ಹೊಸದಿಲ್ಲಿ: ನಾನು ಮನುಷ್ಯ, ದೇವರಲ್ಲ ಹೀಗಾಗಿ ತಪ್ಪುಗಳನ್ನು ಮಾಡಿರಬಹುದು. ಆದರೆ, ಕೆಟ್ಟ ಉದ್ದೇಶದಿಂದ ತಪ್ಪುಗಳನ್ನು ಮಾಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಯುವ ಉದ್ಯಮಿ ಜೆರೋಧಾ ಮುಖ್ಯಸ್ಥ ನಿಖಿಲ್ ಕಾಮತ್ ಅವರೊಂದಿಗೆ ತಮ್ಮ ಮೊದಲ ಪಾಡ್ಕ್ಯಾಸ್ಟ್ ನಲ್ಲಿ ಮಾತನಾಡಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಬಾಲ್ಯ, ಶಿಕ್ಷಣ, ರಾಜಕೀಯ ಸೇರಿದಂತೆ ಸಾಕಷ್ಟು ವಿಚಾರಗಳ ಬಗ್ಗೆ ಮಾಹಿತಿ ಹಂಚಿಕೊಂಡಿದ್ದಾರೆ.
ಸಾಮಾನ್ಯ ವಿದ್ಯಾರ್ಥಿಯಾಗಿ ಗುಜರಾತ್ ಮುಖ್ಯಮಂತ್ರಿ ಪದವಿಯವರೆಗೆ ಏರಿದ ಪ್ರಯಾಣವನ್ನು ಹಂಚಿಕೊಂಡಿರುವ ಮೋದಿ, ನಾನು ಮುಖ್ಯಮಂತ್ರಿಯಾದಾಗ, ಯಾವುದೇ ಅವಕಾಶ ಸಿಕ್ಕರು ಬಿಡುವುದಿಲ್ಲ ಎಂದು ಸಾರ್ವಜನಿಕ ಭಾಷಣದಲ್ಲಿ ಹೇಳಿದ್ದೆ. ನನಗಾಗಿ ನಾನು ಏನನ್ನೂ ಮಾಡಿಕೊಂಡಿಲ್ಲ. ಆದರೂ, ನಾನು ಮನುಷ್ಯ ತಪ್ಪುಗಳನ್ನು ಮಾಡಿರಬಹುದು, ಆದರೆ ಕೆಟ್ಟ ಉದ್ದೇಶದಿಂದ ಯಾವುದೇ ತಪ್ಪು ಮಾಡಿಲ್ಲ. ಎಲ್ಲಾರ ತರ ನಾನು ಕೂಡ ಮನುಷ್ಯ ನಾನೇನು ದೇವರಲ್ಲ. ಉದ್ದೇಶಪೂರ್ವಕವಾಗಂತು ತಪ್ಪು ಮಾಡುವುದಿಲ್ಲ ಎಂದು ಹೇಳಿದ್ದಾರೆ.
ನಾನು ಗುಜರಾತ್ ಮುಖ್ಯಮಂತ್ರಿ ಆದಾಗ, ನನ್ನ ಸರ್ಕಾರಿ ನಿವಾಸಕ್ಕೆ ನನ್ನ ಸ್ನೇಹಿತರು, ಶಿಕ್ಷಕರನ್ನು ಆಹ್ವಾನಿಸಿದ್ದೆ. ಆದರೆ, ಅವರು ನನ್ನನ್ನು ಮುಖ್ಯಮಂತ್ರಿಯಾಗಿ ನೋಡಿದ್ದರು. ಒಬ್ಬ ಸ್ನೇಹಿತನಾಗಿ ನೋಡಲೇ ಇಲ್ಲ ಎಂದು ಬೇಸರಿಸಿದರು.
ಯುವ ರಾಜಕಾರಣಿಗಳಿಗೆ ಮೋದಿ ಸಲಹೆ
ದೇಶಕ್ಕೆ ಸೇವೆ ಮಾಡಬೇಕು ಎನ್ನುವ ಧ್ಯೇಯೋದ್ದೇಶದೊಂದಿಗೆ ಯುವಕರು ರಾಜಕೀಯಕ್ಕೆ ಬರಬೇಕೇ ವಿನಹಃ ಯಾವುದೊ ಮಹತ್ವಾಕಾಂಕ್ಷೆಯೊಂದಿಗೆ ಅಲ್ಲ. ರಾಜಕೀಯಕ್ಕೆ ಬರುವುದೇ ಬೇರೆ ರಾಜಕೀಯದಲ್ಲಿ ಯಶಸ್ವಿಯಾಗುವುದೇ ಬೇರೆ. ನೀವು ರಾಜಕೀಯಕ್ಕೆ ಬಂದರೆ ಒಳ್ಳೇಯ ಉದ್ದೇಶದೊಂದಿಗೆ ಬರಬೇಕು ಎಂದು ಯುವಕರಿಗೆ ಮೋದಿ ಕರೆ ನೀಡಿದರು.
ಉದ್ಯಮಿಯಾಗಬೇಕೆನ್ನುವವರು ತಮ್ಮ ಕಂಪನಿಯ ಬೆಳವಣಿಗೆಯನ್ನು ನೋಡುತ್ತಾರೆ. ರಾಜಕಾರಣಿಯಾಗ ಬೇಕುನ್ನುವವರು ರಾಷ್ಟ್ರ ಮೊದಲು ಎನ್ನುತ್ತಾ ತಮ್ಮ ಸರ್ವಸ್ವವನ್ನು ತ್ಯಾಗ ಮಾಡಲು ಸಿದ್ಧರಾಗಿರಬೇಕು. ಆಗ ಸಮಾಜ ಅವರನ್ನು ಒಪ್ಪಿಕೊಳ್ಳುತ್ತದೆ ಎಂದು ಹೇಳಿದರು.