Mysore
22
scattered clouds

Social Media

ಸೋಮವಾರ, 16 ಫೆಬ್ರವರಿ 2026
Light
Dark

ವಿವಾಹಪೂರ್ವ ದೈಹಿಕ ಸಂಬಂಧದಲ್ಲಿ ಎಚ್ಚರಿಕೆ ಅಗತ್ಯ : ಸುಪ್ರೀಂ ಕೋರ್ಟ್‌

ಹೊಸದಿಲ್ಲಿ : ವಿವಾಹಪೂರ್ವ ದೈಹಿಕ ಸಂಬಂಧಗಳಲ್ಲಿ ಅತ್ಯಂತ ಜಾಗರೂಕತೆ ವಹಿಸಬೇಕು ಎಂದು ಸುಪ್ರೀಂ ಕೋರ್ಟ್‌ ಎಚ್ಚರಿಕೆ ನೀಡಿದೆ.

ಮದುವೆಯ ಸುಳ್ಳು ಭರವಸೆಯ ಮೇಲೆ ಅತ್ಯಾಚಾರ ಆರೋಪ ಹೊತ್ತಿರುವ ಆರೋಪಿಯ ಜಾಮೀನು ಅರ್ಜಿ ವಿಚಾರಣೆಯ ವೇಳೆ ನ್ಯಾಯಮೂರ್ತಿಗಳಾದ ಬಿ.ವಿ. ನಾಗರತ್ನ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠವು ಈ ಅಭಿಪ್ರಾಯ ವ್ಯಕ್ತಪಡಿಸಿತು.

ಮದುವೆಗೆ ಮುನ್ನ ಹುಡುಗ ಮತ್ತು ಹುಡುಗಿ “ಸಂಪೂರ್ಣ ಅಪರಿಚಿತರು” ಎಂದು ಭಾವಿಸಿ, “ಯಾರನ್ನೂ ನಂಬಬೇಡಿ” ಎಂದು ಪೀಠ ಸ್ಪಷ್ಟಪಡಿಸಿದೆ.

“ನಾವು ಹಳೆಯ ಯುಗದವರು (old-fashioned) ಆಗಿರಬಹುದು, ಆದರೆ ಮದುವೆಗೆ ಮುನ್ನ ಹುಡುಗ-ಹುಡುಗಿ ಸಂಪೂರ್ಣ ಅಪರಿಚಿತರು. ದೈಹಿಕ ಸಂಬಂಧಕ್ಕೆ ತೊಡಗಿಸಿಕೊಳ್ಳುವ ಮುನ್ನ ಅತ್ಯಂತ ಎಚ್ಚರಿಕೆ ವಹಿಸಬೇಕು. ಯಾವುದೇ ಭರವಸೆಯ ಮೇಲೆ ನಂಬಿಕೆ ಇಡಬಾರದು” ಎಂದು ನ್ಯಾಯಮೂರ್ತಿ ನಾಗರತ್ನ ಅವರು ಹೇಳಿದರು.

ಪ್ರಕರಣದಲ್ಲಿ ಮಹಿಳೆಯೊಬ್ಬರು ಆರೋಪಿಯೊಂದಿಗೆ ಮ್ಯಾಟ್ರಿಮೋನಿಯಲ್ ವೆಬ್‌ಸೈಟ್ ಮೂಲಕ ಪರಿಚಯವಾಗಿ, ಮದುವೆಯ ಭರವಸೆಯ ಮೇಲೆ ದೈಹಿಕ ಸಂಬಂಧ ಹೊಂದಿದ್ದರು ಎಂದು ಆರೋಪಿಸಿದ್ದರು. ನಂತರ ಆರೋಪಿ ಮದುವೆ ನಿರಾಕರಿಸಿದ್ದರಿಂದ ಅತ್ಯಾಚಾರ ದಾಖಲಾಗಿತ್ತು. ಆದರೆ ಕೋರ್ಟ್‌ ಪ್ರಶ್ನಿಸಿತು: “ಏಕೆ ಮದುವೆಗೆ ಮುನ್ನ ದೈಹಿಕ ಸಂಬಂಧಕ್ಕೆ ಒಪ್ಪಿಕೊಂಡರು? ದುಬೈಗೆ ಏಕೆ ಪ್ರಯಾಣಿಸಿದರು?” ಎಂದು. ಇದು ಸಮ್ಮತಿಯ ಮೇಲಿನ ಸಂಬಂಧವಾಗಿ ಕಾಣುತ್ತದೆ ಎಂದು ಅಭಿಪ್ರಾಯಪಟ್ಟಿತು.

ಮುಂದುವರೆದು, “ಮದುವೆಯ ನಂತರವಷ್ಟೇ ಇಬ್ಬರೂ ಕಾನೂನುಬದ್ಧವಾಗಿ ಸಂಬಂಧಿತರಾಗುತ್ತಾರೆ. ಅದಕ್ಕೂ ಮುನ್ನ ಭಾವನಾತ್ಮಕ ಹತ್ತಿರತೆ ಇದ್ದರೂ ಕಾನೂನಿನ ದೃಷ್ಟಿಯಲ್ಲಿ ಅಪರಿಚಿತರು. ಇಂತಹ ಸಂಬಂಧಗಳ ವಿವಾದಗಳು ದೀರ್ಘಕಾಲೀನ ಕ್ರಿಮಿನಲ್ ವಿಚಾರಣೆಗೆ ಕಾರಣವಾಗುತ್ತಿವೆ”. ಈ ರೀತಿಯ ಪ್ರಕರಣಗಳಲ್ಲಿ ಮಧ್ಯಸ್ಥಿಕೆ ಮೂಲಕ ಪರಿಹಾರ ಸಾಧ್ಯ ಎಂದೂ ಸೂಚಿಸಿತು.

ಇನ್ನೂ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಯಾಗುತ್ತಿದ್ದು, ಕೆಲವರು ಇದನ್ನು ಸಾಂಪ್ರದಾಯಿಕ ನೋಟ ಎಂದು ಟೀಕಿಸಿದರೆ, ಇನ್ನು ಕೆಲವರು ಸಮ್ಮತಿ ಮತ್ತು ಜಾಗರೂಕತೆಯ ಮಹತ್ವವನ್ನು ಒಪ್ಪಿಕೊಂಡಿದ್ದಾರೆ. ಸುಪ್ರೀಂ ಕೋರ್ಟ್‌ನ ಈ ಎಚ್ಚರಿಕೆ ಯುವಕ-ಯುವತಿಯರಲ್ಲಿ ವಿವಾಹಪೂರ್ವ ಸಂಬಂಧಗಳ ಬಗ್ಗೆ ಜಾಗೃತಿ ಮೂಡಿಸುವ ಸಂದೇಶ ನೀಡಿದೆ ಎಂದು ಕಾನೂನು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

Tags:
error: Content is protected !!