ನವದೆಹಲಿ: ಪಹಲ್ಗಾಮ್ ದಾಳಿ ಬಳಿಕ ಸಿಂಧೂ ನದಿ ಒಪ್ಪಂದವನ್ನು ತಡೆಹಿಡಿದು ಪಾಕಿಸ್ತಾನಕ್ಕೆ ಭಾರತ ಜಲ ಶಾಕ್ ನೀಡಿತ್ತು. ಈಗ ಒಂದು ಹೆಜ್ಜೆ ಮುಂದೆ ಹೋಗಿ ಪಾಕ್ಗೆ ಮತ್ತೊಂದು ಬಿಗ್ ಶಾಕ್ ನೀಡಲು ಮುಂದಾಗಿದೆ.
ಜಲ ಒಪ್ಪಂದ ತಡೆ ಹಿಡಿದಿದ್ದರೂ ನೀರಿನ ತಡೆಗೆ ಭಾರತದ ಬಳಿ ಯಾವುದೇ ಸೌಕರ್ಯ ಇಲ್ಲ. ಹೀಗಾಗಿ ಭಾರತ ಹೊಸ ಡ್ಯಾಂ ಅನ್ನು ಚೆನಾಬ್ ನದಿಗೆ ನಿರ್ಮಿಸಲು ಮುಂದಾಗಿದೆ. ಜಮ್ಮು ಮತ್ತು ಕಾಶ್ಮೀರದ ಕಿತ್ವಾರ್ನಲ್ಲಿ ಚೆನಾಬ್ ನದಿಗೆ ಕ್ವಾರ್ ಅಣೆಕಟ್ಟು ನಿರ್ಮಾಣಕ್ಕೆ ಮೋದಿ ಸರ್ಕಾರ ವೇಗ ನೀಡುತ್ತಿದೆ. ಇದಕ್ಕಾಗಿ 3,119 ಕೋಟಿ ರೂ. ಸಾಲ ಪಡೆಯಲು ಮುಂದಾಗಿದೆ.
ಇದು ಗ್ರೀನ್ಫೀಲ್ಡ್ ಅಣೆಕಟ್ಟಾಗಿದ್ದು, ಕಳೆದ ವರ್ಷ ನಿರ್ಮಾಣಕ್ಕೆ ಚಾಲನೆ ನೀಡಲಾಗಿದೆ. ಈಗ ಇದರ ನಿರ್ಮಾಣಕ್ಕೆ ಮೋದಿ ಸರ್ಕಾರ ವೇಗ ನೀಡಿದ್ದು, ಮುಂದಿನ ವರ್ಷದೊತ್ತಿಗೆ ನಿರ್ಮಾಣ ಕಾರ್ಯ ಮುಕ್ತಾಯವಾಗಲಿದೆ. ಇದರಿಂದ ಪಾಕಿಸ್ತಾನಕ್ಕೆ ಹೋಗುತ್ತಿದ್ದ ನೀರಿನ ಹರಿವಿನ ಮೇಲೆ ಭಾರೀ ಪರಿಣಾಮ ಬೀರಲಿದೆ. ಇದು ಪಾಕಿಸ್ತಾನಕ್ಕೆ ಜಲಸಂಕಷ್ಟ ಸೃಷ್ಟಿಸಲಿದೆ.
ಏಪ್ರಿಲ್ 22ರ ಪಹಲ್ಗಾಮ್ ದಾಳಿ ಬಳಿಕ ಭಾರತ ಪಾಕಿಸ್ತಾನದ ಮೇಲೆ ಜಲ ಬಾಂಬ್ ಹಾಕಿತ್ತು. ಅಂದ್ರೆ ಸಿಂಧೂ ನದಿ ಒಪ್ಪಂದವನ್ನು ರದ್ದುಗೊಳಿಸುವ ಮೂಲಕ ಪಾಕಿಸ್ತಾನಕ್ಕೆ ಶಾಕ್ ನೀಡಿತ್ತು. ಇದಕ್ಕೆ ಪಾಕಿಸ್ತಾನ ಭಾರೀ ವಿರೋಧ ವ್ಯಕ್ತಪಡಿಸಿತ್ತು. ಆದರೆ, ಈಗ ಒಂದು ಹೆಜ್ಜೆ ಮುಂದಿಟ್ಟಿರುವ ಮೋದಿ ಸರ್ಕಾರ ಹೊಸ ಡ್ಯಾಂ ನಿರ್ಮಾಣ ಕಾರ್ಯಕ್ಕೆ ವೇಗ ನೀಡಲು ಮುಂದಾಗಿದೆ. ಚೆನಾಬ್ ನದಿಗೆ ಕ್ವಾರ್ ಅಣೆಕಟ್ಟು ನಿರ್ಮಿಸುವ ಯೋಜನೆಯನ್ನು ಭಾರತ ರೂಪಿಸಿದೆ.





