Mysore
18
few clouds

Social Media

ಮಂಗಳವಾರ, 03 ಫೆಬ್ರವರಿ 2026
Light
Dark

ಸಭಾಪತಿ ವಿರುದ್ದ ಅವಿಶ್ವಾಸ ನಿರ್ಣಯ ಜಟಾಪಟಿ: ಡಿ.16ಕ್ಕೆ ಕಲಾಪ ಮುಂದೂಡಿಕೆ

ಹೊಸದಿಲ್ಲಿ: ರಾಜ್ಯಸಭೆ ಸಭಾಪತಿ ಜಗದೀಪ್‌ ಧನಕರ್‌ ಅವರ ವಿರುದ್ಧದ ಅವಿಶ್ವಾಸ ನಿರ್ಣಯ ಕುರಿತು ಆಡಳಿತ ಮತ್ತು ಪ್ರತಿಪಕ್ಷಗಳ ಸದಸ್ಯರ ನಡುವೆ ತೀವ್ರ ವಾಗ್ವಾದದ ನಂತರ ರಾಜ್ಯಸಭೆ ಕಲಾಪವನ್ನು ಡಿ.16 ಕ್ಕೆ ಮುಂದೂಡಲಾಯಿತು.

ಇಂದು ಸದನದ ಕಲಾಪ ಆರಂಭವಾಗುತ್ತಿದ್ದಂತೆಯೇ ಪ್ರತಿಪಕ್ಷಗಳು ಸಭಾಪತಿ ಪಕ್ಷಪಾತಿಯ ಗುಣ ಹೊಂದಿದ್ದಾರೆ ಎಂದು ಅವರ ವಿರುದ್ಧ ಮಂಡಿಸಿದ ಅವಿಶ್ವಾಸ ನಿರ್ಣಯದ ಮೇಲೆ ಚರ್ಚೆಗೆ ಒತ್ತಾಯಿಸಿದರು. ಅದಕ್ಕೆ ಒಪ್ಪಿಗೆ ನೀಡಲು ನಿರಾಕರಿಸಿದ ಕಾರಣ ಆಡಳಿತ ಪಕ್ಷದ ಸದಸ್ಯರು ಆಕ್ಷೇಪ ಮಾಡಿದರು. ಇದರಿಂದ ಸದನದಲ್ಲಿ ಕೋಲಾಹಲ ಉಂಟಾದ ಕಾರಣ ಕಲಾಪವನ್ನು ಮುಂದೂಡಿದರು.

ಸಭಾಪತಿ ಜಗದೀಪ್‌ ಧನಕರ್‌ ಅವರು ಪಕ್ಷಪಾತಿಯಾಗಿದ್ದಾರೆ. ಸದನದ ಕಲಾಪ ವೇಳೆ ಆಡಳಿತ ಪಕ್ಷದ ಬೆಂಬಲವಾಗಿರುತ್ತಾರೆ. ಆದ ಕಾರಣ ಅವರನ್ನು ಪದಚ್ಯುತಗೊಳಿಸಬೇಕು ಎಂದು ಕಾಂಗ್ರೆಸ್‌ ನೇತೃತ್ವದಲ್ಲಿ ವಿರೋಧ ಪಕ್ಷಗಳು ಅವಿಶ್ವಾಸ ನಿರ್ಣಯ ಮಂಡಿಸಿದ್ದವು.

ಸದನದ ಕಲಾಪದಲ್ಲಿ ಗದ್ದಲದ ನಡುವೆಯೇ ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತನಾಡಲು ಅವಕಾಶ ನೀಡಿದರು.

ಈ ವೇಳೆ ಮಾತನಾಡಿದ ಮಲ್ಲಕಾರ್ಜುನ ಖರ್ಗೆ, ಸದನದಲ್ಲಿ ಚರ್ಚೆಯ ಸಂದರ್ಭ ಆಡಳಿತ ಪಕ್ಷಕ್ಕೆ ಜಾಸ್ತಿ ಸಮಯ ನೀಡಿ ಪ್ರತಿಪಕ್ಷಗಳನ್ನು ಕಡೆಗಣಿಸುತ್ತಾರೆ. ಆ ಮೂಲಕ ಕಾಂಗ್ರೆಸ್‌ ಹಾಗೂ ಇನ್ನಿತರ ಪಕ್ಷಗಳಿಗೆ ಆಗೌರವ ತೋರಿಸುತ್ತಿದ್ದಾರೆ ಎಂದು ಆರೋಪಿಸಿದರು.

ಇದಕ್ಕೆ ಜಗದೀಪ್‌ ಧನಕರ್‌ ಪ್ರತಿಕ್ರಿಯಿಸಿ, ಖರ್ಗೆ ಹಾಗೂ ಜೆಪಿ ನಡ್ಡಾ ಅವರನ್ನು ಅಧ್ಯಕ್ಷರ ಚೇಂಬರ್‌ಗೆ ಬಂದು ತಮ್ಮನ್ನು ಭೇಟಿ ಮಾಡಿ ಈ ಬಿಕ್ಕಟ್ಟಿಗೆ ಪರಿಹಾರ ಕಂಡುಕೊಳ್ಳಿ ಎಂದು ಹೇಳಿ ಸಭೆಯನ್ನು ಡಿ.16 ಕ್ಕೆ ಮುಂದೂಡಿದರು.

Tags:
error: Content is protected !!