ಶ್ರೀನಗರ: ಶ್ರೀನಗರದ ಹೊರವಲಯಲ್ಲಿರುವ ನೌಗಮ್ ಪೊಲೀಸ್ ಠಾಣೆಯಲ್ಲಿ ಶುಕ್ರವಾರ ತಡರಾತ್ರಿ ಸಂಭವಿಸಿದ ಆಕಸ್ಮಿಕ ಸ್ಫೋಟದಲ್ಲಿ ಮೃತಪಟ್ಟವರ ಸಂಖ್ಯೆ 9ಕ್ಕೆ ಏರಿಕೆಯಾಗಿದೆ.
ಘಟನೆಯಲ್ಲಿ 32 ಮಂದಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕಳೆದ ವಾರ ಫರೀದಾಬಾದ್ ಭಯೋತ್ಪಾದನಾ ಮಾಡ್ಯೂಲ್ ಪ್ರಕರಣದಲ್ಲಿ ವಶಪಡಿಸಿಕೊಂಡಿದ್ದ ಸ್ಫೋಟಕಗಳ ಸಂಗ್ರಹದಿಂದ ಅಧಿಕಾರಿಗಳು ಮಾದರಿಯನ್ನು ಹೊರತೆಗೆಯುತ್ತಿದ್ದಾಗ ಆಕಸ್ಮಿಕವಾಗಿ ಸ್ಫೋಟ ಸಂಭವಿಸಿದೆ.
ಸ್ಫೋಟದಿಂದ ವ್ಯಾಪಕ ಹಾನಿಯಾಗಿದ್ದು, ಹಲವಾರು ವಾಹನಗಳಿಗೆ ಬೆಂಕಿ ಹೊತ್ತಿಕೊಂಡಿತ್ತು. ಜೊತೆಗೆ ಹತ್ತಿರದ ಮನೆಗಳ ಕಿಟಕಿ ಗಾಜುಗಳು ಸಹ ಛಿದ್ರಗೊಂಡಿದ್ದು, ಕೆಲವು ಕಿಲೋ ಮೀಟರ್ ದೂರದಲ್ಲಿ ಅದರ ಪರಿಣಾಮ ಕಂಡುಬಂದಿದೆ.
ಭಾರೀ ಸ್ಫೋಟದಿಂದ ಪೊಲೀಸ್ ಠಾಣೆ ಕಟ್ಟಡಕ್ಕೆ ಹಾನಿಯನ್ನುಂಟುಮಾಡಿದ್ದು, ಸಣ್ಣ ಸಣ್ಣ ಸ್ಫೋಟಗಳು ಬಾಂಬ್ ನಿಷ್ಕ್ರಿಯ ದಳದ ತಕ್ಷಣದ ರಕ್ಷಣಾ ಕಾರ್ಯಾಚರಣೆಯನ್ನು ತಡೆಯಿತು.





