಸಿತ್ತು. ಆದೆರ ಪತಂಜಲಿ ಸಂಸ್ಥೆ ಸಣ್ಣ ಪೋಸ್ಟ್ ಕಾರ್ಡ್ ಸೈಜ್ನಲ್ಲಿ ಕ್ಷಮಾಪಣೆ ಕೇಳಿತ್ತು. ಇದು ಕೋರ್ಟ್ ಗಮನಕ್ಕೆ ಬರುತ್ತಿದ್ದಂತೆ ಗರಂ ಆದ ನ್ಯಾಯಧೀಶರು ನಿಮ್ಮ ಕಂಪನಿಯ ಉತ್ಪನ್ನಗಳ ಜಾಹೀರಾತಿನಂತೆ ಪೂರ್ಣ ಪುಟದಲ್ಲಿ ದೊಡ್ಡ ಅಕ್ಷರಗಳಲ್ಲಿ ಕ್ಷಮಾಪಣೆಯನ್ನು ಪತ್ರಿಕೆಗಳಲ್ಲಿ ಪ್ರಕಟಿಸಲಾಗಿದಿಯೇ ಎಂದು ಖಾರವಾಗಿ ಪ್ರಶ್ನಿಸಿದರು.
ಕೇವಲ ಕಾಟಾಚಾರಕ್ಕೆ ಚಿಕ್ಕ ಅಕ್ಷರಗಳಲ್ಲಿ ಕ್ಷಮಾಪಣೆ ಜಾಹೀರಾತು ನೀಡಿದರೆ ಸಾಲದು, ಕ್ಷಮೆಯಾಚನೆ ದೊಡ್ಡ ಗಾತ್ರದಲ್ಲಿ ಇರಬೇಕು ಎಂದು ಪೀಠವು ಹೇಳಿತ್ತು. ಜಾಹೀರಾತು ಗಾತ್ರ ಪರಿಶೀಲಿಸಲು ಮುದ್ರಿತ ಕ್ಷಮೆಯಾಚನೆ ಪ್ರತಿಗಳನ್ನು ಕೋರ್ಟ್ಗೆ ಸಲ್ಲಿಸಬೇಕು ಎಂದು ಪೀಠವು ಪತಂಜಲಿ ಸಂಸ್ಥೆಗೆ ನಿರ್ದೇಶಿಸಿತು.
ಈ ಬೆನ್ನಲ್ಲೇ ಪತಂಜಲಿ ಸಂಸ್ಥೆ ಇಂದು(ಏ.24) ಪತ್ರಿಕೆಗಳಲ್ಲಿ ದೊಡ್ಡ ಗಾತ್ರದಲ್ಲೇ ಕ್ಷಮಾಪಣೆ ಕೇಳಿ ಸುಪ್ರೀಂಕೋರ್ಟ್ ಆದೇಶ ಪಾಲಿಸಿದೆ.