ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು ತಮ್ಮ ಮಾಸಿಕ ರೇಡಿಯೋ ಕಾರ್ಯಕ್ರಮ ಮನ್ ಕಿ ಬಾತ್ನ 131ನೇ ಸಂಚಿಕೆಯಲ್ಲಿ ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡುತ್ತಾ ತಂತ್ರಜ್ಞಾನ, ಸಾಮಾಜಿಕ ಜಾಗೃತಿ ಹಾಗೂ ಭಾರತದ ಸಾಂಸ್ಕೃತಿಕ ಪರಂಪರೆಯ ಕುರಿತು ಆಲೋಚನೆಗಳನ್ನು ಹಂಚಿಕೊಂಡರು.
ಎಐ ಇಂಪ್ಯಾಕ್ಟ್ ಶೃಂಗಸಭೆ 2026ರ ಬಗ್ಗೆ ಮಾತನಾಡುವ ಮೂಲಕ ತಮ್ಮ ಭಾಷಣವನ್ನು ಪ್ರಾರಂಭಿಸಿದ ಪ್ರಧಾನಿ ನರೇಂದ್ರ ಮೋದಿ ಅವರು, ಸಭೆಯಲ್ಲಿ ಜಾಗತಿಕ ನಾಯಕರು ಮತ್ತು ತಂತ್ರಜ್ಞಾನ ಸಿಇಓಗಳನ್ನು ಭೇಟಿಯಾದ ಬಗ್ಗೆ ಹೇಳಿದರು.
ಶೃಂಗಸಭೆಯ ಪ್ರದರ್ಶನದಲ್ಲಿ ನಾನು ವಿಶ್ವ ನಾಯಕರಿಗೆ ಅಸಂಖ್ಯಾತ ವಿಷಯಗಳನ್ನು ತೋರಿಸಿದೆ. ಪ್ರಾಣಿಗಳ ಚಿಕಿತ್ಸೆಯಲ್ಲಿ ಎಐ ಹೇಗೆ ಸಹಾಯ ಮಾಡುತ್ತದೆ. ರೈತರು ದಿನದ 24 ಗಂಟೆಯೂ ಎಐ ನೆರವಿನ ಸಹಾಯದಿಂದ ತಮ್ಮ ಡೈರಿ ಮತ್ತು ಜಾನುವಾರುಗಳನ್ನು ಹೇಗೆ ಮೇಲ್ವಿಚಾರಣೆ ಮಾಡಬಹುದು ಎಂಬುದನ್ನು ಶೃಂಗಸಭೆಯು ಪ್ರದರ್ಶಿಸಿತು ಎಂದು ಹೇಳಿದರು.
ಭಾರತೀಯ ತಯಾರಕರು ಮತ್ತು ಸ್ಮಾರ್ಟ್ ಆಪ್ಗಳು ಶೂನ್ಯ ದೋಷ, ಉನ್ನತ-ಗುಣಮಟ್ಟದ ಉತ್ಪನ್ನಗಳನ್ನು ಗುರಿಯಾಗಿಸಿಕೊಳ್ಳುವ ಅಗತ್ಯವನ್ನು ಹೇಳಿದ ಅವರು, ಭಾರತವು ಜಾಗತಿಕವಾಗಿ ಗೌರವಿಸಲ್ಪಟ್ಟ ಮತ್ತು ಮೌಲ್ಯಯುತವಾದ ಸರಕು ಮತ್ತು ಸೇವೆಗಳನ್ನು ಉತ್ಪಾದಿಸಬೇಕು, ನಾವೀನ್ಯತೆಯ ಕೇಂದ್ರವಾಗಿ ದೇಶದ ಸ್ಥಾನವನ್ನು ಬಲಪಡಿಸಬೇಕು ಎಂದು ಹೇಳಿದರು.
ಕೃತಕ ಬುದ್ದಿಮತ್ತೆ, ಬಾಹ್ಯಾಕಾಶ ಸಂಶೋಧನೆ, ಅರೆವಾಹಕಗಳು ಮತ್ತು ಹಸಿರು ಶಕ್ತಿಯಂತಹ ಉದಯೋನ್ಮುಖ ತಂತ್ರಜ್ಞಾನಗಳ ಮಹತ್ವದ ಬಗ್ಗೆ ಅವರು ಬೆಳಕು ಚೆಲ್ಲಿದರು.
ನಮ್ಮ ಯುವಕರು, ನಾವೀನ್ಯಕಾರರು ಮತ್ತು ಉದ್ಯಮಿಗಳು ಭಾರತವನ್ನು ಜಾಗತಿಕ ಮನ್ನಣೆಯ ಹೊಸ ಎತ್ತರಕ್ಕೆ ಕೊಂಡೊಯ್ಯುವ ಶಕ್ತಿಯನ್ನು ಹೊಂದಿದ್ದಾರೆ ಎಂದು ಹೇಳಿದರು.
ಇನ್ನು ಹಿಂದಿನ ಅಭಿಯಾನಗಳಿಂದ ಹೆಚ್ಚಿದ ಜಾಗೃತಿಯ ಹೊರತಾಗಿಯೂ ಡಿಜಿಟಲ್ ವಂಚನೆಯ ವಿಷಯವನ್ನು ಉಲ್ಲೇಖಿಸಿದ ಅವರು, ಡಿಜಿಟಲ್ ಸಾಕ್ಷರತೆ ಮತ್ತು ಸುರಕ್ಷತೆಯ ಮಹತ್ವವನ್ನು ಒತ್ತಿ ಹೇಳಿದರು. ಕೆವೈಸಿ ಪ್ರಕ್ರಿಯೆಯ ಬಗ್ಗೆ ಕೇಳುಗರಿಗೆ ಅವರು ನೆನಪಿಸಿದರು. ಡಿಜಿಟಲ್ ವೇದಿಕೆಗಳನ್ನು ಬಳಸುವಾಗ ಜಾಗರೂಕರಾಗಿರಲು ನಾಗರಿಕರನ್ನು ಒತ್ತಾಯಿಸಿದರು.





