ಢಾಕಾ : ಮಾನವ ಹಕ್ಕು ಉಲ್ಲಂಘನೆ ಪ್ರಕರಣದಲ್ಲಿ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರನ್ನು ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ದೋಷಿ ಎಂದು ತೀರ್ಪು ನೀಡಿದ್ದು ಅವರಿಗೆ ಗಲ್ಲು ಶಿಕ್ಷೆ ವಿಧಿಸಿ ಆದೇಶ ನೀಡಿದೆ.
ಬಾಂಗ್ಲಾದೇಶದ ಅಂತಾರಾಷ್ಟ್ರೀಯ ಅಪರಾಧ ನ್ಯಾಯಮಂಡಳಿಯ ತ್ರಿಸದಸ್ಯ ನ್ಯಾಯಪೀಠವು ಶೇಖ್ ಹಸೀನಾ ಅವರ ಮೇಲಿರುವ ಆರೋಪ ಸಾಬೀತಾಗಿದೆ ಎಂದು ಪ್ರಕಟಿಸಿದ್ದು ಶೇಖ್ ಹಸೀನಾ ಮಾನವ ಹಕ್ಕುಗಳ ಅಪರಾಧ ಎಸಗಿದ್ದಾರೆ. ಇದು ಗರಿಷ್ಠ ಶಿಕ್ಷೆಗೆ ಅರ್ಹವಾಗಿರುವ ಪ್ರಕರಣ ಎಂದು ತೀರ್ಪಿನಲ್ಲಿ ಉಲ್ಲೇಖಿಸಿದೆ.
ಇದನ್ನು ಓದಿ: ಲೈಂಗಿಕ ಕಿರುಕುಳ ಪ್ರಕರಣ : ಸೂಕ್ತ ದಾಖಲೆಗಳೊಂದಿಗೆ ವಿಚಾರಣೆಗೆ ಹಾಜರಾಗುವಂತೆ ನಟಿಗೆ ನೋಟಿಸ್
ಕಳೆದ ವರ್ಷ ವಿದ್ಯಾರ್ಥಿಗಳ ನೇತೃತ್ವದಲ್ಲಿ ದೇಶವ್ಯಾಪಕವಾಗಿ ಭುಗಿಲೆದ್ದ ದಂಗೆಗಳ ಮೇಲಿನ ‘ಮಾರಕ ದಮನ’ಕ್ಕೆ ಹಸೀನಾ ನೇರ ಸೂಚನೆ ನೀಡಿದ್ದಾಗಿ ನ್ಯಾಯಾಲಯವು ಹೇಳಿದೆ. ಶೇಖ್ ಹಸೀನಾ ಅವರ ಈ ನಡೆಯಿಂದ ಬಾಂಗ್ಲಾದೇಶದಲ್ಲಿ ಸಾಕಷ್ಟು ಹಿಂಸಾಚಾರ ನಡೆದಿತ್ತು. ನೂರಾರು ಪ್ರಜೆಗಳು ಸಾವನ್ನಪ್ಪಿದ್ದರು. ಈ ಪ್ರಕರಣದಲ್ಲಿ ಶೇಖ್ ಹಸೀನಾರನ್ನು ಪ್ರಮುಖ ಆರೋಪಿಯಾಗಿಸಲಾಗಿತ್ತು. ಈ ಆದೇಶಗಳನ್ನು ಹೊರಡಿಸುವ ಮೂಲಕ ಶೇಖ್ ಹಸೀನಾ ಮತ್ತು ಪೊಲೀಸ್ ಐಜಿ ಅವರ ನಿಷ್ಕ್ರಿಯತೆಯ ಮೂಲಕ ವಿದ್ಯಾರ್ಥಿಗಳನ್ನು ಹತ್ಯೆ ಮಾಡಲಾಗಿದೆ. ಈ ಹತ್ಯೆಗಳು ಪ್ರಧಾನಿ ಶೇಖ್ ಹಸೀನಾ ಅವರ ಆದೇಶ ಮತ್ತು ಅವರ ಅರಿವುನಲ್ಲೇ ನಡೆದಿದೆ. ಇಂತಹ ಕೃತ್ಯಗಳನ್ನು ಎಸಗುವ ಮೂಲಕ ಮಾನವೀಯತೆಯ ವಿರುದ್ಧ ಅಪರಾಧಗಳನ್ನು ಮಾಡಿದ್ದಾರೆ ಎಂದು ಕೋರ್ಟ್ ಹೇಳಿದೆ.
ಇದೀಗ ತಿಂಗಳುಗಳ ಕಾಲ ನಡೆದ ವಿಚಾರಣೆಯಲ್ಲಿ ಉತ್ಪಾದಿಸಲಾದ ಸಾಕ್ಷ್ಯಗಳು, ಭದ್ರತಾ ಸಿಬ್ಬಂದಿಯ ಹೇಳಿಕೆಗಳು ಮತ್ತು ತನಿಖಾ ವರದಿಗಳ ಆಧಾರದಲ್ಲಿ ನ್ಯಾಯಾಲಯವು ಹಸೀನಾ ಅವರ ಪಾತ್ರವನ್ನು ಉಲ್ಲೇಖಿಸಿದೆ. ಪ್ರತಿಭಟನೆಗಳನ್ನು ಕುಂಠಿತಗೊಳಿಸುವ ಹೆಸರಿನಲ್ಲಿ ಭದ್ರತಾ ಪಡೆಗಳು ಅತಿಯಾದ ಬಲಪ್ರಯೋಗಕ್ಕೆ ಮುಂದಾಗಿದ್ದವು ಎಂಬ ವಿಚಾರವನ್ನು ನ್ಯಾಯಾಲಯ ವಿಶೇಷವಾಗಿ ಉಲ್ಲೇಖಿಸಿದೆ.
ಶೇಖ್ ಹಸೀನಾ ಮಾತ್ರವಲ್ಲದೇ ಅವರ ಆಪ್ತರಾಗಿದ್ದ ಮಾಜಿ ಗೃಹ ಸಚಿವ ಅಸಾದುಜ್ಜಮಾನ್ ಖಾನ್ ಕಮಲ್ ಮತ್ತು ಮಾಜಿ ಪೊಲೀಸ್ ಇನ್ಸ್ಪೆಕ್ಟರ್ ಜನರಲ್ ಚೌಧರಿ ಅಬ್ದುಲ್ಲಾ ಅಲ್-ಮಾಮುನ್ ಅವರನ್ನೂ ಕೋರ್ಟ್ ದೋಷಿ ಎಂದು ಹೇಳಿದೆ.





