ಹೊಸದಿಲ್ಲಿ : ಭಾರತದ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು ಸರ್ವೋಚ್ಚ ನ್ಯಾಯಾಲಯದ ಅತ್ಯಂತ ಹಿರಿಯ ನ್ಯಾಯಾಽಶರಾದ ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹೆಸರನ್ನು ತಮ್ಮ ಉತ್ತರಾಧಿಕಾರಿಯಾಗಿ ಪ್ರಸ್ತಾಪಿಸಿದ್ದು, ಕೇಂದ್ರ ಕಾನೂನು ಸಚಿವಾಲಯಕ್ಕೆ ಈ ಶಿಫಾರಸು ಮಾಡಿದ್ದಾರೆ. ಸಿಜೆಐ ಬಿ.ಆರ್.ಗವಾಯಿ ಅವರು ನವೆಂಬರ್ 23ರಂದು ನಿವೃತ್ತರಾಗಲಿದ್ದಾರೆ.
ಸರ್ಕಾರದಿಂದ ಅಧಿಸೂಚನೆ ಬಂದ ನಂತರ, ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಭಾರತದ 53ನೇ ಮುಖ್ಯ ನ್ಯಾಯಮೂರ್ತಿಯಾಗಲಿದ್ದಾರೆ ಮತ್ತು ಫೆಬ್ರವರಿ 9, 2027 ರಂದು ನಿವೃತ್ತರಾಗುವವರೆಗೆ ಸೇವೆ ಸಲ್ಲಿಸಲಿದ್ದಾರೆ. ಅಂದರೆ ಸುಮಾರು 14 ತಿಂಗಳ ಕಾಲ ಸೂರ್ಯಕಾಂತ್ ಅವರು ಭಾರತದ ಮುಖ್ಯ ನ್ಯಾಯಮೂರ್ತಿಯಾಗಿರಲಿದ್ದಾರೆ.
ಸಾಂಪ್ರದಾಯಿಕವಾಗಿ, ಹಾಲಿ ಸಿಜೆಐ 65 ವರ್ಷ ವಯಸ್ಸನ್ನು ತಲುಪಿದ ನಂತರ ನಿವೃತ್ತರಾಗುವ ಒಂದು ತಿಂಗಳ ಮೊದಲು ತಮ್ಮ ಉತ್ತರಾಧಿಕಾರಿಯ ಹೆಸರನ್ನು ಶಿಫಾರಸು ಮಾಡಿ ಪತ್ರವನ್ನು ಕಳುಹಿಸುತ್ತಾರೆ. ಕೇಂದ್ರ ಸರ್ಕಾರವು ಅಕ್ಟೋಬರ್ ೨೩, ೨೦೨೫ ರಂದು ಸಿಜೆಐ ಗವಾಯಿ ಅವರಿಗೆ ಪತ್ರ ಬರೆದು, ಸ್ಥಾಪಿತ ಸಂಪ್ರದಾಯಕ್ಕೆ ಅನುಗುಣವಾಗಿ ತಮ್ಮ ಉತ್ತರಾಽಕಾರಿಯನ್ನು ಶಿಫಾರಸು ಮಾಡುವಂತೆ ಕೋರಿತ್ತು. ಈ ಕೋರಿಕೆಗೆ ಒಗ್ಗಿಕೊಂಡು, ಸಿಜೆಐ ಗವಾಯಿ ಅವರು ನ್ಯಾಯಮೂರ್ತಿ ಸೂರ್ಯಕಾಂತ್ ಅವರ ಹೆಸರನ್ನು ಶಿಫಾರಸು ಮಾಡಿದ್ದಾರೆ.
