Mysore
25
overcast clouds
Light
Dark

ಭಾರತದ 14ನೇ ಉಪ ರಾಷ್ಟ್ರಪತಿಯಾಗಿ ಇಂದು ಜಗದೀಪ್‌ ಧನಕರ್‌ ಪ್ರಮಾಣ ವಚನ ಸ್ವೀಕಾರ

ನವದೆಹಲಿ: ಭಾರತದ 14ನೇ ಉಪ ರಾಷ್ಟ್ರಪತಿಯಾಗಿ ಇಂದು ಜಗದೀಪ್‌ ಧನಕರ್‌ ಪ್ರಮಾಣ ವಚನ ಸ್ವೀಕಾರ ಮಾಡಲಿದ್ದಾರೆ. ರಾಷ್ಟ್ರಪತಿ ದ್ರೌಪದಿ ಮುರ್ಮು ಮಧ್ಯಾಹ್ನ 12.30ರ ವೇಳೆಗೆ ನೂತನ ಉಪ ರಾಷ್ಟ್ರಪತಿಗೆ ಪ್ರಮಾಣನ ವಚನ ಬೋಧಿಸಲಿದ್ದಾರೆ. ವೆಂಕಯ್ಯ ನಾಯ್ಡು ಅವರ ಅಧಿಕಾರಾವಧಿ ಇಂದು ಮುಕ್ತಾಯವಾಗಲಿದೆ. ಉಪ ರಾಷ್ಟ್ರಪತಿ ರಾಜ್ಯಸಭೆಯ ಸಭಾಪತಿಯೂ ಆಗಿರುತ್ತಾರೆ.

ಇನ್ನು, ಪ್ರಮಾಣ ವಚನ ಸ್ವೀಕಾರಕ್ಕೆ ಮುನ್ನ ಗುರುವಾರ ಜಗದೀಪ್‌ ಧನಕರ್‌, ದೆಹಲಿಯ ರಾಜ್‌ಘಾಟ್‌ಗೆ ಭೇಟಿ ನೀಡಿ ಮಹಾತ್ಮ ಗಾಂಧೀಜಿ ಅವರ ಸಮಾಧಿಗೆ ನಮನ ಸಲ್ಲಿಸಿದರು. ಇನ್ನೊಂದೆಡೆ, ಲೋಕಸಭೆ ಸ್ಪೀಕರ್ ಓಂ ಬಿರ್ಲಾ ಅವರು ಮಂಗಳವಾರ ವೆಂಕಯ್ಯ ನಾಯ್ಡು ಮತ್ತು ಅವರ ಉತ್ತರಾಧಿಕಾರಿ ಧನಕರ್‌ ಅವರಿಗೆ ತಮ್ಮ ನಿವಾಸದಲ್ಲಿ ಆತಿಥ್ಯ ನೀಡಿದರು. ನಾಯ್ಡು ಮತ್ತು ಬಿರ್ಲಾ ಅವರು ರಾಷ್ಟ್ರೀಯ ಹಿತಾಸಕ್ತಿ ಮತ್ತು ಸಂಸದೀಯ ವ್ಯವಹಾರಗಳ ವಿಷಯಗಳ ಕುರಿತು ಒಳನೋಟಗಳು ಮತ್ತು ಅನುಭವಗಳನ್ನು ಉಪರಾಷ್ಟ್ರಪತಿಯಾಗಿ ಆಯ್ಕೆಯಾದ ಧನಕರ್ ಅವರೊಂದಿಗೆ ಹಂಚಿಕೊಂಡಿದ್ದಾರೆ ಎಂದು ಲೋಕಸಭೆ ಸಚಿವಾಲಯದ ಹೇಳಿಕೆಯಲ್ಲಿ ತಿಳಿಸಿದೆ.

ಬಿಜೆಪಿ ನೇತೃತ್ವದ ನ್ಯಾಶನಲ್ ಡೆಮಾಕ್ರಟಿಕ್ ಅಲಯನ್ಸ್ ಅಭ್ಯರ್ಥಿ (ಎನ್‌ಡಿಎ) (National Democratic Alliance) ಜಗದೀಪ್‌ ಧನಕರ್‌ ಭಾನುವಾರ ನಡೆದ ಉಪ ರಾಷ್ಟ್ರಪತಿ ಚುನಾವಣೆಯಲ್ಲಿ (Vice President Elections) ಶೇಕಡ 74.36 ರಷ್ಟು ಮತಗಳನ್ನು ಗಳಿಸಿದ್ದರು. ಇದು ಕಳೆದ 6 ಉಪರಾಷ್ಟ್ರಪತಿ ಚುನಾವಣೆಗಳಲ್ಲಿ ಪಡೆದ ಅತಿ ಹೆಚ್ಚು ಶೇಕಡಾವಾರು ಮತಗಳಾಗಿದೆ. ಇನ್ನು, ಜಂಟಿ ವಿರೋಧ ಪಕ್ಷದ ಆಯ್ಕೆಯಾದ ಮಾರ್ಗರೇಟ್ ಆಳ್ವ ಅವರಿಗೆ 182 ಮತಗಳು ಬಂದಿದ್ದರೆ ಧನಕರ್‌ ಅವರು 528 ಮತಗಳನ್ನು ಗಳಿಸಿದ್ದರು. 1997 ರ ಬಳಿಕ ಅತಿ ಹೆಚ್ಚು ಮತಗಳ ಅಂತರದಿಂದ (Highest Margin) ಜಗದೀಪ್‌ ಧನಕರ್‌ ಉಪ ರಾಷ್ಟ್ರಪತಿಯಾಗಿ ಆಯ್ಕೆಯಾಗಿದ್ದಾರೆ.

