ಬೆಂಗಳೂರು: ಲೋಕಸಭಾ ಚುನಾವಣೆ ನಡೆಯುತ್ತಿರುವ ನಡುವೆಯೇ ಪ್ರಧಾನ ಮಂತ್ರಿ ಆರ್ಥಿಕ ಸಲಹಾ ಮಂಡಳಿ ಧರ್ಮಾದಾರಿತ ಜನಸಂಖ್ಯಾ ವರದಿಯನ್ನು ಬಿಡುಗಡೆ ಮಾಡಿದ್ದು, ಈ ಸುದ್ದಿಯನ್ನು ಭಿತ್ತರಿಸುವಾಗ ಖಾಸಗಿ ಸುದ್ದಿ ವಾಹಿನಿಯೊಂದು ಮುಸ್ಲಿಂ ಜನಸಂಖ್ಯೆ ಮಾಹಿತಿ ನೀಡಲು ಪಾಕಿಸ್ತಾನ ಧ್ವಜವನ್ನು ಬಳಕೆ ಮಾಡಿರುವುದು ಕಂಡು ಬಂದಿದೆ.
ಕನ್ನಡ ಖಾಸಗಿ ಸುದ್ದಿ ವಾಹಿನಿ ಸುವರ್ಣ ನ್ಯೂಸ್ ʼಚರ್ಚಾʼ ಕಾರ್ಯಕ್ರಮದಲ್ಲಿ ಹಿಂದೂ ಜನಸಂಖ್ಯೆಯನ್ನು ಗುರುತಿಸಲು ಭಾರತ ಧ್ವಜ ಹಾಗೂ ಮುಸ್ಲಿಮರ ಜನಸಂಖ್ಯೆ ತಿಳಿಸಲು ಪಾಕಿಸ್ತಾನ ಧ್ವಜ ಬಳಸಿರುವುದು ವರದಿಯಾಗಿದೆ. ಈ ಕಾರ್ಯಕ್ರಮವನ್ನು ಅಜಿತ್ ಹನುಮಕ್ಕನವರ್ ನಿರ್ವಹಿಸುತ್ತಿದ್ದರು ಎಂದು ತಿಳಿದು ಬಂದಿದೆ.
ದೇಶದಲ್ಲಿ ಹಿಂದೂಗಳ ಜನಸಂಖ್ಯೆ ಕಡಿಮೆಯಾಗುತ್ತಿದ್ದು, ಮುಸ್ಲಿಂರ ಸಂಖ್ಯೆ ಗಣನೀಯವಾಗಿ ಏರಿಕೆ ಕಂಡಿದೆ ಎಂದು ಪ್ರಧಾನ ಮಂತ್ರಿ ಆರ್ಥಿಕ ಸಲಹಾ ಮಂಡಳಿ ವರದಿ ನೀಡಿದ್ದು, ಈ ವಿಷಯ ಸಂಬಂಧ ದೇಶಾದ್ಯಂತ ವ್ಯಾಪಕ ಚರ್ಚೆ ಕಾರಣವಾಗಿದೆ. ಇನ್ನು ಇದೇ ವಿಷಯ ಸಂಬಂಧ ಕನ್ನಡ ಖಾಸಗಿ ಸುದ್ದಿ ವಾಹಿನಿ ಸುವರ್ಣ ನ್ಯೂಸ್ ವರದಿ ಬಿತ್ತರಿಸುವಾಗ ಮುಸ್ಲಿಮರಿಗೆ ಪಾಕಿಸ್ತಾನ ಧ್ವಜ ಬಳಸಿರುವುದು ವರದಿಯಾಗಿದೆ.
ಈ ವರದಿಯನ್ನು ಆಲ್ಟ್ ನ್ಯೂಸ್ ಸಹ ಸಂಪಾದಕ ಮಹಮ್ಮದ್ ಝುಬೇರ್ ತಮ್ಮ ಎಕ್ಸ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. “ಇಎಸಿ-ಪಿಎಂ” ವರದಿಯನ್ನು ಪ್ರಕಟಿಸುವಾಗ ಪಾಕಿಸ್ತಾನ ಧ್ವಜದೊಂದಿಗೆ ಮುಸ್ಲಿಮರನ್ನು ಚಿತ್ರಿಸಿದ್ದಾರೆ. ಕರ್ನಾಟಕದ ಈ ಚಾನೆಲ್ ಹಾಗೂ ಆಂಕರ್ ವಿರುದ್ಧ ನಾವು ದೂರು ನೀಡಲಿದ್ದೇವೆ ಎಂದು ಅವರು ಬರೆದುಕೊಂಡಿದ್ದಾರೆ.