ನವದೆಹಲಿ: ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದಾಗಲೆಲ್ಲಾ ಹೊಸ ಮಟ್ಟದ ನಿರೀಕ್ಷೆಗಳು ಹುಟ್ಟುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಸರ್ಕಾರದ ಮೂರನೇ ಅವಧಿಯ ಮೊದಲ ಬಜೆಟ್ ಬಗ್ಗೆ ಭಾರೀ ನಿರೀಕ್ಷೆಗಳಿವೆ.
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, ಈಗಾಗಲೇ ಬಜೆಟ್ ತಯಾರಿಯಲ್ಲಿ ಪೂರ್ಣವಾಗಿ ತೊಡಗಿಸಿಕೊಂಡಿದ್ದಾರೆ. ಜುಲೈ ಕೊನೆಯ ವಾರದಲ್ಲಿ ಬಜೆಟ್ ಮಂಡನೆ ಆಗಬಹುದು ಎಂದು ಹೇಳಲಾಗುತ್ತಿದೆ.
ಜುಲೈ.22ಕ್ಕೆ ಬಜೆಟ್ ಅಧಿವೇಶನ ಆರಂಭವಾಗಲಿದ್ದು, ಜುಲೈ.23ಕ್ಕೆ ಆರ್ಥಿಕ ಸಮೀಕ್ಷಾ ವರದಿ ಬಿಡುಗಡೆ ಆಗಬಹುದು. ಜುಲೈ.24ಕ್ಕೆ ಯೂನಿಯನ್ ಬಜೆಟ್ನ್ನು ಪ್ರಸ್ತುಪಡಿಸಬಹುದು ಎನ್ನಲಾಗಿದೆ. ಈ ಬಗ್ಗೆ ಶೀಘ್ರದಲ್ಲೇ ದಿನಾಂಕ ಪ್ರಕಟಿಸುವ ನಿರೀಕ್ಷೆಯಿದೆ.
18ನೇ ಲೋಕಸಭೆಯ ಚೊಚ್ಚಲ ಅಧಿವೇಶನ ನಿನ್ನೆ ಮುಕ್ತಾಯಗೊಂಡಿದೆ. ವಾಡಿಕೆ ಪ್ರಕಾರ ಎರಡನೇ ಅಧಿವೇಶನವನ್ನು 15 ದಿನಗಳ ಅಂತರದಲ್ಲಿ ಮಾಡಲಾಗುತ್ತದೆ. ಅದರಂತೆ ಜುಲೈ.18ಕ್ಕೆ ಮುಂಗಾರು ಅಧಿವೇಶನ ಶುರುವಾಗಲಿದೆ. ಅದೇ ರೀತಿ ಜುಲೈ.20ರಂದು ಬಜೆಟ್ ಮಂಡನೆ ಮಾಡಬೇಕಾಗುತ್ತದೆ. ಆದರೆ ಈ ಬಾರಿ ಅಧಿವೇಶನ ತುಸು ವಿಳಂಬವಾಗಿ ಶುರುವಾಗಬಹುದು. ಆದ್ದರಿಂದ ಜುಲೈ.22ಕ್ಕೆ ಅಧಿವೇಶನ ಆರಂಭವಾಗಿ ಜುಲೈ.24ಕ್ಕೆ ಬಜೆಟ್ ಮಂಡನೆ ಆಗಬಹುದು ಎನ್ನಲಾಗುತ್ತಿದೆ.
ಇನ್ನೂ ಸಂಸತ್ತಿನಲ್ಲಿ ಜಂಟಿ ಅಧಿವೇಶನ ಉದ್ದೇಶಿಸಿ ಭಾಷಣ ಮಾಡಿರುವ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು, ಈ ಬಾರಿಯ ಬಜೆಟ್ನಲ್ಲಿ ಬಡವರು, ಯುವಜನರು, ಮಹಿಳೆಯರು, ರೈತರಿಗೆ ಆದ್ಯತೆ ಸಿಗಲಿದೆ. ದೂರಗಾಮಿ ಆರ್ಥಿಕ ಮತ್ತು ಸಾಮಾಜಿಕ ಸುಧಾರಣೆಗಳು ಅನಾವರಣಗೊಳ್ಳಲಿವೆ ಎಂದು ಹೇಳಿದ್ದಾರೆ.
ಈ ನಿಟ್ಟಿನಲ್ಲಿ ಈ ಬಾರಿಯ ಕೇಂದ್ರ ಬಜೆಟ್ ಜನಸಾಮಾನ್ಯರಿಗೆ ಬಂಪರ್ ಆಫರ್ ನೀಡಲಿದೆ ಎನ್ನಲಾಗಿದ್ದು, ಎಲ್ಲರ ಚಿತ್ತ ಈಗ ಕೇಂದ್ರ ಸರ್ಕಾರದ ಬಜೆಟ್ನತ್ತ ನೆಟ್ಟಿದೆ.