ಚುನಾವಣೆಯ ಒಂದು ದಿನದ ನಂತರ, ಭಾನುವಾರದಂದು ಚುನಾವಣಾ ಆಯೋಗವು NDA ಅಭ್ಯರ್ಥಿ ಜಗದೀಪ್‌ ಧನಕರ್‌ ಅವರನ್ನು ಭಾರತದ 14ನೇ ಉಪರಾಷ್ಟ್ರಪತಿಯಾಗಿ ಆಯ್ಕೆ ಮಾಡಿರುವುದನ್ನು ಘೋಷಿಸುವ ಪ್ರಮಾಣಪತ್ರವನ್ನು ನೀಡಿದೆ. ಮುಖ್ಯ ಚುನಾವಣಾ ಆಯುಕ್ತ ರಾಜೀವ್ ಕುಮಾರ್ ಮತ್ತು ಚುನಾವಣಾ ಆಯುಕ್ತ ಅನೂಪ್ ಚಂದ್ರ ಪಾಂಡೆ ಅವರು ಧನಕರ್ ಅವರ “ಚುನಾವಣೆಯ ಪ್ರಮಾಣೀಕರಣ” ಕ್ಕೆ ಸಹಿ ಹಾಕಿದರು.

ಪ್ರಮಾಣಪತ್ರದ ಸಹಿ ಪ್ರತಿಯನ್ನು ಹಿರಿಯ ಉಪ ಚುನಾವಣಾ ಆಯುಕ್ತ ಧರ್ಮೇಂದ್ರ ಶರ್ಮಾ ಮತ್ತು ಚುನಾವಣಾ ಆಯೋಗದ ಹಿರಿಯ ಪ್ರಧಾನ ಕಾರ್ಯದರ್ಶಿ ನರೇಂದ್ರ ಎನ್ ಬುಟೋಲಿಯಾ ಅವರು ಕೇಂದ್ರ ಗೃಹ ಕಾರ್ಯದರ್ಶಿಗೆ ಹಸ್ತಾಂತರಿಸಿದ್ದಾರೆ ಎಂದು ಚುನಾವಣಾ ಸಮಿತಿ ತಿಳಿಸಿದೆ. ಆಗಸ್ಟ್ 11 ರಂದು ಅಂದರೆ ಇಂದು ನೂತನ ಉಪಾಧ್ಯಕ್ಷರ ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಸಹಿ ಮಾಡಿದ ಪ್ರತಿಯನ್ನು ಓದಲಾಗುತ್ತದೆ.

ನಿರ್ಗಮಿತ ಉಪರಾಷ್ಟ್ರಪತಿಯಾಗಿ, ವೆಂಕಯ್ಯ ನಾಯ್ಡು ಅವರು ಕಳೆದ ವಾರ ಉಪ ರಾಷ್ಟ್ರಪತಿ ಸೆಕ್ರೆಟರಿಯೇಟ್, ರಾಜ್ಯಸಭಾ ಸಚಿವಾಲಯದ ಅಧಿಕಾರಿಗಳು ಮತ್ತು ಸಿಬ್ಬಂದಿ, ವೈದ್ಯರ ತಂಡ ಮತ್ತು ತನಗಾಗಿ ಕರ್ತವ್ಯ ನಿರ್ವಹಿಸಿದ ವಾಯುಪಡೆ ಸಿಬ್ಬಂದಿಗೆ ಚಹಾ ಕೂಟದ ಆಯೋಜಿಸುವ ಮೂಲಕ ಧನ್ಯವಾದ ತಿಳಿಸಿದ್ದಾರೆ. ಈ ಸಭೆಗಳಲ್ಲಿ ಎಲ್ಲ ಸದಸ್ಯರು ವೆಂಕಯ್ಯ ನಾಯ್ಡು ಅವರಿಗೆ ಭಾವನಾತ್ಮಕ ಬೀಳ್ಕೊಡುಗೆ ನೀಡಿದ್ದಾರೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