ಹೊಸದಿಲ್ಲಿ : ದೇಶದ ಎಲ್ಲ ನಗರಗಳ ರಸ್ತೆಗಳಲ್ಲಿ ಆಂಬ್ಯುಲೆನ್ಸ್ಗಳ ಸಂಚಾರಕ್ಕಾಗಿ ಪ್ರತ್ಯೇಕ ಮೀಸಲು ಮಾರ್ಗಗಳನ್ನು ಒದಗಿಸುವಂತೆ ಸಮಾಜವಾದಿ ಪಕ್ಷದ ಸಂಸದೆ ಜಯಾ ಬಚ್ಚನ್ ಒತ್ತಾಯಿಸಿದ್ದಾರೆ.
ಭಾರತದಲ್ಲಿ ದಿನಸಿ ಪದಾರ್ಥಗಳು ೧೫ ನಿಮಿಷಗಳಲ್ಲಿ ಮನೆ ಬಾಗಿಲಿಗೆ ತಲುಪುತ್ತವೆ. ಆದರೆ, ರೋಗಿಗಳು ಆಸ್ಪತ್ರೆಗೆ ತಲುಪಲು ಆಗುತ್ತಿರುವ ವಿಳಂಬದಿಂದ ಸಾಯುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.
ಇದನ್ನು ಓದಿ: ಗುಂಡ್ಲುಪೇಟೆ | ದನಗಾಹಿ ಮೇಲೆ ಹುಲಿ ದಾಳಿ ; ಪ್ರಾಣಾಪಾಯದಿಂದ ಪಾರು
ರಾಜ್ಯಸಭೆಯ ಶೂನ್ಯವೇಳೆಯಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಆಸ್ಪತ್ರೆಗೆ ತಲುಪುವುದರಲ್ಲಿ ಆಗುತ್ತಿರುವ ವಿಳಂಬದಿಂದ ರೋಗಿಗಳು ಮೃತಪಡುತ್ತಿರುವ ಬಗ್ಗೆ ಸಂಸತ್ತಿನ ಆರೋಗ್ಯ ಸ್ಥಾಯಿ ಸಮಿತಿಯು ಗಮನಹರಿಸಬೇಕು ಎಂದಿದ್ದಾರೆ. ದೇಶದಲ್ಲಿ, ಆಂಬ್ಯುಲೆನ್ಸ್ಗಳು ಟ್ರಾಫಿಕ್ನಲ್ಲಿ ಸಿಲುಕಿಕೊಳ್ಳುವುದರಿಂದ ರೋಗಿಗಳು ಸಾಯುತ್ತಿದ್ದಾರೆ. ೨೦೧೮ರ ಸುಪ್ರೀಂ ಕೋರ್ಟ್ನ ನಿರ್ದೇಶನದ ಹೊರತಾಗಿಯೂ ನಮ್ಮಲ್ಲಿ ಆಂಬ್ಯುಲೆನ್ಸ್ಗಳಿಗಾಗಿ ವಿಶೇಷ ತುರ್ತು ಮಾರ್ಗಗಳಿಲ್ಲ. ಈ ದುರಂತಗಳನ್ನು ಯಾವುದೇ ರಾಷ್ಟ್ರೀಯ ದತ್ತಾಂಶಗಳು ಪತ್ತೆ ಹಚ್ಚುವುದಿಲ್ಲ ಎಂದು ಜಯಾ ಹೇಳಿದ್ದಾರೆ.
ರಾಷ್ಟ್ರವ್ಯಾಪಿ ಎಐ ಟ್ರಾಫಿಕ್ ಸಿಗ್ನಲ್ಗಳೊಂದಿಗೆ ಆಂಬ್ಯುಲೆನ್ಸ್ಗೆ ಮೀಸಲಾದ ತುರ್ತು ಮಾರ್ಗಗಳನ್ನು ಪ್ರತಿಪಾದಿಸಿದ ಅವರು, ಆಂಬುಲೆನ್ಸ್ಗಳಿಗೆ ಆದ್ಯತೆ ನೀಡಬೇಕು, ೩೦ ಸೆಕೆಂಡ್ ಹಸಿರು ಕಾರಿಡಾರ್, ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಮೂಲಕ ಸುಪ್ರೀಂ ಕೋರ್ಟ್ನ ೨೦೧೮ರ ಆಂಬುಲೆನ್ಸ್ ಕಾರಿಡಾರ್ ನಿರ್ದೇಶನವನ್ನು ಜಾರಿಗೊಳಿಸುವುದು, ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವುದು ಮತ್ತು ಆಂಬ್ಯುಲೆನ್ಸ್ ವಿಳಂಬದಿಂದ ಆಗುವ ಸಾವುಗಳ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.





