ಹೊಸದಿಲ್ಲಿ : ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ೧೦೧ನೇ ಜಯಂತಿ ಹಿನ್ನೆಲೆಯಲ್ಲಿ ದಿಲ್ಲಿ ಸರ್ಕಾರ ಗುರುವಾರ ರಾಜಧಾನಿಯಲ್ಲಿ ಕರ್ನಾಟಕದ ಇಂದಿರಾ ಕ್ಯಾಂಟಿನ್ ಮಾದರಿಯಲ್ಲಿ ೧೦೦ ಹೊಸ ಅಟಲ್ ಕ್ಯಾಂಟೀನ್ಗಳನ್ನು ಆರಂಭಿಸಿದೆ.
ಈ ಕ್ಯಾಂಟೀನ್ಗಳಲ್ಲಿ ಕೇವಲ ೫ ರೂ.ಗೆ ಊಟ ಸಿಗಲಿದೆ. ದಿಲ್ಲಿ ಮುಖ್ಯಮಂತ್ರಿ ರೇಖಾ ಗುಪ್ತಾ ಅವರು ಲಾಜಪತ್ ನಗರದ ನೆಹರೂ ನಗರದಲ್ಲಿ ಮೊದಲ ಕ್ಯಾಂಟೀನ್ನ ಉದ್ಘಾಟನೆ ನೆರವೇರಿಸಿದರು.
ನಗರಾಭಿವೃದ್ಧಿ ಸಚಿವ ಆಶಿಷ್ ಸೂದ್ ಅವರು ಮಾತನಾಡಿ, ಭಾರತೀಯ ಜನತಾ ಪಕ್ಷದ ಚುನಾವಣಾ ಭರವಸೆಯೊಂದಿಗೆ ಈ ಯೋಜನೆಯನ್ನು ಜಾರಿಗೆ ತಂದಿದ್ದು, ಪ್ರತಿ ಕ್ಯಾಂಟೀನ್ನಲ್ಲಿ ದಿನಕ್ಕೆ ಸುಮಾರು ೫೦೦ ಜನರಿಗೆ ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆಯಿದೆ. ಈ ಮೂಲಕ ಒಟ್ಟಾರೆಯಾಗಿ ದಿನಕ್ಕೆ ಸುಮಾರು ಒಂದು ಲಕ್ಷ ಜನರಿಗೆ ಊಟ ಒದಗಿಸಲಿದೆ ಎಂದು ತಿಳಿಸಿದ್ದಾರೆ.
ಇದನ್ನು ಓದಿ: ರೈತರ ನೆರವಿಗೆ ಕ್ರೆಡಲ್ನಿಂದ `ಪಿಎಂ ಕುಸುಮ್ ಬಿ’ ಸಹಾಯವಾಣಿ ಕೇಂದ್ರ ಸ್ಥಾಪನೆ
ಈ ಕ್ಯಾಂಟೀನ್ಗಳಲ್ಲಿ ರೊಟಿ, ದಾಲ್, ತರಕಾರಿ, ಅನ್ನ ಮತ್ತು ಉಪ್ಪಿನಕಾಯಿ ಸೇರಿದಂತೆ ಪೋಷಕಾಂಶವುಳ್ಳ ಆಹಾರ ಲಭ್ಯವಿರುತ್ತದೆ. ಒಂದು ಊಟದ ವೆಚ್ಚ ಸುಮಾರು ೩೦ ರೂ. ಆಗಿದ್ದರೂ, ಸರ್ಕಾರದ ಸಬ್ಸಿಡಿಯಿಂದ ೫ ರೂ.ಗೆ ಒದಗಿಸಲಾಗುತ್ತಿದೆ. ಕ್ಯಾಂಟೀನ್ಗಳನ್ನು ಮುಖ್ಯವಾಗಿ ಪ್ರಮುಖ ಪ್ರದೇಶಗಳ ಸಮೀಪ ಸ್ಥಾಪಿಸಲಾಗಿದ್ದು, ದಿಲ್ಲಿ ಅರ್ಬನ್ ಶೆಲ್ಟರ್ ಇಂಪ್ರೂವ್ಮೆಂಟ್ ಬೋರ್ಡ್ ಇವುಗಳ ನಿರ್ವಹಣೆಯ ಜವಾಬ್ದಾರಿಯನ್ನು ಹೊತ್ತಿದೆ.
ಯಾರೂ ಹಸಿವಿನಿಂದ ಮಲಗಬಾರದು ಎಂಬ ಉದ್ದೇಶದಿಂದ ಆರಂಭವಾದ ಈ ಯೋಜನೆಯು ದಿಲ್ಲಿಯ ಬಡವರಿಗೆ ದೊಡ್ಡ ಆಸರೆಯಾಗಲಿದೆ. ಇದು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಬಡವರ ಕಡೆಗೆ ಇದ್ದ ಕಾಳಜಿಯನ್ನು ನೆನಪಿಸುತ್ತದೆ ಎಂದು ಮುಖ್ಯಮಂತ್ರಿ ರೇಖಾ ಗುಪ್ತಾ ತಿಳಿಸಿದ್ದಾರೆ.