ಇದನ್ನೂ ಓದಿ:-CJIರತ್ತ ಶೂ ಎಸೆತ ಪ್ರಕರಣ : ವಕೀಲ ರಾಕೇಶ್ ವಿರುದ್ಧ ಕ್ರಮ ಕೈಬಿಟ್ಟ ಸುಪ್ರೀಂಕೋರ್ಟ್
ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ತಮ್ಮ ಕಾರ್ಯಕ್ಷಮತೆಯಿಂದಾಗಿ ಗೌರವಕ್ಕೆ ಪಾತ್ರರಾಗಿದ್ದಾರೆ. ಅವರ ಅನುಭವ ಮತ್ತು ಕಾನೂನಿನ ಜ್ಞಾನವು ಈ ಜವಾಬ್ದಾರಿಯುತ ಹುದ್ದೆಗೆ ಸೂಕ್ತವಾಗಿದೆ ಎಂದು ಸಿಜೆಐ ಗವಾಯಿ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಚುಕ್ಕಾಣಿ ಹಿಡಿಯಲು ಎಲ್ಲಾ ಅಂಶಗಳಲ್ಲಿ ಸಮರ್ಥ ಮತ್ತು ಯೋಗ್ಯ ವ್ಯಕ್ತಿ ಎಂದು ಗವಾಯಿ ಹೇಳಿದ್ದಾರೆ.
ನ್ಯಾ.ಸೂರ್ಯಕಾಂತ್ ಪರಿಚಯ
ನ್ಯಾಯಮೂರ್ತಿ ಸೂರ್ಯಕಾಂತ್ ಅವರು ಫೆಬ್ರವರಿ ೧೦, ೧೯೬೨ ರಂದು ಹರಿಯಾಣದ ಹಿಸಾರ್ನಲ್ಲಿ ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಅವರು ೧೯೮೧ರಲ್ಲಿ ಹಿಸಾರ್ ಸರ್ಕಾರಿ ಸ್ನಾತಕೋತ್ತರ ಕಾಲೇಜಿನಿಂದ ಪದವಿ ಪಡೆದರು. ೧೯೮೪ರಲ್ಲಿ ರೋಹ್ಟಕ್ನಲ್ಲಿರುವ ಮಹರ್ಷಿ ದಯಾನಂದ ವಿಶ್ವವಿದ್ಯಾಲಯದಿಂದ ಕಾನೂನು ಪದವಿ ಪಡೆದರು. ೧೯೮೪ರಲ್ಲಿ ಹಿಸಾರ್ ಜಿಲ್ಲಾ ನ್ಯಾಯಾಲಯದಲ್ಲಿ ವಕೀಲಿ ವೃತ್ತಿ ಪ್ರಾರಂಭಿಸಿದರು. ೧೯೮೫ರಲ್ಲಿ ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯದಲ್ಲಿ ವಕೀಲಿಕೆ ಮುಂದುವರಿಸಿದರು.
ಮಾರ್ಚ್ ೨೦೦೧ರಲ್ಲಿ ಅವರನ್ನು ಹಿರಿಯ ವಕೀಲರನ್ನಾಗಿ ನೇಮಿಸಲಾಯಿತು. ಜನವರಿ ೯, ೨೦೦೪ರಂದು ಪಂಜಾಬ್ ಮತ್ತು ಹರಿಯಾಣ ಉಚ್ಚ ನ್ಯಾಯಾಲಯಕ್ಕೆ ಖಾಯಂ ನ್ಯಾಯಮೂರ್ತಿಯಾಗಿ ಬಡ್ತಿ ಪಡೆಯುವವರೆಗೂ ಅವರು ಹರಿಯಾಣದ ಅಡ್ವೊಕೇಟ್ ಜನರಲ್ ಹುದ್ದೆ ಅಲಂಕರಿಸಿದ್ದರು. ಅವರನ್ನು ಅಕ್ಟೋಬರ್ ೫, ೨೦೧೮ರಿಂದ ಜಾರಿಗೆ ಬರುವಂತೆ ಹಿಮಾಚಲ ಪ್ರದೇಶ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲಾಯಿತು. ೨೦೧೯ರ ಮೇ ತಿಂಗಳಲ್ಲಿ ಸರ್ವೋಚ್ಚ ನ್ಯಾಯಾಲಯಕ್ಕೆ ಅವರು ಪದೋನ್ನತಿಗೊಂಡರು.





