ಇಂಫಾಲ್: ಮಣಿಪುರ ಸಿಎಂ ಎನ್.ಬಿರೇನ್ ಸಿಂಗ್ ಅವರ ಬೆಂಗಾವಲು ವಾಹನದ ಮೇಲೆ ಶಸ್ತ್ರಧಾರಿ ಉಗ್ರರು ಹೊಂಚುದಾಳಿ ನಡೆಸಿದ್ದಾರೆ. ಕಾಂಗ್ಪೊಕ್ಪಿ ಜಿಲ್ಲೆಯಲ್ಲಿ ಇಂದು(ಜೂ.10) ನಡೆದ ದಾಳಿಯಲ್ಲಿ ಇಬ್ಬರು ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದಾರೆ.
ದಾಳಿ ನಡೆದಾಗ ಸಿಎಂ ಬೆಂಗಾವಲು ಪಡೆ ಹಿಂಸಾಚಾರ ಪೀಡಿತ ಜಿರಿಬಾಮ್ ಜಿಲ್ಲೆಗೆ ತೆರಳುತ್ತಿತ್ತು. ಈ ವೇಳೆ ಭದ್ರತಾ ಪಡೆಗಳ ವಾಹನಗಳ ಮೇಲೆ ಹಲವು ಬಾರಿ ಗುಂಡಿನ ದಾಳಿ ನಡೆಸಲಾಯಿತು. ಭದ್ರತಾಪಡೆ ವಾಹನಗಳ ಮೇಲೆ ಗುಂಡಿನ ದಾಳಿ ನಡೆಸಿದಾಗ ಸಿಎಂ ಇರಲಿಲ್ಲ. ಈ ವೇಳೆ ಭದ್ರತಾ ಸಿಬ್ಬಂದಿ ಪ್ರತಿದಾಳಿ ನಡೆಸಿದರು. ರಾಷ್ಟ್ರೀಯ ಹೆದ್ದಾರಿ 53 ರ ಉದ್ದಕ್ಕೂ ಕೋಟ್ಲೆನ್ ಗ್ರಾಮದ ಬಳಿ ಇನ್ನೂ ದಾಳಿ-ಪ್ರತಿದಾಳಿ ನಡೆಯುತ್ತಿದೆ ಎನ್ನಲಾಗಿದೆ.
ಹೊಂಚುದಾಳಿಯ ವೇಳೆ ಇಬ್ಬರು ಸಿಬ್ಬಂದಿಗೆ ಗುಂಡು ತಗುಲಿ ಗಾಯಗೊಂಡಿದ್ದಾರೆ ಎಂದು ಪೊಲೀಸ್ ಮೂಲಗಳನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.
ದೆಹಲಿಯಿಂದ ಇಂಫಾಲ್ಗೆ ಹಿಂದಿರುಗುತ್ತಿದ್ದ ಮುಖ್ಯಮಂತ್ರಿ ಬಿರೇನ್ ಸಿಂಗ್, ಇತ್ತೀಚಿನ ಹಿಂಸಾತ್ಮಕ ಘಟನೆಗಳನ್ನು ಅವಲೋಕಿಸಲು ಜಿರಿಬಾಮ್ಗೆ ಭೇಟಿ ನೀಡಲು ಯೋಜಿಸಿದ್ದರು. ಶಂಕಿತ ಉಗ್ರರು ಶನಿವಾರ(ಜೂ.8) ಎರಡು ಪೊಲೀಸ್ ಔಟ್ಪೋಸ್ಟ್ಗಳು, ಅರಣ್ಯ ಬೀಟ್ ಕಚೇರಿ ಮತ್ತು 70 ಮನೆಗಳಿಗೆ ಬೆಂಕಿ ಹಚ್ಚಿದ್ದರು.
ಹಿಂಸಾಚಾರ ಪೀಡಿತ ಜಿರಬಾಮ್ ಜಿಲ್ಲೆಯು ರಾಜ್ಯ ರಾಜಧಾನಿ ಇಂಫಾಲ್ನಿಂದ 220 ಕಿ.ಮೀ ದೂರದಲ್ಲಿದೆ. ಇದು ಅಸ್ಸಾಂ ಗಡಿ ಪ್ರದೇಶದ ಸಮೀಪದಲ್ಲಿದೆ. ಕುಕಿ ಸಮುದಾಯ ಬಹುಪಾಲು ಮಂದಿ ಇಲ್ಲಿ ವಾಸಿಸುತ್ತಿದ್ದಾರೆ.