ಹೊಸದಿಲ್ಲಿ : ಸುಪ್ರೀಂ ಕೋರ್ಟ್ನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಬಿ.ಆರ್. ಗವಾಯಿ ಅವರ ಮೇಲೆ ಶೂ ಎಸೆಯುವ ಯತ್ನ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರೊಬ್ಬರು ವಿಚಾರಣೆಗಾಗಿ ಅಟಾರ್ನಿ ಜನರಲ್ ಅವರಿಗೆ ಪತ್ರ ಬರೆದಿದ್ದಾರೆ.
ವಕೀಲ ರಾಕೇಶ್ ಕಿಶೋರ್ ವಿರುದ್ಧ ಕ್ರಿಮಿನಲ್ ನ್ಯಾಯಾಂಗ ನಿಂದನೆ ವಿಚಾರಣೆಗೆ ಅನುಮತಿ ನೀಡುವಂತೆ ಕೋರಿ ವಕೀಲ ಸುಭಾಷ್ ಚಂದ್ರನ್ ಕೆ.ಆರ್. ಅವರು ನ್ಯಾಯಾಂಗ ನಿಂದನೆ ಕಾಯ್ದೆ, ೧೯೭೧ರ ೧೫ನೇ ಸೆಕ್ಷನ್ ಅಡಿಯಲ್ಲಿ ಅನುಮತಿ ನೀಡುವಂತೆ ಪತ್ರದಲ್ಲಿ ಮನವಿ ಮಾಡಿದ್ದಾರೆ. ಭಾರತದ ಸಂವಿಧಾನವನ್ನು ಸೋಲಿಸುವ, ಸುಪ್ರೀಂ ಕೋರ್ಟ್ನ ಅಧಿಕಾರ ಮತ್ತು ಘನತೆಯನ್ನು ಮುಕ್ಕಾಗಿಸುವ ಅತ್ಯಂತ ಹೀನ ಕೃತ್ಯವಿದು ಎಂದು ಸುಭಾಷ್ ಚಂದ್ರನ್ ಅವರು ಅಟಾರ್ನಿ ಜನರಲ್ಗೆ ಬರೆದ ಪತ್ರದಲ್ಲಿ ತಿಳಿಸಿದ್ದಾರೆ.
ನ್ಯಾಯಾಂಗ ನಿಂದನೆಯಾಗಿರುವ ಬಗ್ಗೆ ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟ್ಗೆ ಖುದ್ದಾಗಿ ತಿಳಿದಿದ್ದರೆ, ಇಂಥ ಸಂದರ್ಭದಲ್ಲಿ ನ್ಯಾಯಾಂಗ ನಿಂದನೆ ವಿಚಾರಣೆಯನ್ನು ಈ ನ್ಯಾಯಾಲಯಗಳು ಆರಂಭಿಸಬಹುದಾಗಿದೆ ಎಂದು ಕಾಯ್ದೆಯಲ್ಲಿ ಹೇಳಲಾಗಿದೆ. ಯಾರು ಬೇಕಾದರು ವ್ಯಕ್ತಿಯೊಬ್ಬರ ಮೇಲೆ ನ್ಯಾಯಾಂಗ ನಿಂದನೆ ಪ್ರಕರಣವನ್ನು ದಾಖಲಿಸಬಹುದು. ಆದರೆ, ಇದಕ್ಕೆ ಹೈಕೋರ್ಟ್ನಲ್ಲಿ ಅಡ್ವೊಕೇಟ್ ಜನರಲ್ ಒಪ್ಪಿಗೆ ನೀಡಬೇಕು. ಸುಪ್ರೀಂ ಕೋರ್ಟ್ನ ಸಂದರ್ಭದಲ್ಲಿ ಅಟಾರ್ನಿ ಜನರಲ್ ಅಥವಾ ಸಾಲಿಸಿಟರಲ್ ಜನರಲ್ ಒಪ್ಪಿಗೆ ನೀಡಬೇಕಾಗುತ್ತದೆ.





